ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸರಕಾರ ಆಸ್ಥೆ ವಹಿಸಬೇಕು: ಪಕ್ಷಭೇದ ಮರೆತು ಆಗ್ರಹ
ಬೆಂಗಳೂರು, ಜು. 3: ಶಿಕ್ಷಣ ಹಕ್ಕು ಕಾಯ್ದೆ(ಆರ್ಟಿಇ)ಯಲ್ಲಿ ಲೋಪಗಳನ್ನು ಸರಿಪಡಿಸಬೇಕು ಹಾಗೂ ಸರಕಾರಿ ಶಾಲೆಗಳ ಸಬಲೀಕರಣ ಸರಕಾರ ಆಸ್ಥೆ ವಹಿಸಬೇಕು ಎಂದು ಆಡಳಿತ-ವಿಪಕ್ಷ ಸದಸ್ಯರು ಪಕ್ಷಭೇದ ಮರೆತು ವಿಧಾನಸಭೆಯಲ್ಲಿ ಆಗ್ರಹಿಸಿದ ಪ್ರಸಂಗ ನಡೆಯಿತು.
ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಪ್ರಸ್ತಾವವನ್ನು ಅನುಮೋದಿಸಿ ಮಾತನಾಡಿದ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ, ಹಳ್ಳಿಗಳಲ್ಲಿನ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಶಿಕ್ಷಕರಿಗೆ ಸರಕಾರ ಕೊಡುವ ಸಂಬಳವನ್ನು ಖಾಸಗಿ ಶಾಲೆಗಳು 3 ಮಂದಿ ಶಿಕ್ಷಕರಿಗೆ ನೀಡುತ್ತವೆ. ಆದರೆ, ಫಲಿತಾಂಶದ ವಿಷಯದಲ್ಲಿ ಖಾಸಗಿ ಶಾಲೆಗಳೆ ಮುಂದಿವೆ. ನಮ್ಮ ಅಧಿಕಾರಿಗಳ ಮಕ್ಕಳ್ಯಾರೂ ಸರಕಾರಿ ಶಾಲೆಯಲ್ಲಿ ಓದುತ್ತಿಲ್ಲ ಎಂದು ಗಮನ ಸೆಳೆದರು.
ಇದಕ್ಕೆ ಧ್ವನಿಗೂಡಿಸಿದ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ನಮ್ಮ, ಮೊಮ್ಮಕ್ಕಳ ಕತೆ ಹೇಳಿ. ಯಾವೊಬ್ಬ ಶಾಸಕರ ಮಕ್ಕಳು ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿಲ್ಲ ಎಂದರು. ಈ ಹಂತದಲ್ಲಿ ಎದ್ದು ನಿಂತ ಮಾಜಿ ಶಿಕ್ಷಣ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್, ಹಿಂದಿನ ಸರಕಾರ ಶಿಕ್ಷಣ ಸುಧಾರಣೆಗೆ ಹಲವು ಕ್ರಮಗಳ ಕೈಗೊಂಡಿದೆ ಎಂದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಬಿಜೆಪಿ ಸದಸ್ಯ ಜೆ.ಸಿ.ಮಾಧುಸ್ವಾಮಿ, ಆರ್ಟಿಇ ಕಾಯ್ದೆಯಡಿ ಎಷ್ಟು ಮಂದಿ ಬಡ ಮಕ್ಕಳಿಗೆ ಅನುಕೂಲವಾಗಿದೆ ಎಂದು ಸರಕಾರ ಬಹಿರಂಗಪಡಿಸಬೇಕು. ಆರ್ಟಿಇ ಪ್ರವೇಶಕ್ಕೆ 6ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದರಿಂದ ಸರಕಾರಿ ನೌಕರನ ಮಕ್ಕಳ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಅಲ್ಲದೆ, ಖಾಸಗಿ ಶಾಲೆಗಳ ಶುಲ್ಕ 8 ಸಾವಿರ ರೂ.ನಿಂದ 16 ಸಾವಿರ ರೂ.ಗಳಿಗೆ ಹೆಚ್ಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಗ್ರಾಮೀಣ ಪ್ರವೇಶದ ಪೋಷಕರಲ್ಲಿ ಇಂಗ್ಲಿಷ್ ವ್ಯಾಮೋಹ ಬಂದಿದೆ. ತಮ್ಮ ಮಕ್ಕಳು ಇಂಗ್ಲಿಷ್ ಕಲಿಯಬೇಕೆಂಬ ಕಾರಣಕ್ಕೆ ದುಡ್ಡು ಕೊಟ್ಟು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಹೀಗಾಗಿ ಸರಕಾರ ಶಾಲೆಗಳಿಗೆ ಆಂಗ್ಲ ಬೋಧನೆ ಶಿಕ್ಷಕರನ್ನು ಒದಗಿಸಬೇಕು ಎಂದು ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಆಗ್ರಹಿಸಿದರು.
ಈ ಹಂತದಲ್ಲಿ ಎದ್ದುನಿಂತ ಬಿಜೆಪಿ ಸದಸ್ಯ ಅರವಿಂದ ಬೆಲ್ಲದ್, ಸರಕಾರಿ ಶಾಲೆ ಆವರಣದಲ್ಲೆ ಖಾಸಗಿ ಖರ್ಚಿನಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಿದ ಪರಿಣಾಮ ನನ್ನ ಕ್ಷೇತ್ರದಲ್ಲಿ ಸರಕಾರಿ ಶಾಲೆಗಳ ಪ್ರವೇಶದ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸರಕಾರಿ ಶಾಲೆಗಳಲ್ಲಿ ಎಲ್ಕೆಜಿ ಆರಂಭಿಸಿ, ಆಂಗ್ಲ ಶಿಕ್ಷಣಕ್ಕೆ ಒತ್ತುನೀಡಬೇಕೆಂದು ಕೋರಿದರು.
‘ನಾವು ಪಾವು-ಚಟಾಕಿನಿಂದ ಶಿಕ್ಷಣ ಆರಂಭಿಸಿದವರು. ನಾವು ಕಾನ್ವೆಂಟ್ ಶಿಕ್ಷಣ ಕಲಿಯಲಿಲ್ಲ. ಆಂಗ್ಲ ಭಾಷಾ ಮಾಧ್ಯಮ ಎಂಬುದು ಕೇವಲ ಭ್ರಮೆಯಷ್ಟೇ’ ಎಂದ ಸ್ಪೀಕರ್ ರಮೇಶ್ ಕುಮಾರ್, ಆರ್ಟಿಇ ಖಾಸಗಿ ಶಾಲೆಗಳನ್ನು ಸಾಕಲಿಕ್ಕಷ್ಟೇ ಇರುವಂತಹದ್ದು ಎಂದರು.
ಈ ವೇಳೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, 1ಲಕ್ಷಕ್ಕೂ ಹೆಚ್ಚು ಮಂದಿ ಬಡ ಮಕ್ಕಳಿಗೆ ಆರ್ಟಿಇ ಅಡಿಯಲ್ಲಿ ಅತ್ಯಂತ ಪಾರದರ್ಶಕವಾಗಿ ಸೀಟು ಹಂಚಿಕೆ ಮಾಡಲಾಗಿದೆ. ಕೆಲ ಲೋಪದೋಷಗಳಿವೆ. ಅವುಗಳನ್ನು ಸರಿಪಡಿಸಲಾಗುವುದು. ಅಲ್ಲದೆ, ಸರಕಾರಿ ಶಾಲೆಗಳಲ್ಲಿ ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇತ್ತೀಚೆಗೆ ಬಹುತೇಕ ಎಲ್ಲ ಪೋಷಕರಿಗೆ ಒಂದೇ ಮಗುವಿರುತ್ತದೆ. ಮಕ್ಕಳು ಶಿಕ್ಷಣ ಪಡೆದ ನಂತರ ಶಾಲೆಗೆ ಸೇರಿಕೊಳ್ಳಲು ಹೊಸದಾಗಿ ಮಕ್ಕಳಿರುವುದಿಲ್ಲ. ಇದೂ ಕೂಡ ಗ್ರಾಮೀಣ ಪ್ರದೇಶದಲ್ಲಿನ ಸರಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಲು ಕಾರಣ’
-ಬೆಳ್ಳಿ ಪ್ರಕಾಶ್, ಬಿಜೆಪಿ ಸದಸ್ಯ‘ಕುಟುಂಬ ಕಲ್ಯಾಣ ಯೋಜನೆಯೂ ಜಾರಿಯಲ್ಲಿರಬೇಕು ಅಂತೀರಿ, ಮಕ್ಕಳ ಸಂಖ್ಯೆಯೂ ಜಾಸ್ತಿ ಇರಬೇಕು ಅಂತೀರಿ. ಇದು ಹೇಗೆ ಸಾಧ್ಯ’
-ಕೆ.ಆರ್.ರಮೇಶ್ಕುಮಾರ್ ಸ್ಪೀಕರ್