ಒತ್ತುವರಿಯಾಗಿರುವ ಐದು ಸಾವಿರ ಎಕರೆ ಬಿಡಿಎ ಭೂಮಿ ಸಕ್ರಮ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಜೂ.18: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಒತ್ತುವರಿಯಾಗಿರುವ ಐದು ಸಾವಿರ ಎಕರೆ ಭೂಮಿಯನ್ನು ಸಕ್ರಮಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ನಗರದ ಶಾಸಕರು, ಸಂಸದರು, ಮೇಯರ್, ಉಪ ಮೇಯರ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಸುಮಾರು 25 ಸಾವಿರ ಕೋಟಿ ರೂ.ವೌಲ್ಯದ ಭೂಮಿ ಇದಾಗಿದ್ದು, ಇದನ್ನು ಸಕ್ರಮಗೊಳಿಸಿದರೆ ರಾಜ್ಯ ಸರಕಾರಕ್ಕೆ ಆದಾಯ ಬರಲಿದೆ ಎಂದ ಅವರು, ಒತ್ತುವರಿ ತೆರವುಗೊಳಿಸಿ ಆಸ್ತಿಯನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಕಾನೂನು ಹೋರಾಟದ ಮೂಲಕವೆ ರಕ್ಷಣೆ ಮಾಡುತ್ತೇವೆ ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಸೇರ್ಪಡೆಯಾದ 110 ಹಳ್ಳಿಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಈ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ನಗರದ ಸಂಚಾರ ದಟ್ಟಣೆ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದಂತೆ ಬಿ.ಎಸ್.ಪಾಟೀಲ್ ನೀಡಿರುವ ವರದಿಯಲ್ಲಿನ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಕೇಕ್ ಕತ್ತರಿಸಿದಂತೆ ಬಿಬಿಎಂಪಿಯನ್ನು ವಿಭಜನೆ ಮಾಡುವುದಿಲ್ಲ. ವರದಿಯನ್ನು ಸಮಗ್ರವಾಗಿ ಅಧ್ಯಯನ, ಚರ್ಚೆ ಮಾಡಿದ ಬಳಿಕವಷ್ಟೇ ಕ್ರಮ ಕೈಗೊಳ್ಳುತ್ತೇವೆ ಎಂದು ಪರಮೇಶ್ವರ್ ಹೇಳಿದರು.
ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ಕುರಿತು ಮೇಯರ್ ಸಂಪತ್ ರಾಜ್ ನೀಡಿದ ಅಂಕಿ ಅಂಶಗಳಿಂದ ಆಕ್ರೋಶಗೊಂಡ ಪರಮೇಶ್ವರ್, ಯಾರನ್ನು ಮುರ್ಖ ರನ್ನಾಗಿಸುತ್ತಿದ್ದೀರಾ? ಅಂದು ಆರು ಸಾವಿರ ಗುಂಡಿ ಮುಚ್ಚಿರುವುದಾಗಿ ಹೇಳಿದ್ದೀರಾ. ಇಂದು ಎಂಟು ಸಾವಿರ ಗುಂಡಿ ಮುಚ್ಚಿದ್ದೇವೆ ಎನ್ನುತ್ತಿದ್ದೀರಾ ಎಂದರು.
ಪೈತಾನ್ ಯಂತ್ರ ಐದು ನಿಮಿಷದಲ್ಲಿ ಒಂದು ಗುಂಡಿ ಮುಚ್ಚುತ್ತದೆ ಎಂದು ಹೇಳುತ್ತೀರಾ. ಹಾಗಾದರೆ, ನಾಲ್ಕು ದಿನಗಳಲ್ಲಿ ಎಲ್ಲ ಗುಂಡಿಗಳನ್ನು ಮುಚ್ಚುತ್ತೀರಾ? ಎಂದು ಪ್ರಶ್ನಿಸಿದ ಪರಮೇಶ್ವರ್, ನಾನೇ ಸ್ವತಃ ಪೈತಾನ್ ಯಂತ್ರದ ಕಾರ್ಯಕ್ಷಮತೆ ನೋಡಲು ಹೋಗುತ್ತೇನೆ ಎಂದರು.
ನಗರದಲ್ಲಿ ಪ್ರತಿದಿನ ಎಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂಬುದರ ಕುರಿತು ನನಗೆ ಪ್ರತಿದಿನ ವರದಿ ನೀಡಬೇಕು. ಸಮ್ಮಿಶ್ರ ಸರಕಾರಕ್ಕೆ ಮುಜುಗರವಾಗದಂತೆ ಎಚ್ಚರಿಕೆ ವಹಿಸುವಂತೆ ಮೇಯರ್ಗೆ ಸೂಚಿಸಿದ ಪರಮೇಶ್ವರ್, ಸುಮಾರು 800 ರಸ್ತೆಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ವೈಟ್ಟಾಪಿಂಗ್ ಹಾಗೂ ಟೆಂಡರ್ಶ್ಯೂರ್ ಮೂಲಕ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು. ಬಿಬಿಎಂಪಿ ಅನುದಾನದಲ್ಲೆ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದರು.
ತೆರಿಗೆ ಸಂಗ್ರಹ ಸಮರ್ಪಕವಾಗಿ ಆಗುತ್ತಿಲ್ಲ. ಕೋಟ್ಯಂತರ ರೂ.ತೆರಿಗೆ ಸಂಗ್ರಹ ಆಗಬೇಕಿದೆ. ಇದಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ, ತೆರಿಗೆ ಸಂಗ್ರಹ ಸಂಬಂಧ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಪರಮೇಶ್ವರ್ ಹೇಳಿದರು. ಬೆಂಗಳೂರಿನಲ್ಲಿ ಕಸದ ಸಮಸ್ಯೆಯೂ ಹೆಚ್ಚಿದೆ. ಇದರಿಂದಾಗಿ, ನಗರಕ್ಕೆ ಅಪಕೀರ್ತಿ ಬರುತ್ತಿದೆ. ಪ್ರತಿನಿತ್ಯ ನಾಲ್ಕು ಸಾವಿರ ಮೆಟ್ರಿಕ್ ಟನ್ ಕಸ ಉತ್ಪಾದನೆಯಾಗುತ್ತಿದೆ. ಕೇವಲ ಅಪಾರ್ಟ್ಮೆಂಟ್ಗಳಿಂದಲೇ ಎರಡು ಸಾವಿರ ಮೆಟ್ರಿಕ್ ಟನ್ ಕಸ ಉತ್ಪಾದನೆಯಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಗುತ್ತಿಗೆದಾರರಿಗೆ ನೀಡಬೇಕಿದ್ದ ಬಾಕಿ ಹಣವನ್ನು ನೀಡಲಾಗುತ್ತಿದೆ. ಗುತ್ತಿಗೆದಾರರ ಜೊತೆ ಚರ್ಚೆ ಮಾಡಲಾಗಿದ್ದು, ಒಂದು ವಾರದಲ್ಲಿ ಎಲ್ಲ ಕಡೆ ಕಸ ವಿಲೇವಾರಿ ಯಾಗಲಿದೆ. ನಗರದ ಕಸ ಸಂಸ್ಕರಣೆ ಮಾಡಲು ಆರು ಸಂಸ್ಕರಣ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ನಾನು ಎರಡು ಘಟಕಗಳಿಗೆ ಭೇಟಿ ನೀಡಿದ್ದೇನೆ ಎಂದು ಅವರು ಹೇಳಿದರು.
ಕಸವನ್ನು ಸುಡಲು ನಿರ್ಧರಿಸಲಾಗಿದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಸದ್ಯಕ್ಕೆ ಎರಡು ಘಟಕಗಳಲ್ಲಿ ಕಸವನ್ನು ಸುಡಲು ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲ ಘಟಕಗಳಿಗೂ ಅನುಮತಿ ನೀಡಲಾಗುವುದು ಎಂದು ಪರಮೇಶ್ವರ್ ಹೇಳಿದರು.
ಶಾಸಕರು, ಸಂಸದರು ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳ ಸಮಸ್ಯೆಗಳ ಜೊತೆಗೆ ಒಟ್ಟಾರೆ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಇಂದಿನ ಸಭೆಯಲ್ಲಿ ಕಂಡುಕೊಂಡಿದ್ದೇವೆ ಎಂದು ಅವರು ಹೇಳಿದರು.
ಸಭೆಯಲ್ಲಿ ಬಿಬಿಎಂಪಿ, ಬಿಡಿಎ ಅಧಿಕಾರಿಗಳು, ಶಾಸಕರು, ಸಂಸದರು, ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.