×
Ad

ಬೆಂಗಳೂರು: ಮುಂದುವರೆದ ಹಾಸ್ಟೆಲ್ ಹೊರಗುತ್ತಿಗೆದಾರರ ಪ್ರತಿಭಟನೆ; 16 ಮಹಿಳಾ ನೌಕರರು ಅಸ್ವಸ್ಥ

Update: 2018-07-01 19:52 IST

ಬೆಂಗಳೂರು, ಜು.1: ಸರಕಾರಿ ವಸತಿ ಶಾಲೆ ಹೊರಗುತ್ತಿಗೆ ನೌಕರರನ್ನು ಏಕಾಏಕಿ ಹುದ್ದೆಗಳಿಂದ ವಜಾ ಮಾಡುತ್ತಿರುವ ಕ್ರಮವನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ 6ನೆ ದಿನಕ್ಕೆ ಕಾಲಿಟ್ಟಿದ್ದು, 16 ಮಹಿಳಾ ನೌಕರರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ರವಿವಾರವೂ ಮುಂದುವರೆದ ಪ್ರತಿಭಟನೆಯಲ್ಲಿ ದೊಡ್ಡಬಳ್ಳಾಪುರದ ಲಕ್ಷ್ಮಮ್ಮ ಸೇರಿದಂತೆ ಒಟ್ಟು 16 ಮಹಿಳೆಯರು ಅಸ್ವಸ್ಥರಾಗಿದ್ದು, ನಗರದ ಕೆಸಿ ಜನರಲ್ ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಪ್ರತಿಭಟನಾಕಾರರಲ್ಲಿ ಜ್ವರ, ನೆಗಡಿ, ಕೆಮ್ಮು ಹಾಗೂ ನಿಶಕ್ತಿ ಕಾಣಿಸಿಕೊಂಡು ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು, ಘಟನಾ ಸ್ಥಳದಲ್ಲಿಯೇ ಆಂಬ್ಯುಲೆನ್ಸ್ ವಾಹನಯೊಂದನ್ನು ನಿಲ್ಲಿಸಿ, ಕೆಲವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ರಕ್ಷಣೆ ಇಲ್ಲ: ನಗರದ ಸ್ವಾತಂತ್ರ ಉದ್ಯಾನವನ ಮೈದಾನದಲ್ಲಿಯೇ ಉಳಿದಿರುವ ನೂರಾರು ಮಹಿಳಾ ಪ್ರತಿಭಟನಾಕಾರರಿಗೆ ರಾತ್ರಿ ವೇಳೆ ರಕ್ಷಣೆ ಇಲ್ಲದಂತಾಗಿದೆ. ಇನ್ನೂ ಸೂಕ್ತ ರೀತಿಯಲ್ಲಿ ಕುಡಿಯುವ ನೀರಿನ ಹಾಗೂ ಶೌಚಾಲಯದ ವ್ಯವಸ್ಥೆ ಇಲ್ಲ. ಜೊತೆಗೆ ಸೊಳ್ಳೆ ಕಾಟವೂ ಹೆಚ್ಚಾಗಿದ್ದು, ಮಹಿಳಾ ಪೇದೆಗಳ ಸಂಖ್ಯೆಯೂ ಕಡಿಮೆ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಬೇಡಿಕೆಗೆ ಪಟ್ಟು: ಹೋರಾಟಗಾರರನ್ನು ಕರೆಯಿಸಿ ಈಗಾಗಲೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕುವುದನ್ನು ಕೂಡಲೇ ನಿಲ್ಲಿಸುವ ಕುರಿತು ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದರೆ, ನಮಗೆ ಆಶ್ವಾಸನೆ ಬೇಡ, ಆದೇಶ ಹೊರಡಿಸಬೇಕು ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದಾರೆ.

ಹಾಸ್ಟೆಲ್ ನೌಕರರಿಗೆ ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಬ್ಬರು ಸಚಿವರಿದ್ದಾರೆ. ಮೂರು ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಇಬ್ಬರಲ್ಲಿ ಒಬ್ಬರೂ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ. ಆದ್ದರಿಂದ ಸರಕಾರದಿಂದ ಆದೇಶ ಹೊರಡಿಸುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಸಂಘದ ಸಹ ಕಾರ್ಯದರ್ಶಿ ಕೆ.ಹನುಮೇಗೌಡ ತಿಳಿಸಿದರು.

‘ಆದೇಶ ಪ್ರತಿ ನೀಡಿ’
ಸರಕಾರಿ ವಸತಿ ಶಾಲೆ ಹೊರಗುತ್ತಿಗೆ ನೌಕರರನ್ನು ಏಕಾಏಕಿ ಹುದ್ದೆಗಳಿಂದ ವಜಾಮಾಡುತ್ತಿರುವ ಪ್ರಕ್ರಿಯೆ ಸರಿಯಲ್ಲ. ಈ ಕೂಡಲೇ ಸಂಬಂಧಪಟ್ಟ ಇಲಾಖೆ ನಮಗೆ ಆದೇಶ ಪ್ರತಿ ನೀಡಬೇಕು. ಅಲ್ಲಿವರೆಗೂ ಶಾಂತಿಯುತ ಪ್ರತಿಭಟನೆ ಮುಂದುವರೆಸುತ್ತೇವೆ’
-ಕೆ.ಹನುಮೇಗೌಡ, ಸಂಘದ ಸಹ ಕಾರ್ಯದರ್ಶಿ

‘ಸಚಿವರ ಭೇಟಿ-ಭರವಸೆ’
ಸರಕಾರಿ ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಮಸ್ಯೆಗೆ ಶೀಘ್ರದಲ್ಲಿಯೇ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು
-ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News