ವರ್ಷಾಂತ್ಯದ ನಾಲ್ಕು ರಾಜ್ಯಗಳ ಚುನಾವಣೆಗಳ ಮಹತ್ವ

Update: 2018-07-16 18:32 GMT

2019ರ ಲೋಕಸಭಾ ಚುನಾವಣೆಗಳಿಗೂ ಮೊದಲೇ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಈ ಬಾರಿ ವಿಶೇಷವಾದ ರಾಷ್ಟ್ರೀಯ ಮಹತ್ವವೊಂದು ಬಂದು ಬಿಟ್ಟಿದೆ. ಮಧ್ಯಪ್ರದೇಶ, ರಾಜಸ್ಥಾನ್, ಛತ್ತೀಸ್‌ಗಡ ಮತ್ತು ಮಿಜೋರಾಂ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು 2019ರ ಲೋಕಸಭಾ ಚುನಾವಣೆಗಳಿಗೆ ದಿಕ್ಸೂಚಿಯಾಗಬಹುದೆಂಬುದು ಬಹುತೇಕ ರಾಜಕೀಯ ವೀಕ್ಷಕರ ಅಭಿಪ್ರಾಯವಾಗಿದೆ.

ಇವುಗಳಲ್ಲಿ ಕೇವಲ ನಲವತ್ತು ಸ್ಥಾನಗಳನ್ನು ಹೊಂದಿರುವ ಈಶಾನ್ಯ ರಾಜ್ಯ ಮಿಜೋರಾಂ ಬಿಟ್ಟರೆ ಉಳಿದ ಮೂರು ರಾಜ್ಯಗಳಾದ ಮಧ್ಯಪ್ರದೇಶ(230ಸ್ಥಾನ), ರಾಜಸ್ಥಾನ(200ಸ್ಥಾನ), ಛತ್ತೀಸ್‌ಗಡ(90)ಗಳಲ್ಲಿ ಭಾಜಪ ಅಧಿಕಾರದಲ್ಲಿದ್ದು 2019ರ ಲೋಕಸಭಾ ಚುನಾವಣೆಗಳಲ್ಲಿ ಸುಮಾರು 65 ಸಂಸತ್ ಸದಸ್ಯರನ್ನು ಆರಿಸಿ ಕಳಿಸಿಕೊಡಲು ಅವಕಾಶ ಇವೆ. 2014ರ ಚುನಾವಣೆಯಲ್ಲಿ ರಾಜಸ್ಥಾನದ 24 ಸ್ಥಾನಗಳಲ್ಲಿ ಭಾಜಪ 20 ಸ್ಥಾನಗಳನ್ನು ಗೆದ್ದಿದ್ದರೆ, ಮಧ್ಯಪ್ರದೇಶದ 29 ಸ್ಥಾನಗಳ ಪೈಕಿ ಭಾಜಪ 26 ಸ್ಥಾನಗಳನ್ನು, ಛತ್ತೀಸ್‌ಗಡದಲ್ಲಿ 10 ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಭಾಜಪ ಬಹುಮತ ಪಡೆಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದವು. ಹಾಗೆ ನೋಡಿದರೆ. 2013ರಲ್ಲಿ ಈ ರಾಜ್ಯಗಳಲ್ಲಿ ನಡೆದ ವಿಧಾನಸಭೆಯ ಚುನಾವಣೆಗಳು 2014ರ ಸಾರ್ವತ್ರಿಕ ಚುನಾವಣೆಗಳಿಗೆ ಭಾಜಪಕ್ಕೆ ಪೂರ್ವಸಿದ್ಧತೆಯ ಚುನಾವಣೆಗಳಾಗಿದ್ದು, ನರೇಂದ್ರ ಮೋದಿಯವರ ಜನಪ್ರಿಯತೆಯ ಮೊದಲ ರಿಹರ್ಸಲ್ ಆಗಿತ್ತೆನ್ನಬಹುದು. ಅವತ್ತು ರಾಜಸ್ಥಾನ ಮತ್ತು ಮಧ್ಯ ಪ್ರದೇಶ ಎರಡೂ ರಾಜ್ಯಗಳಲ್ಲಿ ಪಡೆದ ಬಾರಿ ಬಹುಮತದ ಆತ್ಮವಿಶ್ವಾಸವೇ ನಂತರದಲ್ಲಿ ಭಾಜಪ ರಾಷ್ಟ್ರದಾದ್ಯಂತ ಬಿರುಸಿನ ಆಕ್ರಮಣಕಾರಿ ಚುನಾವಣಾ ಪ್ರಚಾರ ಕೈಗೊಳ್ಳಲು ಸ್ಫೂರ್ತಿದಾಯಕವಾಗಿತ್ತು.

ಇದೀಗ ಭಾಜಪ ಈ ಎರಡೂ ರಾಜ್ಯಗಳಲ್ಲಿ ಹೆಚ್ಚುಕಡಿಮೆ ಐದು ವರ್ಷಗಳ ಕಾಲ ನಿರಾತಂಕವಾಗಿ ತನ್ನ ಆಳ್ವಿಕೆ ನಡೆಸಿದೆ. ಇವತ್ತು ಭಾಜಪ ಮತ್ತು ಕಾಂಗ್ರೆಸ್ ಎಂಬ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಈ ರಾಜ್ಯಗಳ ಚುನಾವಣೆಗಳು ಹಲವು ಕಾರಣಗಳಿಗಿಂದಾಗಿ ಮಹತ್ವಪೂರ್ಣವಾಗಿವೆ. ಯಾಕೆಂದು ಸ್ವಲ್ಪನೋಡೋಣ:

ಈ ಮೊದಲೇ ಹೇಳಿದಂತೆ 2019ಕ್ಕೆ ದಿಲ್ಲಿಯಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ಭಾಜಪಕ್ಕೆ ಈ ಮೂರೂ ರಾಜ್ಯಗಳಲ್ಲಿನ 65 ಸ್ಥಾನಗಳ ಪೈಕಿ ಆದಷ್ಟೂ ಹೆಚ್ಚಿನ ಸ್ಥಾನಗಳನ್ನು ಪಡೆಯಲೇಬೇಕಾದ ಅನಿವಾರ್ಯ ಇದೆ. ಹಾಗೆ ಪಡೆಯಲು ಅದು ಮೊದಲಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಬೇಕು. ಹೀಗಾಗಿ ಈ ಚುನಾವಣೆಗಳು ಭಾಜಪಕ್ಕೆ ನಿಜಕ್ಕೂ ಬಹಳ ಮುಖ್ಯವಾಗಿವೆ..ಇನ್ನು ಕಾಂಗ್ರೆಸ್‌ಗೆ ತನ್ನ ಗತವೈಭವ ಮರುಕಳಿಸಲು ಈ ರಾಜ್ಯಗಳಲ್ಲಿನ ಗೆಲುವು ಬಹಳ ಮುಖ್ಯ. ಈ ವಿಧಾನಸಭಾ ಚುನಾವಣೆಗಳನ್ನು ಗೆಲ್ಲುವ ಮೂಲಕ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬೇಕಾದ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಲು ಈ ರಾಜ್ಯಗಳಲ್ಲಿ ಗೆಲ್ಲಬೇಕಿರುವುದು ಅತ್ಯಗತ್ಯವಾಗಿದೆ. 2013ರಲ್ಲಿಯೇನೊ ಆಡಳಿತ ವಿರೋಧಿ ಅಲೆಯ ನೆಪ ಹೇಳಿ ಕಾಂಗ್ರೆಸ್ ತನ್ನ ಸೋಲನ್ನು ಸಮರ್ಥಿಸಿಕೊಳ್ಳಬಹುದಾಗಿತ್ತು. ಆದರೀಗ ಭಾಜಪಕ್ಕೆ ಆಡಳಿತ ವಿರೋಧಿ ಅಲೆಯ ಆತಂಕವಿದ್ದು, ಅದನ್ನು ನಗದೀಕರಿಸಿಕೊಳ್ಳುವ ಅವಕಾಶ ಕಾಂಗ್ರೆಸ್‌ಗಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಕಳೆದ ಐದು ವರ್ಷಗಳಲ್ಲಿ ನಡೆದ ಬಹುತೇಕ ಉಪಚುನಾವಣೆಗಳಲ್ಲಿ ಭಾಜಪ ಸೋಲುತ್ತ, ಕಾಂಗ್ರೆಸ್ ಗೆಲ್ಲುತ್ತಾ ಬಂದಿರುವುದು ಆಕಸ್ಮಿಕವೇನಲ್ಲ ಎಂದು ಕಾಂಗ್ರೆಸ್ ತೋರಿಸಿಕೊಡಬೇಕಿದೆ. ಅದೂ ಅಲ್ಲದೆ ರಾಜಸ್ಥಾನದ ಕಾಂಗ್ರೆಸ್ ಹೊಣೆಗಾರಿಕೆ ಹೊತ್ತಿರುವ ಯುವ ನಾಯಕ ಸಚಿನ್ ಪೈಲಟ್ ಅವರಿಗೆ ಈ ಚುನಾವಣೆಗಳು ಪೂರ್ಣ ಪ್ರಮಾಣದ ಅಗ್ನಿ ಪರೀಕ್ಷೆಯಾಗಿದ್ದು ಪಕ್ಷವನ್ನು ಗೆಲ್ಲಿಸಿ ವಿರೋಧಿಗಳ ಬಾಯಿಮುಚ್ಚಿಸಲು ಈ ಚುನಾವಣೆಗಳು ಸವಾಲಿನ ರೂಪದಲ್ಲಿ ಬಂದುನಿಂತಿವೆ.

ಇನ್ನು ಮಧ್ಯ ಪ್ರದೇಶಕ್ಕೆ ಬಂದರೆ 2005ರಿಂದಲೂ ಅಧಿಕಾರದಲ್ಲಿರುವ ಭಾಜಪದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಅವರು ಭಾಜಪವನ್ನು ಮೀರಿದ ವರ್ಚಸ್ವೀ ನಾಯಕರಾಗಿ ಹೊರ ಹೊಮ್ಮಿದ್ದು ಕಳೆದ ಹದಿನೈದು ವರ್ಷಗಳಿಂದಲೂ ಸತತವಾಗಿ ಅಧಿಕಾರ ಹಿಡಿದು ಕೂತಿರುವ ಭಾಜಪಕ್ಕೆ ಮಧ್ಯಪ್ರದೇಶ ಭದ್ರಕೋಟೆಯಾಗಿದ್ದು, ಈ ರಾಜ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯ ಇದೆ. ಈ ರಾಜ್ಯವನ್ನು ಭಾಜಪ ಏನಾದರೂ ಸೋತರೆ ದೇಶದ ಇತರೇ ರಾಜ್ಯಗಳಲ್ಲಿಯೂ ಇದು ಪರಿಣಾಮ ಬೀರಲಿದೆ. ತನ್ನ ಭದ್ರಕೋಟೆ ಎನಿಸಿಕೊಂಡ ರಾಜ್ಯದಲ್ಲಿ ಗೆದ್ದು ತನ್ನ ಇತರ ರಾಜ್ಯಗಳ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕಾಗಿರುವುದರಿಂದ ಇಲ್ಲಿ ಗೆಲ್ಲುವುದು ಭಾಜಪಕ್ಕೆ ಮುಖ್ಯವಾಗಿದೆ. ಅದೇ ರೀತಿ 2003ರ ಹೊತ್ತಿಗೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿದ್ದ ಭಿನ್ನಮತೀಯ ಚಟುವಟಿಕೆಗಳು ಮತ್ತು ದಿಗ್ವಿಜಯಸಿಂಗ್ ಅವರ ಸರ್ವಾಧಿಕಾರಿ ನಡವಳಿಕೆ ಅವರ ಪಕ್ಷದೊಳಗೇ ಅವರಿಗೆ ಶತ್ರುಗಳನ್ನು ಸೃಷ್ಟಿಸಿತ್ತು. ಇದರ ಲಾಭ ಪಡೆದ ಭಾಜಪ ಅವತ್ತು ಸುಲಭವಾಗಿ ಅಧಿಕಾರಕ್ಕೆ ಏರಿತ್ತು. ಇದೀಗ ಭಾಜಪ ಸತತವಾಗಿ ಹದಿನೈದು ವರ್ಷಗಳನ್ನು ಪೂರೈಸುತ್ತ ಬಂದಿದ್ದು, ಸಹಜವಾಗಿಯೇ ಆಡಳಿತ ವಿರೋಧಿ ಅಲೆಯೊಂದು ಸೃಷ್ಟಿಯಾಗಿದೆ. ಬಹುಶ: ಈ ಬಾರಿ ಆ ಅಲೆಯನ್ನು ಬಳಸಿಕೊಂಡು ಈ ರಾಜ್ಯವನ್ನು ಗೆಲ್ಲದೇ ಹೋದಲ್ಲಿ ಕಾಂಗ್ರೆಸ್ ಮಧ್ಯಪ್ರದೇಶದ ಮಟ್ಟಿಗೆ ಮತ್ತೆಂದೂ ತಲೆಯೆತ್ತಲಾರದು. ಈ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತೆ ಸೋತರೆ 2019ರ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷದ ಪರವಾಗಿ ಕೆಲಸ ಮಾಡಬಲ್ಲ ಕಾರ್ಯಕರ್ತರೇ ಇಲ್ಲದಂತಾಗಬಹುದು. ಹೀಗಾಗಿ ಹೇಗಾದರೂ ಮಾಡಿ ಮತ್ತೆ ಮಧ್ಯಪ್ರದೇಶವನ್ನು ಗೆದ್ದು ರಾಜ್ಯದ ಮತ್ತು ದೇಶದ ಉಳಿದ ರಾಜ್ಯಗಳ ಪಕ್ಷದ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಧನಾತ್ಮಕ ಸಂದೇಶವೊಂದನ್ನು ಕಾಂಗ್ರೆಸ್ ನೀಡಲೇ ಬೇಕಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ಈ ರಾಜ್ಯದ ಚುನಾವಣೆ ಕಾಂಗ್ರೆಸ್ ಮಟ್ಟಿಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ.

ಇನ್ನು ಛತ್ತೀಸ್‌ಗಡದಲ್ಲಿ ಭಾಜಪ ಅಧಿಕಾರ ಹಿಡಿದಿದ್ದು ಅಲ್ಲಿಯೂ ಭಾಜಪಕ್ಕೆ ಆಡಳಿತ ವಿರೋಧಿ ಅಲೆಯಿದೆ. ಅಲ್ಲಿರುವ ಹತ್ತು ಸಂಸತ್ ಸ್ಥಾನಗಳನ್ನು ಭಾಜಪ ಗೆಲ್ಲಬೇಕೆಂದರೆ ಮತ್ತೆ ಅಲ್ಲಿ ಅಧಿಕಾರ ಹಿಡಿಯಲೇಬೇಕಿದೆ.
 ಮಿಜೋರಾಂಗೆ ಬಂದರೆ ಅಲ್ಲಿ ಕೇವಲ ಒಂದೇ ಒಂದು ಲೋಕಸಭಾ ಸ್ಥಾನವಿದೆ. ಆದರೆ ಈಶಾನ್ಯ ಭಾರತದ ಒಂದೊಂದೇ ರಾಜ್ಯಗಳನ್ನು ಕಳೆದುಕೊಳ್ಳುತ್ತ ಬರುತ್ತಿರುವ ಕಾಂಗ್ರೆಸ್‌ಗೆ ಈ ರಾಜ್ಯವನ್ನು ಗೆದ್ದು ಉಳಿಸಿಕೊಂಡು ಮತ್ತೆ ಈಶಾನ್ಯರಾಜ್ಯದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಈ ರಾಜ್ಯವನ್ನು ಗೆಲ್ಲಲೇ ಬೇಕಿದೆ.
ಹೀಗೆ ಈ ವರ್ಷದ ಕೊನೆಯ ಭಾಗದಲ್ಲಿ ನಡೆಯಲಿರುವ ಈ ಚುನಾವಣೆಗಳು ಕಾಂಗ್ರೆಸ್ ಮತ್ತು ಭಾಜಪ ಪಕ್ಷಗಳ ಪಾಲಿಗೆ ಮಹತ್ವ ಪೂರ್ಣವಾಗಿದ್ದು, ಈ ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ಅವು ತಮ್ಮಿಂದ ಸಾಧ್ಯವಾಗಬಹುದಾದ ಎಲ್ಲ ಪ್ರಯತ್ನಗಳನ್ನೂ ಮಾಡಲಿವೆ 

Similar News