ಸಿದ್ದರಾಮಯ್ಯ ಈಗ ಕೊನೆಯ ಸಾಲಿನ ವಿದ್ಯಾರ್ಥಿ!

Update: 2018-07-03 15:49 GMT

ಬೆಂಗಳೂರು, ಜು. 3: ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ವೇಳೆ ಮೊದಲನೆ ಸಾಲಿನಲ್ಲಿ ಕೂತಿದ್ದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ಕೊನೆಯ ಸಾಲಿನ ವಿದ್ಯಾರ್ಥಿಯಾಗಿದ್ದರು!

ವಿಧಾನಸಭೆ ಮೊದಲನೆ ಮತ್ತು ಎರಡನೆ ಸಾಲಿನಲ್ಲಿ ಸಚಿವರು ಕೂರುವುದು ಸಂಪ್ರದಾಯ. ಉಳಿದಂತೆ ಶಾಸಕರು ಕೂರುತ್ತಾರೆ. ಆದರೆ, ಸಿದ್ದರಾಮಯ್ಯ ನಿನ್ನೆ ಎರಡನೆ ಸಾಲಿನಲ್ಲಿ ಕೂತಿದ್ದರು. ಅಲ್ಲದೆ, ಈ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡ ಹಿನ್ನೆಲೆಯಲ್ಲಿಂದು ಕೊನೆಯ ಸಾಲಿನಲ್ಲಿ ಕೂತಿದ್ದರೆಂದು ಹೇಳಲಾಗಿದೆ.

ಈ ಹಿಂದೆ ಶಾಸಕರಾಗಿದ್ದ ವೇಳೆ ಕೆ.ಆರ್.ರಮೇಶ್‌ ಕುಮಾರ್ ಅವರು ಕೂರುತ್ತಿದ್ದ ಸರಕಾರದ ಮುಖ್ಯ ಸಚೇತಕರ ಪಕ್ಕದ ಆಸನದಲ್ಲಿ ಸಿದ್ದರಾಮಯ್ಯ ಆಸೀನರಾಗಿದ್ದರು. ಆದರೆ, ಸಚಿವರು ಮತ್ತು ಶಾಸಕರು ಸಿದ್ದರಾಮಯ್ಯನವರ ಬಳಿಗೆ ಹೋಗಿ ನಮಸ್ಕರಿಸಿ, ಕೈಕುಲುಕುತ್ತಿದ್ದುದು ವಿಶೇಷವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News