ಮಾತುಗಳಿಂದ ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ: ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Update: 2018-07-21 13:43 GMT

ಬೆಂಗಳೂರು, ಜು. 21: ‘ಪ್ರಧಾನಿ ಮೋದಿ ಒಬ್ಬ ನಾಟಕಕಾರ. ಇಂತಹ ನಾಟಕಕಾರರನ್ನು ನಾನು ಎಲ್ಲಿಯೂ ನೋಡಿಲ್ಲ. ಆದರೆ, ಮಾತುಗಳಿಂದ ಜನರನ್ನು ಹೆಚ್ಚು ದಿನ ಮರುಳು ಮಾಡಲು ಸಾಧ್ಯವಿಲ್ಲ. ಏಕೆಂದರೆ ಜನರಿಗೆ ಬೇಕಾಗಿರುವುದು ಕಾಮ್ ಕೀ ಬಾತ್. ಮನ್ ಕೀ ಬಾತ್ ಅಲ್ಲ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಇಲ್ಲಿನ ಗುರುನಾನಕ್ ಭವನದಲ್ಲಿ ಏರ್ಪಡಿಸಿದ್ದ ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಗೆ ಒಂದು ಸಿದ್ಧಾಂತವೇ ಇಲ್ಲ. ಕೇವಲ ಭಾವನಾತ್ಮಕ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸಿ ಆ ಮೂಲಕ ಗಲಭೆ ಸೃಷ್ಟಿಮಾಡುವುದೇ ಅವರ ಕೆಲಸ ಎಂದು ಟೀಕಿಸಿದರು.

ಅಪಪ್ರಚಾರದಿಂದ ಸೋಲು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಅಪಪ್ರಚಾರದಿಂದ ನಮಗೆ ಸೋಲಾಯಿತು. ಶೇಕಡವಾರು ಮತಗಳಿಕೆಯಲ್ಲಿ ಬಿಜೆಪಿಗಿಂತ ಮುಂದೆ ಇದ್ದೇವೆ. ಆದರೂ, ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆ ಚುನಾವಣೆ ಸೋಲಿನಿಂದ ಧೃತಿಗೆಡಬೇಡಿ. ಮತ್ತೆ ರೀಚಾರ್ಜ್ ಆಗುವ ಮೂಲಕ ಲೋಕಸಭೆ ಚುನಾವಣೆಗೆ ಸನ್ನದ್ಧರಾಗಬೇಕು ಎಂದು ಕರೆ ನೀಡಿದ ಸಿದ್ದರಾಮಯ್ಯ, ಮುಂಬರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಜ್ಜಾಗಬೇಕು. ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದು ಸಲಹೆ ನೀಡಿದರು. ನಮ್ಮ ಹಿಂದಿನ ಸರಕಾರ ಜನರಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿತ್ತು. ಆದರೆ, ಬಿಜೆಪಿ ಹಿಂದುತ್ವದ ಬಗ್ಗೆ ಹೆಚ್ಚು ಪ್ರಚಾರ ಮಾಡಿದರು. ಮೋದಿ ಸರಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿ ಹೇಳಿದರೂ ಪ್ರಯೋಜನವಾಗಲಿಲ್ಲ ಎಂದು ಹೇಳಿದರು.

ಈ ಬಾರಿಯ ಲೋಕಸಭೆ ಚುನಾವಣೆ ವೇಳೆ ಆ ರೀತಿ ಆಗುವುದಿಲ್ಲ. ಪ್ರಧಾನಿ ಮೋದಿ 5 ವರ್ಷದಲ್ಲಿ ಹೇಳಿದ್ದೇನು, ಮಾಡಿದ್ದೇನು ಎಂಬುದನ್ನು ಜನರಿಗೆ ವಿವರಿಸುವ ಕೆಲಸವನ್ನು ಮಾಡಬೇಕು. ಎಲ್ಲ ವರ್ಗದವರ ಪರವಾಗಿ ಕೆಲಸ ಮಾಡಿದ ಸರಕಾರ ನಮ್ಮದಾಗಿತ್ತು. ಆದರೆ ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯೇ ಇಲ್ಲ. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಉಲ್ಲೇಖಿಸಿದರು.

ಕೇಂದ್ರ ಸರಕಾರದಿಂದ 5 ವರ್ಷದಲ್ಲಿ ರಾಜ್ಯದ ರೈತರಿಗೆ ಆಗಿರುವ ಅನ್ಯಾಯ ಅಷ್ಟಿಷ್ಟಲ್ಲ. ರೈತರ ವಿಚಾರದಲ್ಲಿ ಹಲವು ಬಾರಿ ಬರೆದ ಪತ್ರಗಳಿಗೆ ಪ್ರಧಾನಿಯವರಿಂದ ಉತ್ತರವೇ ಬರಲಿಲ್ಲ. ಕೇಂದ್ರದ ಕಾರ್ಯಕ್ರಮಗಳೆಲ್ಲ ಬೋಗಸ್. ಅದರಿಂದ ಜನರಿಗೆ ಪ್ರಯೋಜನವಿಲ್ಲ. ಚುನಾವಣೆ ಪೂರ್ವದಲ್ಲಿ ಮೋದಿಯವರು ಘೋಷಿಸಿದ್ದು, ಬಳಿಕ ಜಾರಿಗೆ ತಂದ ಕಾರ್ಯಕ್ರಮಗಳೇನು? ಯಾವ ವಿಷಯದಲ್ಲಿ ಅವರು ಯೂ ಟರ್ನ್ ತೆಗೆದುಕೊಂಡರು ಎಂಬುದನ್ನು ಜನರಿಗೆ ವಿವರಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೋದಿಯವರು ಇಲ್ಲಿಗೆ ಬಂದು ನಮ್ಮ ಸರಕಾರವನ್ನು ಪರ್ಸಂಟೇಜ್ ಸರಕಾರ ಎಂದು ಟೀಕಿಸಿದರು. ಆದರೆ ಲೋಕಪಾಲ ಮಸೂದೆ ಕುರಿತು ಈವರೆಗೆ ಚಕಾರ ಎತ್ತಿಲ್ಲ ಎಂದ ಅವರು, ಬಿಜೆಪಿ ಸಮಾಜಕ್ಕೆ ಶಾಪ. ಲೋಕಸಭೆ ಚುನಾವಣೆಯಲ್ಲಿ ಆ ಪಕ್ಷವನ್ನು ಸೋಲಿಸುವುದೇ ನಮ್ಮ ಗುರಿ ಎಂದು ನುಡಿದರು.

ಉಪಮುಖ್ಯಮಂತ್ರಿ ಡಾ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರುಗಳು ಪಾಲ್ಗೊಂಡಿದ್ದರು.

‘ಡಿಸೆಂಬರ್ ವೇಳೆಗೆ ಲೋಕಸಭಾ ಚುನಾವಣೆ ಸಾಧ್ಯತೆ ಇದೆ. ಅಕ್ಟೋಬರ್ ಮೊದಲ ವಾರ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಈ ಚುನಾವಣೆ ಮಹತ್ವದ್ದು. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಮಟ್ಟದಲ್ಲಿ ಜಯ ಗಳಿಸಲು ಸಾಧ್ಯವಾಗಿಲ್ಲ. ಮೈಸೂರು, ಹಾಸನ, ಮಂಡ್ಯದಲ್ಲಿ ನಮಗೆ ಹಿನ್ನಡೆಯಾಗಿದೆ. ಕಾರ್ಯಕರ್ತರಿಗೆ ತೊಂದರೆಯಾಗುತ್ತಿದೆ. ಆದರೆ, ಮೈತ್ರಿ ಸರಕಾರ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಜತೆಗೆ, ಪಕ್ಷವನ್ನು ಬಲಪಡಿಸುವ ಅಗತ್ಯವಿದೆ. ಮುಖಂಡರು ಈ ಬಗ್ಗೆ ಹೆಚ್ಚು ಗಮನ ಕೊಡಬೇಕು’

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ

‘ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಅಂತಹ ಯಾವುದೇ ಆಸೆಯೂ ನನಗಿಲ್ಲ. ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಂಬ ಸುದ್ದಿಗಳು ಸುಳ್ಳು. ನನಗೆ ಅಂತಹ ಆಸಕ್ತಿ ಇಲ್ಲ. ಹೈಕಮಾಂಡ್ ತನ್ನನ್ನು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಿದೆ. ನಾನು ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಪಕ್ಷ ಬಯಸಿದೆ. ನಾಳೆ ದಿಲ್ಲಿಗೆ ಎಐಸಿಸಿಯಲ್ಲಿ ನಡೆಯಲಿರುವ ಪದಾಧಿಕಾರಿಗಳ ಸಭೆಗೆ ತೆರಳಲಿದ್ದು, ಹೈಕಮಾಂಡ್ ಜೊತೆ ಚರ್ಚಿಸುವೆ’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News