ಬೆಂಗಳೂರು: ಗುತ್ತಿಗೆದಾರರಿಗೆ ಮಹಿಳೆಯಿಂದ ವಂಚನೆ; ಆರೋಪ
ಬೆಂಗಳೂರು, ಜೂ.24: ಕಂಪೆನಿಯೊಂದರಲ್ಲಿ ಎಲೆಕ್ಟ್ರಿಕಲ್ ಕೆಲಸ ಕೊಡಿಸುವುದಾಗಿ ಇಬ್ಬರು ಗುತ್ತಿಗೆದಾರರನ್ನು ವಂಚಿಸಿ 8 ಲಕ್ಷ ರೂ. ಹಣದೊಂದಿಗೆ ಮಹಿಳಾ ಟೆಕ್ಕಿಯೊಬ್ಬಳು ಪರಾರಿಯಾಗಿದ್ದಾಳೆನ್ನಲಾದ ಘಟನೆ ಇಲ್ಲಿನ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮುಂಬೈ ಒರಾಕಲ್ ಇಂಡಿಯಾ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಸ್ಮತಿ ಖಾನಾಪುರ್ ವಂಚನೆ ಮಾಡಿರುವ ಟೆಕ್ಕಿ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ಬಸವೇಶ್ವರನಗರ ಮೂರನೆ ಹಂತ ಮಂಜುನಾಥನಗರದ ರವಿಕುಮಾರ್ ಮತ್ತು ಹೌಸಿಂಗ್ ಕಾಲೋನಿಯ ಶಂಕರ್ ವಂಚನೆಗೊಳಗಾಗಿದ್ದು, ಡೈರಿವೃತ್ತದ ಒರಾಕಲ್ ಕಂಪೆನಿಯಲ್ಲಿ ಶಂಕರ್ ಎಲೆಕ್ಟ್ರಿಕ್ ಕೆಲಸ ಮಾಡಿಸುತ್ತಿದ್ದ ಸ್ಮತಿ ಖಾನಾಪುರ್ ಪರಿಚಯವಾಗಿದೆ.
ಈ ವೇಳೆ ಪ್ರತಿಷ್ಠಿತ ಕಂಪೆನಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಎಲೆಕ್ಟ್ರಿಕಲ್ ಕಾಮಗಾರಿಯ ಗುತ್ತಿಗೆಯನ್ನು ಕೊಡಿಸುವುದಾಗಿ ನಂಬಿಸಿ 15 ಲಕ್ಷ ಕಮೀಷನ್ ನೀಡುವಂತೆ ಕೇಳಿ ಮುಂಗಡವಾಗಿ 5 ಲಕ್ಷ ಪಡೆದಿದ್ದಾಳೆ ಎನ್ನಲಾಗಿದೆ.
ಹಣ ನೀಡಿದ ನಂತರ ಶಂಕರ್ ಪದೇ ಪದೇ ಆಕೆಯ ಮೊಬೈಲ್ಗೆ ಕರೆ ಮಾಡಿದರೂ ಆಕೆ ಕರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಆತಂಕಕ್ಕೊಳಗಾಗಿ ಶಂಕರ್ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಜುನಾಥ್ನಗರದ ಗುತ್ತಿಗೆದಾರ ರವಿಕುಮಾರ್ಗೂ ಈ ಮಹಿಳೆ ಪರಿಚಯವಾಗಿದ್ದು, 3 ಲಕ್ಷ ರೂ ವಂಚನೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.