ಇವರು ಯಾವ ಸಂಘಟನೆಯವರು?
ಮಾನ್ಯರೇ,
ದೇಶದ ಸರ್ವೋಚ್ಚ ನ್ಯಾಯಾಲಯ ಗೋರಕ್ಷಕರು ಮುಸ್ಲಿಮರು ಮತ್ತು ದಲಿತರ ಮೇಲೆ ನಡೆಸುವ ಗುಂಪು ಹತ್ಯೆಗಳನ್ನು ಇತರ ಗುಂಪು ಹತ್ಯೆಗಳ ಜೊತೆ ಸೇರಿಸಿರುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಪ್ರಧಾನವಾಗಿ ಜಾತಿ ಮತ್ತು ಮತೀಯ ದ್ವೇಷದ ಹಿನ್ನೆಲೆಯಲ್ಲಿ ಗೋರಕ್ಷಕರು ನಡೆಸುವ ಕೊಲೆ, ಹಿಂಸಾಚಾರಗಳನ್ನು ಸಾಮಾನ್ಯ ಅಪರಾಧಗಳ ಪಟ್ಟಿಗೆ ಸೇರಿಸುವುದು ತಪ್ಪು. ಯಾಕೆಂದರೆ ಇವು ದೇಶದ ಜಾತ್ಯತೀತ ಪರಂಪರೆಗೆ, ಬಹುಸಂಸ್ಕೃತಿಗಳ ಸಹಿಷ್ಣುತೆಗೆ ಮತ್ತು ಆ ಮೂಲಕ ಸಂವಿಧಾನದ ಬುಡಕ್ಕೇ ಕೊಡಲಿಯೇಟು ನೀಡುವ ಘಟನೆಗಳಾಗಿವೆ. ಹೀಗೆ ಸರ್ವೋಚ್ಚ ನ್ಯಾಯಾಲಯದ ಮೊಸಳೆ ಕಣ್ಣೀರು ಒಂದು ಕಡೆಯಾದರೆ ಇನ್ನೊಂದು ಕಡೆ ಒಂದು ಗೋಮುಖವ್ಯಾಘ್ರವೂ ಕಣ್ಣೀರ್ಗರೆಯುತ್ತಿರುವ ವಿಲಕ್ಷಣ ವಿದ್ಯಮಾನವೊಂದು ವರದಿಯಾಗಿದೆ! ‘‘ಗೋ ರಕ್ಷಣೆ ಹೆಸರಲ್ಲಿ ನಡೆಯುವ ಹಿಂಸಾಚಾರಕ್ಕೆ ನಮ್ಮ ಸಮ್ಮತಿ ಇಲ್ಲ, ಅಂತಹ ವಿಷಯದಲ್ಲಿ ನಾವು ಯಾರನ್ನೂ ಬೆಂಬಲಿಸುವುದಿಲ್ಲ’’ ಎಂದು ಆರೆಸ್ಸೆಸ್ ಮುಖಂಡ ಡಾ. ರಾಕೇಶ್ ಸಿನ್ಹಾ ಸ್ಪಷ್ಟಪಡಿಸಿದ್ದಾರಂತೆ. ಹಾಗಾದರೆ ಚಡ್ಡಿ, ಟೋಪಿ ಹಾಕುವ ಗೋರಕ್ಷಕರು ಯಾವ ಸಂಘಟನೆಗೆ ಸೇರಿದವರೆಂಬುದನ್ನೂ ಡಾ. ಸಿನ್ಹಾ ಸ್ಪಷ್ಟಪಡಿಸಿದರೆ ಒಳ್ಳೆಯದಿತ್ತು.