ಜೂ.12ರವರೆಗೆ ಯಾವುದೇ ನಿರ್ಧಾರಕ್ಕೆ ಬಾರದಿರಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2018-06-08 16:28 GMT

ಬೆಂಗಳೂರು, ಜೂ.8: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ಅಧ್ಯಕ್ಷ ಹುದ್ದೆಗೆ ಎ.ಮುನಿಯಪ್ಪ ಹಾಗೂ ಸಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಹುದ್ದೆಗೆ ಎಂ.ಆರ್. ವೆಂಕಟೇಶ್ ಅವರನ್ನು ನಾಮನಿರ್ದೇಶನ ಮಾಡಿದ್ದ ಆದೇಶ ರದ್ದುಗೊಳಿಸುವ ವಿಚಾರದಲ್ಲಿ ಜೂನ್ 12ರವರೆಗೆ ಆತುರದ ಕ್ರಮ ಜರುಗಿಸದಂತೆ ಸರಕಾರಕ್ಕೆ ಹೈಕೋರ್ ಮಧ್ಯಂತರ ನಿರ್ದೇಶನ ನೀಡಿದೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ನಂತರ ವಿವಿಧ ನಿಗಮ-ಮಂಡಲಿಗಳ ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ ರದ್ದುಗೊಳಿಸಲು ರಾಜ್ಯ ಸರಕಾರ ಕೈಗೊಂಡಿರುವ ಕ್ರಮ ಪ್ರಶ್ನಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ಅಧ್ಯಕ್ಷ ಎ.ಮುನಿಯಪ್ಪ ಹಾಗೂ ಸಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಹೈಕೋರ್ಟ್‌ಗೆ ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಶುಕ್ರವಾರ ಈ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ ಅರ್ಜಿಗಳನ್ನು ಜೂ.12ಕ್ಕೆ ಮುಂದೂಡಿತು. ಅಲ್ಲದೆ, ಮುಂದಿನ ವಿಚಾರಣೆಗೆ ಅರ್ಜಿದಾರರ ವಿರುದ್ಧ ರಾಜ್ಯ ಸರಕಾರ ಆತುರದ ಕ್ರಮ ಜರುಗಿಸಬಾರದು ಎಂದು ನಿರ್ದೇಶಿಸಿತು.

ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ನಂತರ ಮೇ 29ರಂದು, ಎಲ್ಲ ನಿಗಮ ಮಂಡಳಿಗಳ ಹಾಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನಾಮನಿರ್ದೇಶನ ರದ್ದುಪಡಿಸುವ ಕುರಿತು ತೀರ್ಮಾನಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿರುವ ಅರ್ಜಿದಾರರು, ಹಿಂದಿನ ಕಾಂಗ್ರೆಸ್ ಸರಕಾರವು ವಿವೇಚನಾ ಅಧಿಕಾರ ಬಳಸಿ ತಮ್ಮನ್ನು ಆಯೋಗದ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನಮಾಡಲಾಗಿತ್ತು. ಹೀಗಿದ್ದರೂ ಇದೀಗ ಏಕಾಏಕಿ ತಮ್ಮ ನಾಮನಿರ್ದೇಶನ ಆದೇಶ ರದ್ದುಪಡಿಸಿ ಸರಕಾರ ಆದೇಶಿಸಿದೆ ಎಂದು ದೂರಿದ್ದಾರೆ.

ಜತೆಗೆ, ಆದೇಶ ಹೊರಡಿಸುವುದಕ್ಕೂ ಮುನ್ನ ತಮಗೆ ನೋಟಿಸ್ ನೀಡಿಲ್ಲ. ಇದು ಸಹಜ ನ್ಯಾಯದ ಉಲ್ಲಂಘನೆ. ಅಲ್ಲದೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಸರಕಾರ ಈ ಆದೇಶ ಮಾಡಿದೆ. ಹಾಗೆಯೇ, ಸಂಪುಟ ಸಚಿವ ರಚನೆಯಾಗುವ ಮುನ್ನವೇ ಸರಕಾರ ಆದೇಶ ಹೊರಡಿಸಿರುವುದು ಸಂವಿಧಾನದ ಉಲ್ಲಂಘನೆ. ಹೀಗಾಗಿ, ತಮ್ಮ ನಾಮ ನಿರ್ದೇಶನ ರದ್ದುಪಡಿಸಿದ ಸರಕಾರದ ಆದೇಶ ರದ್ದುಪಡಿಸಬೇಕು. ಆಯೋಗದ ಅಧ್ಯಕ್ಷ ಸ್ಥಾನದಲ್ಲಿ ತಮ್ಮನ್ನು ಮುಂದುವರಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News