ಅಸ್ಪೃಶ್ಯ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ನಿರಾಕರಿಸಿದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ
ಅಸ್ಪೃಶ್ಯ ಅಲೆಮಾರಿಗಳ ಸಾಪೇಕ್ಷ ಹಿಂದುಳಿದಿರುವಿಕೆಯನ್ನೇ ಅಲ್ಲಗೆಳೆದು ಮಹಾದ್ರೋಹ!
11-12-2025ರ ಕ್ಯಾಬಿನೆಟ್ ಸಭೆಯಲ್ಲಿ ಸಿದ್ದರಾಮಯ್ಯ ಸರಕಾರ ಒಳಮೀಸಲಾತಿಯ ಬಗ್ಗೆ ನ್ಯಾ.ನಾಗಮೋಹನ್ ದಾಸ್ ಕೊಟ್ಟ 1:6:5:4:1 ಸೂತ್ರವನ್ನು ತಿರಸ್ಕರಿಸಿ ಅತ್ಯಂತ ಹಿಂದುಳಿದ 59 ಅಸ್ಪೃಶ್ಯ ಅಲೆಮಾರಿ ಜಾತಿಗಳನ್ನು ಕಡಿಮೆ ಹಿಂದುಳಿದ ಸ್ಪೃಶ್ಯ ಜಾತಿಗಳೊಡನೆ ಸೇರಿಸಿ ಜಾರಿ ಮಾಡಿರುವ 6:6:5 ಸೂತ್ರವನ್ನೇ ಕಾಯ್ದೆಯಾಗಿ ಮಾಡಲು ತೀರ್ಮಾನಿಸಿದೆ.
ಅದೇ ಸಮಯದಲ್ಲಿ ಸರಕಾರದ ಈ ಸೂತ್ರವನ್ನು ಪ್ರಶ್ನಿಸಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟವು ಹೈಕೋರ್ಟಿನಲ್ಲಿ ಹೂಡಿದ ದಾವೆಗೆ (WP 28612/2025) 2-12-2025 ರಂದು ಕರ್ನಾಟಕ ಸರ್ಕಾರ ಆಕ್ಷೇಪಗಳನ್ನು ಸಲ್ಲಿಸಿದೆ.
ಆ ಆಕ್ಷೇಪಗಳು ಈವರೆಗೆ ಅಲೆಮಾರಿ ಸಮುದಾಯಗಳಿಗೆ ಸರಕಾರ ಕೊಡುತ್ತಾ ಬಂದಿದ್ದ ಭರವಸೆಗಳೆನ್ನೆಲ್ಲಾ ಮತ್ತಷ್ಟು ಹುಸಿಗೊಳಿಸಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಪರಿಶಿಷ್ಟ ಜಾತಿಗಳ ಗುಂಪಿನಲ್ಲಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳು ಇತರ ಜಾತಿಗಳಿಗಿಂತ ಸಾಪೇಕ್ಷವಾಗಿ ಹೆಚ್ಚು ಹಿಂದುಳಿದಿದ್ದಾರೆ ಎನ್ನುವುದನ್ನೇ ತಾತ್ವಿಕವಾಗಿ ನಿರಾಕರಿಸಿದೆ. ಇದು ಶೇ. 1 ರ ಮೀಸಲಾತಿ ನಿರಾಕರಣೆಗಿಂತ ದೊಡ್ಡ ದ್ರೋಹವಾಗಿದೆ.
ಅಷ್ಟು ಮಾತ್ರವಲ್ಲದೆ, ಅಸ್ಪೃಶ್ಯ ಅಲೆಮಾರಿಗಳು ಸರಕಾರ 6:6:5 ಸೂತ್ರವನ್ನು ರದ್ದುಗೊಳಿಸಬೇಕೆಂದು ಹೂಡಿದ್ದ ದಾವೆಗೆ ಆಕ್ಷೇಪಣೆಗಳನ್ನು ಸಲ್ಲಿಸಿರುವ ಸರಕಾರ ಆ ಪ್ರಕ್ರಿಯೆಯಲ್ಲಿ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ, ಅನುಸರಿಸಿದ ಮಾನದಂಡಗಳೇ ಮೂಲಭೂತವಾಗಿ ತಪ್ಪೆಂದು ವಾದಿಸಿದೆ.
ಸರಕಾರದ ಪ್ರಕಾರ :
1.ನಾಗಮೋಹನ್ ದಾಸ್ ವರದಿಯಲ್ಲಿ ಗ್ರೂಪ್ A ನಲ್ಲಿ ಸೇರಿಸಲ್ಪಟ್ಟಿದ್ದ 59 ಅಲೆಮಾರಿ ಜಾತಿಗಳು ಗ್ರೂಪ್ Dಗೆ ಸೇರಿಸಲ್ಪಟ್ಟಿರುವ ಲಂಬಾಣಿ, ಭೋವಿ, ಕೊರಮ ಕೊರಚ ಸಂಬಂಧಿತ ಜಾತಿಗಳಿಗಿಂತ ಸಾಮಾಜಿಕವಾಗಿ ಹಿಂದುಳಿದಿಲ್ಲ. ಹೀಗಾಗಿ ಅಲೆಮಾರಿಗಳನ್ನು ಆ ಗುಂಪಿನಲ್ಲಿ ಸೇರಿಸಿರುವುದರಲ್ಲಿ ತಪ್ಪಿಲ್ಲ.
2.ಗ್ರೂಪ್ A ನಲ್ಲಿ ಸೇರಿಸಲ್ಪಟ್ಟಿದ್ದ 59 ಅಲೆಮಾರಿ ಜಾತಿಗಳು ಇತರ ಎಸ್ಸಿ ಜಾತಿಗಳಿಗಿಂತ ಹೇಗೆ ಸಾಮಾಜಿಕವಾಗಿ ಹಿಂದುಳಿದಿವೆ ಎಂದು ಸಾಬೀತು ಮಾಡುವುದರಲ್ಲಿ ನಾಗಮೋಹನ್ ದಾಸ್ ಆಯೋಗ ವಿಫಲವಾಗಿದೆ.
ಅದಕ್ಕೆ ಸರಕಾರವು ಮುಂದಿಟ್ಟಿರುವ ಅಪಾಯಕಾರಿ ಮತ್ತು ವಿತಂಡ ವಾದ ಹೀಗಿದೆ :
59 ಅಸ್ಪೃಶ್ಯ ಅಲೆಮಾರಿ ಜಾತಿಗಳಲ್ಲಿ 4-5 ಜಾತಿಗಳು (ಬುಡ್ಗ ಜಂಗಮ, ಚನ್ನ ದಾಸರ್, ಹೊಲೆಯ ದಾಸರ್, ಸಿಳ್ಳೆಕ್ಯಾ , ಸುಡುಗಾಡು ಸಿದ್ದ ...) ಸರಕಾರಿ ಹುದ್ದೆಗಳಲ್ಲಿ ಹೆಚ್ಚಿನ ಪ್ರಮಾಣಾತ್ಮಕ ಪ್ರಾತಿನಿಧ್ಯವನ್ನೂ ಹೊಂದಿವೆ. ಹಾಗೂ ಕೆಲವು ಪರಿಶಿಷ್ಟ ಜಾತಿಗಳಿಗೆ ಹೋಲಿಸಿದಲ್ಲಿ ಹೆಚ್ಚಿನ ಸಾಕ್ಷರತೆಯನ್ನು ಪಡೆದಿವೆ. ಮತ್ತು ಅಲೆಮಾರಿಗಳ ಕೆಲವೇ ಕೆಲವು ಜಾತಿಗಳ ಭೂ ಹಿಡುವಳಿ ಗ್ರೂಪ್ B ನಲ್ಲಿ ಸೇರಿಸಲ್ಪಟ್ಟ ಕೆಲವು ಜಾತಿಗಳಿಗಿಂತ (ಮಾಲಾ ಹನ್ನಾನಿ, ಪರಯನ್, ಮಾಹ್ಯವಂಶಿ ) ಹೇಗೆ ಹೆಚ್ಚಿದೆ.
ಮೇಲ್ನೋಟಕ್ಕೆ ಸರಕಾರದ ಈ ಮಾಹಿತಿ ಸರಿ ಎಂದು ಭಾವಿಸಿದರೂ ಅದು ಅನ್ವಯವಾಗುವುದು 59 ಜಾತಿಗಳಲ್ಲಿ ಕೇವಲ 4ಕ್ಕೆ. ಹಾಗಿದ್ದಲ್ಲಿ ಉಳಿದ 55 ಜಾತಿಗಳನ್ನು ಮುಂದುವರಿದ ಗ್ರೂಪಿಗೆ ಸೇರಿಸಿದ್ದೇಕೆ?
ಹೀಗೆ ಸರಕಾರ ಅಸಮಂಜಸ ಹಾಗೂ ಅತಾರ್ಕಿಕ ಮತ್ತು ಆಯ್ದ ಉದಾಹರಣೆಗಳನ್ನು ನೀಡಿ ಅಸ್ಪೃಶ್ಯ ಅಲೆಮಾರಿಗಳ ಬೆನ್ನಿಗಿರಿದಿದೆ..
3.ಇತರ ಕಡೆಗಳಲ್ಲಿ ನಾಗಮೋಹನ್ ದಾಸ್ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಲು ಸರಿಯಾದ ಮಾನದಂಡಗಳನ್ನು ಬಳಸಿದೆ ಎಂದು ಒಪ್ಪಿಕೊಳ್ಳುವ ಸರಕಾರ ಅಲೆಮಾರಿಗಳಿಗೆ ಪ್ರತ್ಯೇಕ ಗ್ರೂಪ್ ಮಾಡುವಾಗ ಕೇವಲ ಜನಸಂಖ್ಯಾ ಮಾನದಂಡವನ್ನು ಮಾತ್ರ ಬಳಸಿರುವುದು ವೈಜ್ಞಾನಿಕ ಮತ್ತು ಸುಪ್ರೀಂ ಕೋರ್ಟ್ ತೀರ್ಮಾನದ ಆಶಯಗಳಿಗೆ ವಿರುದ್ಧ ಎಂದು ತಿರಸ್ಕರಿಸುತ್ತದೆ!
4.ಹೀಗಾಗಿ ನ್ಯಾ.ನಾಗಮೋಹನ್ದಾಸ್ ಆಯೋಗ ಎಸ್ಸಿ ಸಮುದಾಯಗಳೊಳಗೆ ಸಾಪೇಕ್ಷ ಹಿಂದುಳಿದಿರುವಿಕೆಯನ್ನು ಆಧರಿಸಿ ಮಾಡಿದ ಗುಂಪುಗಳ ನಡುವೆ ನೈಜ ವ್ಯತ್ಯಾಸವನ್ನು ಮತ್ತು ಗುಂಪುಗಳೊಳಗೆ ನೈಜ ಸಾಮ್ಯತೆಯನ್ನು ಸಾಬೀತು ಮಾಡಿಲ್ಲ ಎಂದು ಘೋಷಿಸಿ ಪರೋಕ್ಷವಾಗಿ ನ್ಯಾ.ನಾಗಮೋಹನ್ ದಾಸ್ ವರದಿಯನ್ನೇ ತಿರಸ್ಕರಿಸುತ್ತದೆ .
5.ಒಳಮೀಸಲಾತಿಯನ್ನು ನೀಡುವಾಗ ಅನಗತ್ಯ ಅತಿ ಸೂಕ್ಷ್ಮ ವರ್ಗೀಕರಣ (Micro Classification) ಮತ್ತು ಆಡಳಿತ ಸಾಮರ್ಥ್ಯದ ಮೇಲೆ ಧಕ್ಕೆಯಾಗಬಾರದು ಎಂಬ ನೀತಿಗಳನ್ನು ಅನುಸರಿಸಿರುವುದಾಗಿಯೂ ಹೇಳಿಕೊಂಡಿದೆ.
6.ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯು ಅತ್ಯಂತ ಹಿಂದುಳಿದವರಿಗೆ ಹೆಚ್ಚು ಮೀಸಲಾತಿ ಕೊಡುವುದೇ ಸಾಮಾಜಿಕ ನ್ಯಾಯ ಎಂದು ಹೇಳಿದ್ದರೂ ಅಲೆಮಾರಿ ಸಮುದಾಯಗಳಿಗೆ ಕೊಟ್ಟಿದ್ದು ಕೇವಲ ಶೇ.1 ಮೀಸಲಾತಿ. ಆದ್ದರಿಂದಲೂ ಆ ಸಮುದಾಯಗಳನ್ನು ಶೇ.5 ಮೀಸಲಾತಿ ಇರುವ ಗ್ರೂಪ್ C ಗೆ ಸೇರಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.
ಹೀಗಾಗಿ ವಿಷಯ ಸ್ಪಷ್ಟ. ಇದುವರೆಗೆ ಎಸ್ಸಿ ಸಮುದಾಯಗಳಲ್ಲೇ ಅತ್ಯಂತ ಹಿಂದುಳಿದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ 1 ಶೇ. ಮೀಸಲಾತಿಯನ್ನು ಕೊಡುವ ಬಗ್ಗೆ ಪೂರಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಮತ್ತು ದಿಲ್ಲಿಯಲ್ಲಿ ಕೊಟ್ಟ ಭರವಸೆಗಳೆಲ್ಲಾ ಹಸಿ ಸುಳ್ಳು.
ಅಷ್ಟು ಮಾತ್ರವಲ್ಲ. ಈವರೆಗೆ ಸರಕಾರ ತಾವು ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ನೀಡಲು ಬದ್ಧ. ಆದರೆ ಈ ಸದ್ಯಕ್ಕೆ ಅದನ್ನು ಜಾರಿ ಮಾಡದೆ ಇರುವುದಕ್ಕೆ ತಾತ್ಕಾಲಿಕ ಮತ್ತು ಆಡಳಿತಾತ್ಮಕ ಕಾರಣಗಳಿವೆ ಎಂದು ಹೋರಾಟಗಾರರ ಮುಂದೆ ಅಲವತ್ತುಕೊಳ್ಳುತ್ತಿದ್ದರು. ಆದರೆ ಈಗ ಸರಕಾರ ಕೋರ್ಟಿನಲ್ಲಿ ದಾಖಲಿಸಿರುವುದು ಯಾವುದೇ ಆಡಳಿತಾತ್ಮಕ ಕಾರಣಗಳಲ್ಲ. ಬದಲಿಗೆ "...ಅಸ್ಪೃಶ್ಯ ಅಲೆಮಾರಿಗಳು ಇತರ ಎಸ್ಸಿ ಸಮುದಾಯಗಳಿಗಿಂತ ಸಾಮಾಜಿಕವಾಗಿ ಹಿಂದುಳಿದಿಲ್ಲ " ಎಂಬ ನಿಲುವನ್ನು ಪ್ರತಿಪಾದಿಸಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿಯ ಅಗತ್ಯವನ್ನೇ ತಾತ್ವಿಕವಾಗಿ ನಿರಾಕರಿಸಿದೆ.
ಇದು ಮಹಾದ್ರೋಹ. ಇದನ್ನು ನಾಡಿನ ಎಲ್ಲಾ ನೈಜ ಪ್ರಗತಿಪರರು ಖಂಡತುಂಡವಾಗಿ ಖಂಡಿಸ ಬೇಕು. ಸಿದ್ದರಾಮಯ್ಯ ಕುರುಡಿನಿಂದ ಹೊರಬಂದು ಅಲೆಮಾರಿಗಳ ಜೊತೆಗೆ ನಿಲ್ಲಬೇಕು. ಅಲೆಮಾರಿಗಳ ವಿಷಯದಲ್ಲಿ, ದೇವನಹಳ್ಳಿ ರೈತರ ವಿಷಯದಲ್ಲಿ, ಸರಕಾರಿ ಶಾಲೆಗಳನ್ನು ಮುಚ್ಚುವ ವಿಷಯದಲ್ಲಿ, ಜಾತಿಗಳ ಸಾಮಾಜಿಕ ಹಿಂದುಳಿದಿರುವಿಕೆಯ ಸಮೀಕ್ಷೆಯ ವಿಷಯದಲ್ಲಿ, ಕಾರ್ಮಿಕರ ಹಕ್ಕುಗಳ ವಿಷಯದಲ್ಲಿ ... ಪ್ರತಿಯೊಂದರಲ್ಲೂ ಕಾಂಗ್ರೆಸ್ ಸರಕಾರ ಸಿಹಿ ಮಾತುಗಳಿಂದ ಹೋರಾಟಗಾರರಿಗೆ ಮಂಕುಬೂದಿ ಎರಚುತ್ತಿದೆ.
ಸಿದ್ದರಾಮಯ್ಯ ಸರಕಾರಕ್ಕೆ ಮನವರಿಕೆ ಮಾಡಿದರೆ ಬದಲಾಗುತ್ತಾರೆ ಎಂಬುದು ಹುಸಿ ಎಂಬುದು ಈಗಲಾದರೂ ಅರಿವಾಗಬೇಕಿದೆ.
ಅದು ಅರಿವಿನ ಕೊರತೆಯಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆ. ಮೇಲ್ಜಾತಿ ಮೇಲ್ವರ್ಗದ, ಬಂಡವಾಳಶಾಹಿ ಆಸಕ್ತಿಗಳನ್ನು ಎದುರು ಹಾಕಿಕೊಂಡು ದಲಿತ-ದಮನಿತ-ಶೋಷಿತ ಜನತಾ ಹಿತಾಸಕ್ತಿಯ ಪರವಾಗಿ ನಿಲ್ಲಲಾಗದ ವರ್ಗ ಮತ್ತು ಜಾತಿ ಹಿತಾಸಕ್ತಿ. ಆದ್ದರಿಂದ ಪರಿಹಾರ ಇರುವುದು ಸಮಲೋಚನೆ, ಸಮನ್ವಯ, ಸಂವಾದಗಳಲ್ಲ. ಬೀದಿಯಲ್ಲಿ ಕಟ್ಟಬೇಕಾದ ದಮನಿತ-ದಲಿತ ಸಮುದಾಯಗಳ ರಾಜಿರಹಿತ ಹೋರಾಟದಲ್ಲಿ.
ಅಲ್ಲವೇ?
-ಶಿವಸುಂದರ್