ಬೆಂಗಳೂರು: ಕಳವು ಆರೋಪಿ ಅಡುಗೆಭಟ್ಟನ ಬಂಧನ
Update: 2018-07-10 22:05 IST
ಬೆಂಗಳೂರು, ಜು. 10: ಮಾಲಕರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಆರೋಪದ ಮೇಲೆ ಅಡುಗೆ ಭಟ್ಟನನ್ನು ಇಲ್ಲಿನ ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಾಗಮಂಗಲದ ಮನೋಜ್(21) ಬಂಧಿತ ಅಡುಗೆಭಟ್ಟ ಎಂದು ಪೊಲೀಸರು ಗುರುತಿಸಿದ್ದು, ಈತನಿಂದ 6 ಚಿನ್ನದ ಬಳೆ ಸೇರಿ 125 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು 4 ತಿಂಗಳಿನಿಂದ ರಾಜಾಜಿನಗರದ 17ನೇ ಮುಖ್ಯರಸ್ತೆಯ ಬಿಲ್ಡರ್ ಆನಂದ್ ಕುಮಾರ್ ಎಂಬುವರ ಮನೆಯಲ್ಲಿ ಅಡುಗೆ ಭಟ್ಟನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಸ್ವಲ್ಪದಿನದಲ್ಲೇ ಮನೆಯವರ ವಿಶ್ವಾಸ ಗಳಿಸಿದ್ದ ಆತ, ನಂತರ ಕಳವು ಮಾಡಿದ್ದಾನೆ. ಮೊದಲಿಗೆ 2 ಬಳೆ ಕದ್ದು, ಮಾರಾಟ ಮಾಡಿದ್ದ ಆರೋಪಿಯು, ಅದೇ ರೀತಿ 6 ಬಳೆಗಳನ್ನು ಕಳವು ಮಾಡಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.