ಎಲ್ಲರನ್ನೊಳಗೊಂಡ 'ಆರೋಗ್ಯ ಕರ್ನಾಟಕ' ಕಾರ್ಡ್ ಶೀಘ್ರ ವಿತರಣೆ: ಡಿಸಿಎಂ ಪರಮೇಶ್ವರ್

Update: 2018-07-04 15:27 GMT

ಬೆಂಗಳೂರು, ಜು.4: ಎಲ್ಲ ವರ್ಗದವರನ್ನು ಒಳಗೊಂಡ ‘ಆರೋಗ್ಯ ಕರ್ನಾಟಕ’ ಕಾರ್ಡ್ ಅನ್ನು ಶೀಘ್ರವೇ ವಿತರಣೆ ಮಾಡಲಾಗುವುದು ಎಂದು ಸದನಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಹಿರಿಯ ಸದಸ್ಯ ಜಗದೀಶ್ ಶೆಟ್ಟರ್ ಆರೋಗ್ಯ ಕರ್ನಾಟಕ ಕಾರ್ಡ್ ಹಾಗೂ ಯಶಸ್ವಿನಿ ಯೋಜನೆಯ ವಿಚಾರ ಪ್ರಸ್ತಾಪ ಮಾಡಿದಾಗ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹಾಗೂ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ನಡುವೆ ಹೊಂದಾಣಿಕೆಯ ಕೊರತೆ ಎದ್ದು ಕಂಡಿತು. ಈ ವೇಳೆ ಮಧ್ಯಪ್ರವೇಶಿಸಿದ ಪರಮೇಶ್ವರ್, ಆರೋಗ್ಯ ಕಾರ್ಡ್ ವಿತರಿಸಲು ನಾಲ್ಕು ತಿಂಗಳು ಕಾಲಾವಕಾಶ ನೀಡಿರುವುದು ಹೆಚ್ಚಿನ ಸಮಯ. ಇದು ವರ್ಗಾವಣೆ ಅವಧಿ, ಆದರೂ ಸಮಸ್ಯೆಯನ್ನು ಆದ್ಯತೆ ಮೇರೆಗೆ ಬಗೆಹರಿಸಲಾಗುವುದು. ಜನ ಬೀದಿಯಲ್ಲಿ ಸಾಯಬಾರದು, ಜನರಿಗೆ ತಕ್ಷಣ ಔಷಧಿ, ಚಿಕಿತ್ಸೆ ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಲು ಸರಕಾರದೊಂದಿಗೆ 480 ಆಸ್ಪತ್ರೆಗಳು ಒಪ್ಪಂದಕ್ಕೆ ಬಂದಿವೆ. ಹಳೆಯ ಬಾಕಿ 9 ಕೋಟಿ ರೂ.ಗಳು ಮಾತ್ರ ಇದೆ. ಹೆರಿಗೆ ಮತ್ತು ಮಕ್ಕಳ ಚಿಕಿತ್ಸೆ ಈ ಎರಡು ವಿಧಗಳಲ್ಲಿ ಸುಮಾರು 40 ಸಾವಿರ ಪ್ರಕರಣಗಳಿವೆ. ಆದುದರಿಂದ, ಈ ಬಗ್ಗೆ ಪರಿಶೀಲನೆ ನಡೆಸಿ ಬಾಕಿ ಹಣ ಪಾವತಿ ಮಾಡಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News