ದರೋಡೆಗೆ ಸಂಚು ಆರೋಪ: ಮೂವರ ಬಂಧನ, 43 ಮೊಬೈಲ್ ವಶ
ಬೆಂಗಳೂರು, ಜು.17: ದರೋಡೆಗೆ ಸಂಚು ಹಾಕುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಿರುವ ಇಲ್ಲಿನ ಆರ್ಎಂಸಿ ಯಾರ್ಡ್ ಠಾಣಾ ಪೊಲೀಸರು 4.5 ಲಕ್ಷ ಮೌಲ್ಯದ 43 ಮೊಬೈಲ್ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಗಂಗೊಂಡನಹಳ್ಳಿಯ ಸಿಖಂದರ್ ಪಾಷಾ(40), ಚಂದ್ರಾಲೇಔಟ್ನ ಗೋವಿಂದರಾಜ್(35), ಸೈಯದ್ ವಸೀಂ(26) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರ್ಎಂಸಿ ಯಾರ್ಡ್ನ ರಿಂಗ್ ರಸ್ತೆಯ ಮಾಡರ್ನ್ ಬ್ರೆಡ್ ಕಾರ್ಖಾನೆ ಬಳಿ ಕಳೆದ ಜು. 11 ರಂದು ಆಟೊ ನಿಲ್ಲಿಸಿಕೊಂಡು ಚಾಕು, ದೊಣ್ಣೆ ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಒಂಟಿಯಾಗಿರುವ ವ್ಯಕ್ತಿಗಳನ್ನೆ ಗುರಿಯಾಗಿಸಿಕೊಂಡು ಮೊಬೈಲ್ ಚಿನ್ನಾಭರಣ ಕಳವು ಮಾಡುತ್ತಿದ್ದರು. ಇವರ ವಶದಲ್ಲಿದ್ದ ಆಟೊ, ಸ್ಕೂಟರ್ ವಶಕ್ಕೆ ಪಡೆಯಲಾಗಿದ್ದು, ಮತ್ತಿಬ್ಬರ ಬಂಧನಕ್ಕೆ ತನಿಖೆ ಮುಂದುವರೆಸಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ಮಾಹಿತಿ ನೀಡಿದ್ದಾರೆ.