ವಿಪಕ್ಷದ ಮೊಗಸಾಲೆಯಲ್ಲಿ ಸತೀಶ್ ಜಾರಕಿಹೊಳಿ ಪ್ರತ್ಯಕ್ಷ !

Update: 2018-07-11 17:02 GMT

ಬೆಂಗಳೂರು, ಜು. 11: ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಸತೀಶ್ ಜಾರಕಿಹೊಳಿ ಕಾಣಿಸಿಕೊಂಡಿರುವುದು ತೀವ್ರ ರಾಜಕೀಯ ಕುತೂಹಲ ಸೃಷ್ಟಿಸಿದೆ.

ಬುಧವಾರ ವಿಧಾನಸಭೆ ವಿಪಕ್ಷ ಮೊಗಸಾಲೆಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಹಾಗೂ ಸಿ.ಎಂ.ಉದಾಸಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕರ ಜೊತೆ, ಕಾಂಗ್ರೆಸಿನ ಸತೀಶ್ ಜಾರಕಿಹೊಳಿ ಸಮಾಲೋಚನೆಯಲ್ಲಿ ತೊಡಗಿದ್ದರು.

ಈ ವೇಳೆ ಅಲ್ಲಿಗೆ ಆಗಮಿಸಿದ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನಸು ನಗುತ್ತಲೇ, ‘‘ಎನ್ರಪ್ಪಾ ಇಬ್ಬರೂ ಸೇರಿ ಅವರನ್ನು (ಸತೀಶ್ ಜಾರಕಿಹೊಳಿ) ಕೂರಿಸಿಕೊಂಡು ಮಾತನಾಡುತ್ತಿದ್ದೀರಿ, ಏನ್ ವಿಷಯ’’ ಎಂದು ಪ್ರಶ್ನಿಸಿದರು.

ಇದರಿಂದ ಕಸಿವಿಸಿಗೊಂಡಂತಾದ ಬಸವರಾಜ ಬೊಮ್ಮಾಯಿ, ಉದಾಸಿ, ‘‘ಏನೂ ಇಲ್ಲ ಸಾರ್. ಸುಮ್ಮನೆ ಮೊಗಸಾಲೆಗೆ ಸತೀಶ್ ಬಂದಿದ್ದರು. ಹಾಗೇ ಮಾತನಾಡುತ್ತಾ ಕೂತಿದ್ದೇವೆ’’ ಎಂದು ವಿವರಣೆ ಕೊಟ್ಟು ಮೊಗಸಾಲೆಯಲ್ಲಿ ಕೂತಿದ್ದ ಜಾಗಬಿಟ್ಟು ಕದಲಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News