×
Ad

ಎರಡು ನೂತನ ಜೈಲುಗಳ ನಿರ್ಮಾಣಕ್ಕೆ ಸರಕಾರ ಚಿಂತನೆ

Update: 2018-06-30 21:42 IST

ಬೆಂಗಳೂರು, ಜೂ.30: ರಾಜ್ಯ ಕಾರಾಗೃಹಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳದ ಅಭಾವ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಮತ್ತೆರಡು ಜೈಲು ನಿರ್ಮಾಣಕ್ಕೆ ಸರಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ರಾಜ್ಯದ ಕೇಂದ್ರೀಯ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ, ಅಪರಾಧಿಗಳು ಹಾಗೂ ಮಹಿಳಾ ಕೈದಿಗಳು ಸೇರಿ ಒಟ್ಟು 3,226 ಕೈದಿಗಳನ್ನು ಇರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಜೈಲಿನಲ್ಲಿ ಪ್ರಸ್ತು 4,650 ಕೈದಿಗಳನ್ನು ಇರಿಸಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಹೈಕೋರ್ಟ್ ಕಾರಾಗೃಹಗಳಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಕೈದಿಗಳು ಹೆಚ್ಚಾಗಿರುವ ಮತ್ತು ಸಿಬ್ಬಂದಿಗಳ ಕೊರತೆಯಿರುವ ವಿಚಾರ ಸಂಬಂಧ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿತ್ತು. ಸುಪ್ರೀಂಕೋರ್ಟ್ ನಿರ್ದೇಶನದ ಮೇಲೆ ಸ್ವಯಂ ಪ್ರೇರಿತ ಅರ್ಜಿ ದಾಖಲಾಗಿತ್ತು. ಕೇಂದ್ರೀಯ, ಜಿಲ್ಲಾ ಮತ್ತು ತಾಲೂಕುಗಳು ಸೇರಿ ರಾಜ್ಯದಲ್ಲಿ 100ಕ್ಕೂ ಹೆಚ್ಚು ಕಾರಾಗೃಹಗಳಿವೆ. ನಿಗದಿಗಿಂತಲೂ ಈ ಜೈಲುಗಳಲ್ಲಿ ಶೇ.50 ರಿಂದ 150ರಷ್ಟು ಕೈದಿಗಳಿದ್ದಾರೆ. 

ಈ ಸಂಬಂಧ ಬಂಧಿಖಾನೆ ಇಲಾಖೆಯ ಎಡಿಜಿಪಿ ಎನ್.ಎಸ್.ಮೇಘರಿಕ್ ಪ್ರತಿಕ್ರಿಯಿಸಿದ್ದು, ಬೆಂಗಳೂರು ಮತ್ತು ಮಂಗಳೂರಿನಲ್ಲಿ 2 ಜೈಲುಗಳನ್ನು ಸ್ಥಾಪನೆ ಮಾಡುವಂತೆ ರಾಜ್ಯ ಸರಕಾರ ಈಗಾಗಲೇ ನಿರ್ಧಾರ ಕೈಗೊಂಡಿದ್ದು, ಜೈಲು ನಿರ್ಮಾಣಕ್ಕೆ ಯೋಜನೆಗಳು ಸಿದ್ಧಗೊಳ್ಳುತ್ತಿವೆ. ಪ್ರತಿ ಕಾರಾಗೃಹಕ್ಕೂ 10 ಎಕರೆ ಭೂಮಿ ಬೇಕಿದೆ. ಕಾರಾಗೃಹ ನಿರ್ಮಾಣಕ್ಕೆ ಭೂಮಿ ಸಿಕ್ಕಿದ್ದು, ಜೈಲು ಸ್ಥಾಪನೆಗೊಂಡ ಬಳಿಕ ಎಲ್ಲಾ ಸಮಸ್ಯೆಗಳು ದೂರಾಗಲಿದೆ ಎಂದು ಹೇಳಿದ್ದಾರೆ.

ಕಾರಾಗೃಹ ಇಲಾಖೆ ಈಗಾಗಲೇ 1,070 ವಾರ್ಡನ್‌ಗಳು ಮತ್ತು 32 ಜೈಲರ್‌ಗಳನ್ನು ನೇಮಕ ಮಾಡಿಕೊಂಡಿದೆ. ಹಲವು ವಿಭಾಗಗಳಲ್ಲಿ ಈಗಾಗಲೇ 2,100ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ತಿಳಿಸಿದ್ದಾರೆ. ವಿದೇಶಿ ಮಾದರಿ ಶೈಲಿಗಳನ್ನು ಅಳವಡಿಸಿಕೊಳ್ಳುವ ಬದಲಾಗಿ ಸ್ಥಳೀಯ ಅಗತ್ಯತೆಗಳಿಗೆ ತಕ್ಕಂತೆ ಜೈಲು ನಿರ್ಮಾಣ ಮಾಡಲು ಗೃಹ ಇಲಾಖೆ ಮೂಲಗಳು ಮಾಹಿತಿ ನೀಡಿದೆ.

ಸ್ಥಳದ ಅಭಾವದಿಂದಾಗಿ ಮಂಗಳೂರು ಜೈಲಿನಿಂದ ಹಲವು ಕೈದಿಗಳನ್ನು ಬೆಳಗಾವಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಕೈದಿಗಳನ್ನು ಸ್ಥಳಾಂತರ ಮಾಡಿದರೂ ಜೈಲಿಗಳಲ್ಲಿ ನಿಗದಿಗಿಂತಲೂ ಹೆಚ್ಚು ಕೈದಿಗಳಿದ್ದಾರೆ. ನೂತನ ಜೈಲು ನಿರ್ಮಾಣಗೊಂಡ ಬಳಿಕ ಸ್ಥಳಾಂತರಗೊಂಡ ಕೈದಿಗಳನ್ನು ಮರಳಿ ಕಾರಾಗೃಹಗಳಿಗೆ ಕರೆ ತರಲಾುತ್ತದೆ ಎಂದು ಮೂಲಗಳು ತಿಳಿಸಿವೆ.

ಅಪರಾಧಿಗಳಿಗೂ ಮೂಲಭೂತ ಹಕ್ಕುಗಳಿವೆ. ದೇಶದಲ್ಲಿರುವ ಹಲವು ಜೈಲಿಗಳಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆಯೇ ಹೆಚ್ಚಾಗಿವೆ. ಹಲವು ಜೈಲುಗಳಲ್ಲಿ ವಿಚಾರಧೀನ ಕೈದಿಗಳಾಗಿಯೇ ಹಲವರು ಜೈಲುಗಳಲ್ಲಿ ಹಲವು ವರ್ಷಗಳಿಂದಲೂ ಇದ್ದಾರೆಂದು ಹಿರಿಯ ವಕೀಲರೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News