ಕೆರೆಗಳ ಪುನರುಜ್ಜೀವನಗೊಳಿಸುವ ಸಂಕಲ್ಪ ಕೈಗೊಳ್ಳಲಿ: ಕೇಂದ್ರ ಸಚಿವ ಅನಂತ್ ಕುಮಾರ್
ಬೆಂಗಳೂರು, ಜು.1: ರಾಜಧಾನಿ ಬೆಂಗಳೂರಿನ ಕೆರೆಗಳನ್ನು ಶತಮಾನದ ಹಿಂದೆ ಇದ್ದ ರೀತಿಯಲ್ಲಿ ಪುನರುಜ್ಜೀವನಗೊಳಿಸುವ ಬಗ್ಗೆ ಸಂಕಲ್ಪ ಮಾಡಬೇಕೆಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
ರವಿವಾರ ಅದಮ್ಯ ಚೇತನ ಸಂಸ್ಥೆ ಬಸವನಗುಡಿಯ ಕೆಂಪಾಂಬು ಕೆರೆ ಆವರಣದಲ್ಲಿ ಏರ್ಪಡಿಸಿದ್ದ 131 ನೆ ಹಸಿರು ರವಿವಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ನಗರದ ಕೆರೆಗಳ ಗತವೈಭವವನ್ನು ವಿವರಿಸಿ, ಈಗಿನ ಸ್ಥಿತಿಯನ್ನು ಕಂಡು ವಿಷಾದ ವ್ಯಕ್ತಪಡಿಸಿದರು.
ಕೆಂಪಾಂಬು ಕೆರೆಯನ್ನು ನೋಡಿದಾಗ ಕಣ್ಣಲ್ಲಿ ನೀರು ಬರುತ್ತಿತ್ತು. ಈ ಕೆರೆ ನಾಶವಾಗುತ್ತದೆ ಎಂದು ಎಲ್ಲಾ ಪತ್ರಿಕೆಗಳು ಬರೆದಿದ್ದವು. ನಾಡಪ್ರಭು ಕೆಂಪೇಗೌಡರು ಕಟ್ಟಿಸಿದ ಈ ಕೆರೆಗೆ ಎಂತಹ ದುಸ್ಥಿತಿ ಬಂದಿತ್ತು. ಆದರೆ ಕೆಂಪಾಂಬು ಸೇರಿದಂತೆ ನೂರಾರು ಕೆರೆಗಳನ್ನು ಪುನರುಜ್ಜೀವನ ಮಾಡಲು ಸಂಕಲ್ಪ ಮಾಡಿದ್ದೆವು. ಆ ಪುನರುಜ್ಜೀವನ ಕಾರ್ಯಕ್ಕೆ ಈಗ ಭಾರೀ ವೇಗ ಸಿಕ್ಕಿದೆ ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಖಾತೆ ಹೊತ್ತಿರುವ ಉಪಮುಖ್ಯಮಂತ್ರಿ ನಗರದ ಅಭಿವೃದ್ಧಿ ಬಗ್ಗೆ ಭರವಸೆ ನೀಡಿದ್ದಾರೆ. ಅದರಂತೆ ಕೆಂಪಾಂಬು ಕೆರೆಗೆ ಸೇರಿದ ಒತ್ತುವರಿಯಾಗಿರುವ 5 ಎಕರೆ ಪ್ರದೇಶವನ್ನು ಪುನಃ ವಾಪಸ್ ಪಡೆದು ಅದನ್ನು ಅಭಿವೃದ್ಧಿಪಡಿಸಬೇಕು. ಶತಮಾನದ ಹಿಂದಿನ ರೀತಿಯಲ್ಲಿ ಇಲ್ಲಿ ಜೊಂಡು, ಮೀನು ಇತ್ಯಾದಿ ಜಲಚರಗಳು, ಪಕ್ಷಿಗಳು, ಸುಂದರವಾದ ಗಿಡ ಮರ, ಪರಿಸರ ವಲಯ ಸೇರಿದಂತೆ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಗುತ್ತಿಗೆದಾರರಿಗೆ ಜವಾಬ್ದಾರಿ ಬೇಡ: ನಗರದಲ್ಲಿ ಕೆರೆಗಳನ್ನು ಅಭಿವೃದ್ಧಿ ಮಾಡಲು ಹೆಚ್ಚು ಒತ್ತು ನೀಡಬೇಕು. ಆದರೆ, ಕೆರೆಗಳ ಪುನರುಜ್ಜೀವನ ಕೆಲಸವನ್ನು ಗುತ್ತಿಗೆದಾರರಿಗೆ ವಹಿಸಬಾರದು. ಅವರು ಕೆರೆಗಳ ಸುತ್ತ ಕಾಂಕ್ರೀಟ್, ಸಿಮೆಂಟ್ ಹಾಕಿ, ಜಲ್ಲಿ ಸುರಿಯುವುದೇ ಅಭಿವೃದ್ಧಿ ಎಂದುಕೊಂಡಿದ್ದಾರೆ. ಇವುಗಳ ಮಧ್ಯೆ, ಕೆರೆ ಅಭಿವೃದ್ಧಿಯನ್ನೇ ಮರೆತುಬಿಡುತ್ತಾರೆ ಎಂದರು.
ಕೆರೆ ಅಭಿವೃದ್ಧಿ ಎಂದರೆ, ಕೆರೆ ಸುತ್ತ ಕಾಂಕ್ರಿಟ್ ಪಾತ್ರೆ ನಿರ್ಮಿಸಿ, ಮಧ್ಯದಲ್ಲಿ ಮೂರು-ನಾಲ್ಕು ಫೌಂಟೇನಳನ್ನು ನಿರ್ಮಿಸುವುದೇ ಕೆರೆಗಳ ಅಭಿವೃದ್ಧಿ ಎಂದು ಆಧುನಿಕ ನಗರ ವಿನ್ಯಾಸಕಾರರು ಯೋಚಿಸುತ್ತಿದ್ದಾರೆ. ಆದರೆ, ಕೆರೆಗಳ ಅಭಿವೃದ್ಧಿಯೆಂದರೆ, ನಮಗೆ ಜೀವಂತ ಕೆರೆಗಳು ಬೇಕಾಗಿದೆ. ಉಸಿರಾಡುವ ಕೆರೆಗಳು ಬೇಕಾಗಿವೆ. ಮಳೆ ನೀರಿರಲಿ ಅಥವಾ ಬೇರೆ ಯಾವುದೇ ನೀರಿರಲಿ. ಅದನ್ನು ಶುದ್ಧ ಮಾಡಿ ಕೆರೆಗೆ ಬಿಡುವಂತಹ ಜೊಂಡಿನ ಸಸ್ಯಪ್ರಬೇಧದಂತಹ ಸಸಿಗಳು ಇರಬೇಕು, ಜಲಚರಗಳು, ಪ್ರಾಣಿ ಪಕ್ಷಿಗಳ ಕಲರವ ಇರಬೇಕು. ಕೆರೆಯ ಸುತ್ತ ಉತ್ತಮ ಪರಿಸರ ಇರಬೇಕು. ಇದರ ಮೂಲಕ ಇಲ್ಲಿಗೆ ಬರುವ ಅಸಂಖ್ಯಾತ ಜನರಿಗೆ ಆಮ್ಲಜನಕ ಸಿಗುವಂತಾಗಬೇಕು ಎಂದು ಅವರು ಹೇಳಿದರು.