ಕೋಮು ಹಲ್ಲೆಗಳನ್ನು ನಾಗರಿಕ ಸಮಾಜ ಪ್ರತಿರೋಧಿಸಲಿ: ಎಸ್ಐಒ ರಾಜ್ಯಾಧ್ಯಕ್ಷ ಮುಹಮ್ಮದ್ ರಫೀಕ್
ಬೆಂಗಳೂರು, ಜೂ.24: ದೇಶದಲ್ಲಿ ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಹಲ್ಲೆ ಪ್ರಕರಣಗಳು ಹೆಚ್ಚುತ್ತಲೇ ಸಾಗಿದೆ. ಈ ಹಲ್ಲೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ನಾಗರಿಕರ ಸಮಾಜ ಜಾಗೃತವಾಗಬೇಕಾಗಿದೆ ಎಂದು ಎಸ್ಐಒ ರಾಜ್ಯಾಧ್ಯಕ್ಷ ಮುಹಮ್ಮದ್ ರಫೀಕ್ ಆಶಿಸಿದರು.
ರವಿವಾರ ನಗರದ ಕ್ವೀನ್ ರಸ್ತೆಯಲ್ಲಿರುವ ಕೃಷಿ ಭವನದಲ್ಲಿ ಎಸ್ಐಒ ವತಿಯಿಂದ ಆಯೋಜಿಸಿದ್ದ ಈದ್ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋಮು ಸೌಹಾರ್ದತೆಯನ್ನು ಹಾಳು ಮಾಡುವಂತಹ ಶಕ್ತಿಗಳನ್ನು ನಾಗರಿಕರು ಬಹಿರಂಗವಾಗಿ ವಿರೋಧಿಸಿದಾಗ ಮಾತ್ರ ಶಾಂತಿಯುತ ಸಮಾಜವನ್ನು ನಿರ್ಮಿಸಲು ಸಾಧ್ಯವೆಂದು ತಿಳಿಸಿದರು.
ಕಳೆದ ಒಂದು ವರ್ಷದಲ್ಲಿ ನೂರಕ್ಕೂ ಹೆಚ್ಚು ಹತ್ಯೆ ಪ್ರಕರಣಗಳು ನಡೆದಿವೆ. ಇದನ್ನು ತಡೆಗಟ್ಟಲು ನ್ಯಾಯಾಂಗ, ಪೊಲೀಸ್ ವ್ಯವಸ್ಥೆಗೂ ಸಾಧ್ಯವಾಗದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣಗೊಂಡಿರುವುದು ಆತಂಕದ ವಿಷಯವಾಗಿದೆ. ಇಂತಹ ವಿಷಮಯ ಸ್ಥಿತಿಗೆ ಏನು ಕಾರಣವೆಂದು ಪ್ರತಿಯೊಬ್ಬ ನಾಗರಿಕನೂ ಗಂಭೀರವಾಗಿ ಯೋಚಿಸಬೇಕಾದ ಸಂದರ್ಭವಿದು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಯೆನಪೋಯ ವಿವಿಯ ಪ್ರಾಧ್ಯಾಪಕ ಡಾ.ಜಾವೀದ್ ಜಮೀಲ್, ಝಡ್ಎಸಿ ಸದಸ್ಯ ಅಕ್ಬರ್ ಅಲಿ ವೇದಿಕೆಯಲ್ಲಿದ್ದರು.