×
Ad

ಬೇರೆಯವರ ಮಕ್ಕಳನ್ನು ತೋರಿಸಿ ಬ್ಯಾಂಕ್‌ನಿಂದ ಸಾಲ ಪಡೆದ ವ್ಯಕ್ತಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

Update: 2018-07-01 18:28 IST

ಬೆಂಗಳೂರು, ಜು.1: ಬೇರೆಯವರ ಮಕ್ಕಳನ್ನು ತನ್ನ ಮಕ್ಕಳೆಂದು ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿನಿಂದ 11 ಲಕ್ಷ ರೂ. ಸಾಲ ಪಡೆದ ಅಪರೂಪದ ಪ್ರಕರಣವೊಂದು ರಾಜ್ಯ ಹೈಕೋರ್ಟ್ ಮುಂದೆ ಬಂದಿದೆ.

ದಾವಣಗೆರೆ ಜಿಲ್ಲೆಯ ರಾಮಗೊಂಡನಹಳ್ಳಿಯ ವಾಸಿ ಎ.ಆರ್.ನಾಗರಾಜಪ್ಪ ನಕಲಿ ಮಕ್ಕಳ ಸೃಷ್ಟಿಕರ್ತ. ಪಿತ್ರಾರ್ಜಿತ ಆಸ್ತಿ ಅಡವಿಟ್ಟು ಬ್ಯಾಂಕ್‌ನಿಂದ ಸಾಲ ಪಡೆದ ಈ ವ್ಯಕ್ತಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.

ಪ್ರಕರಣದ ಹಿನ್ನೆಲೆ: 53 ವರ್ಷದ ಎ.ಆರ್.ನಾಗರಾಜಪ್ಪನಿಗೆ ಮಾಯಕೊಂಡ ಹೋಬಳಿಯ ಬೇರೆ ಬೇರೆ ಸರ್ವೇ ನಂಬರ್‌ನಲ್ಲಿ ಪಿತ್ರಾರ್ಜಿತವಾಗಿ ಬಂದ 9 ಎಕರೆ ಜಮೀನು ಇತ್ತು. ವೈಯಕ್ತಿಕ ಹಣಕಾಸು ಸಮಸ್ಯೆ ನೀಗಿಸಿಕೊಳ್ಳಲು ಆತ ಆಸ್ತಿಯನ್ನು ಬ್ಯಾಂಕ್‌ನಲ್ಲಿ ಅಡವಿಡಲು ತನ್ನಿಬ್ಬರು ಮಕ್ಕಳಾದ ಲಲಿತಾ ಹಾಗೂ ರಂಜನಿ ಮತ್ತು ಹೆಂಡತಿಯನ್ನು ಕೇಳಿದ್ದನು. ಅದಕ್ಕೆ ಆ ಮೂವರೂ ವಿರೋಧ ವ್ಯಕ್ತಪಡಿಸಿ, ಆಸ್ತಿ ಅಡಯಿಟ್ಟು ಸಾಲ ಪಡೆಯಬೇಕಾದ ಅಗತ್ಯವಿಲ್ಲ ಎಂದಿದ್ದರು. ಅಷ್ಟಕ್ಕೆ ಸುಮ್ಮನಾಗದ ನಾಗರಾಜಪ್ಪ, ಬೇರೆಯವರ ಮಕ್ಕಳನ್ನು ತನ್ನ ಮಕ್ಕಳೆಂದು ದಾಖಲೆಗಳನ್ನು ಸೃಷ್ಟಿಸಿ ಆ್ಯಕ್ಸಿಸ್ ಬ್ಯಾಂಕ್‌ಗೆ ಕರೆದೊಯ್ದು 11 ಲಕ್ಷ ರೂ. ಸಾಲ ಪಡೆದಿದ್ದರು. 2017ರ ಸೆ.5ರಂದು ಉಪನೋಂದಣಾಧಿಕಾರಿ ಕಚೇರಿಗೂ ಆ ನಕಲಿ ಮಕ್ಕಳನ್ನೆ ಕರೆದೊಯ್ದು ಸಹಿ ಹಾಕಿಸಿದ್ದರು.

ಕೆಲ ತಿಂಗಳುಗಳ ನಂತರ ಹೇಗೊ ಈ ವಿಷಯ ತಿಳಿದುಕೊಂಡ ಮಗಳು ಲಲಿತಾ, ತಂದೆಯ ವಿರುದ್ಧವೇ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಅಂದಿನಿಂದ ನಾಗರಾಜಪ್ಪನ ಬಂಧನಕ್ಕೆ ಶೋಧ ನಡೆಸಿದ್ದರು. ಆದರೆ, ತಲೆಮರೆಸಿಕೊಂಡಿರುವ ಆತ ನಿರೀಕ್ಷಣಾ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದರು. ಫೆ.1ರಂದು ದಾವಣಗೆರೆಯ 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿತ್ತು.

ಹೈಕೋರ್ಟ್‌ನಲ್ಲೂ ನಕಾರ: ದಾವಣಗೆರೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ನಾಗರಾಜಪ್ಪ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ವಿಚಾರಣೆ ವೇಳೆ, ದಾಖಲೆ ತಿದ್ದಿ, ಬೇರೆಯವರ ಮಕ್ಕಳನ್ನು ತನ್ನ ಮಕ್ಕಳೆಂದು ನಂಬಿಸಿ ಸಾಲ ಪಡೆದಿರುವುದು ಗಂಭೀರ ಅಪರಾಧ. ಇಂತಹ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವೇ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರ ವಕೀಲರು, ನಿರೀಕ್ಷಣಾ ಜಾಮೀನು ಕೊಡಿ ಎಂದು ಪರಿ ಪರಿಯಾಗಿ ಬೇಡಿದರೂ ನ್ಯಾ.ಹರೀಶ್ ಕುಮಾರ್ ಒಪ್ಪಲಿಲ್ಲ. ಕೊನೆಗೆ ವಕೀಲರು, ಆರೋಪಿ ಪೊಲೀಸರ ಮುಂದೆ ಶರಣಾಗಲು ಸಿದ್ಧ, ಆದರೆ ಆನಂತರ ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ನಿರ್ದೇಶನ ನೀಡಬೇಕೆಂಬ ಬೇಡಿಕೆ ಇಟ್ಟರು. ಅದಕ್ಕೂ ಒಪ್ಪದ ನ್ಯಾಯಮೂರ್ತಿಗಳು, ತಪ್ಪೆಸಗಿ ಎಲ್ಲೊ ಕುಳಿತಿರುವ ವ್ಯಕ್ತಿ ಮೊದಲು ಕಾನೂನು ಪಾಲನೆ ಮಾಡಲಿ, ನಂತರ ನಿಯಮದಂತೆ ಮಾಮೂಲಿ ಜಾಮೀನಿಗೆ ಮ್ಯಾಜಿಸ್ಟ್ರೇಟರ ಮುಂದೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಲಿ, ಎಂದು ಸೂಚಿಸಿ ಅರ್ಜಿಯನ್ನು ವಜಾಗೊಳಿಸಿತು.

ಪೊಲೀಸರ ಪರ ವಾದ ಮಂಡಿಸಿದ ಹೈಕೋರ್ಟ್‌ನ ಸರಕಾರಿ ಪ್ಲಿಡರ್ ವಿಶ್ವನಾಥ್ ತನಿಖೆಯಲ್ಲಿ ಕಂಡು ಬಂದಿರುವ ನಕಲಿ ದಾಖಲೆ ಸೃಷ್ಟಿ ಹಾಗೂ ಇನ್ನಿತರ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ತಲೆಮರೆಸಿಕೊಂಡಿರುವ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು. ಬೇರೆಯವರ ಮಕ್ಕಳನ್ನು ತನ್ನ ಮಕ್ಕಳೆಂದು ತೋರಿಸಿ ಸಾಲ ಪಡೆದಿರುವಾತನ ನಿರೀಕ್ಷಣಾ ಜಾಮೀನು ಅರ್ಜಿ ಪುರಸ್ಕರಿಸಲು ಸಾಧ್ಯವಿಲ್ಲ,ಇಂತಹ ಅಪರಾಧಿಗಳನ್ನು ಮನ್ನಿಸಲಾಗದು. ಕಾನೂನು ಪಾಲಿಸದೆ ತಲೆಮರೆಸಿಕೊಂಡಿರುವ ಅರ್ಜಿದಾರ ಮೊದಲು ಪೊಲೀಸ್ ಠಾಣೆಗೆ ಹೋಗಿ ಶರಣಾಗಲಿ. ಆನಂತರ ಜಾಮೀನು ಅರ್ಜಿ ಸಲ್ಲಿಸಿಕೊಳ್ಳಲಿ ಎಂದು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News