ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ವಾಗ್ಮೋರೆಯನ್ನು ಭೇಟಿಯಾದ ಪೋಷಕರು
Update: 2018-06-24 14:51 GMT
ಬೆಂಗಳೂರು, ಜೂ.24: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧಿತನಾಗಿರುವ ಪರಶುರಾಮ್ ವಾಗ್ಮೋರೆಯನ್ನು ಪೋಷರು ರವಿವಾರ ಭೇಟಿ ಮಾಡಿದರು.
ನಗರದ ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಆಗಮಿಸಿದ ತಂದೆ ಅಶೋಕ್ ವಾಗ್ಮೋರೆ ಹಾಗೂ ತಾಯಿ ಜಾನಕಿಭಾಯಿ ಭೇಟಿ ಮಾಡಿ, ಮಾತುಕತೆ ನಡೆಸಿದರು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾನಕಿಭಾಯಿ, ಮಗನಿಗೆ ಧೈರ್ಯದಿಂದ ಇರುವಂತೆ ಹೇಳಿದ್ದೇನೆ. ನ್ಯಾಯ ಸಿಗುತ್ತದೆ ಎಂದು ಧೈರ್ಯ ತುಂಬಿದ್ದೇನೆ. ಅಲ್ಲದೆ, ನಮ್ಮನ್ನು ನೋಡಿ ಪರಶುರಾಮ್ ಅಳಲಾರಂಭಿಸಿದ. ಅವನು ಮಾಡಿರಲಿಕ್ಕಿಲ್ಲ. ನನ್ನ ಮಗ ತುಂಬಾ ಮುಗ್ದನಿದ್ದಾನೆ ಎಂದು ಹೇಳಿ ಕಣ್ಣೀರು ಹಾಕಿದರು.
ತಾಯಿಯನ್ನು ನೋಡಿ ಪರಶುರಾಮ್ ಅಳುತ್ತಿದ್ದ. ಯಾವ ತಾಯಿಗೂ ಈ ಸ್ಥಿತಿ ಬರಬಾರದು. ಅವನಿಗೆ ನ್ಯಾಯ ದೊರೆಯಲಿದೆ ಎನ್ನುವ ವಿಶ್ವಾಸ ನಮ್ಮಲ್ಲಿ ಇಂದಿಗೂ ಜೀವಂತವಾಗಿದೆ ಎಂದು ವಾಗ್ಮೋರೆ ತಂದೆ ಅಶೋಕ್ ವಾಗ್ಮೋರೆ ತಿಳಿಸಿದರು.