ನಕಾರಾತ್ಮಕ ಚಿಂತನೆ ಸಾಮಾಜಿಕ ಭಯೋತ್ಪಾದನೆಯಿದ್ದಂತೆ: ಡಾ.ಸಿ.ಎನ್.ಮಂಜುನಾಥ್

Update: 2018-07-21 16:22 GMT

ಬೆಂಗಳೂರು, ಜು.21: ಸಮಾಜದಲ್ಲಿರುವ ದೊಡ್ಡ ವಿಷವೆಂದರೆ ನಕಾರಾತ್ಮಕ ಚಿಂತನೆ. ಇದನ್ನು ಸಾಮಾಜಿಕ ಭಯೋತ್ಪಾದನೆ ಎಂದರೆ ತಪ್ಪಾಗಲಾರದು ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಕಾರಾತ್ಮಕ ಚಿಂತನೆಗಳು ತಮ್ಮ ಸುತ್ತಮುತ್ತಲಿನ ಪರಿಸರ, ಮನೆ, ಊರನ್ನೆ ಹಾಳು ಮಾಡಬಲ್ಲವು ಎಚ್ಚರಿಸಿದರು.

ನಕಾರಾತ್ಮಕ ಚಿಂತನೆ ಹೊಂದಿರುವ ವ್ಯಕ್ತಿ ತನ್ನ ಆರೋಗ್ಯವನ್ನು ಕೆಡಿಸಿಕೊಳ್ಳುವುದಲ್ಲದೆ, ಮತ್ತೊಬ್ಬರ, ಪರಿಸರದ ಆರೋಗ್ಯವನ್ನು ಕೆಡಿಸಬಲ್ಲನು. ಇತ್ತೀಚಿನ ದಿನಗಳಲ್ಲಿ ಇಂತವರ ಸಂತತಿ ಹೆಚ್ಚಾಗುತ್ತಿದೆ. ಅದರಲ್ಲೂ ಮಾಧ್ಯಮಗಳು ನಕಾರಾತ್ಮಕ ಚಿಂತನೆಗಳನ್ನಷ್ಟೆ ಉತ್ಪಾದಿಸುವ ಸಂಸ್ಥೆಗಳಾಗಿ ಪರಿವರ್ತನೆಗೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮನುಷ್ಯನಿಗಿಂತ ಕಾನೂನು ದೊಡ್ಡದಲ್ಲ: ಬ್ರಿಟಿಷರು ದೇಶದ ಜನತೆಯ ಹಿತಾಸಕ್ತಿಗೆ ವಿರುದ್ಧವಾಗಿ ಕೆಲವು ಜನವಿರೋಧಿ ಕಾನೂನುಗಳನ್ನು ಜಾರಿ ಮಾಡಿದ್ದರು. ಆದರೆ, ಇಂದಿಗೂ ಆ ಕಾನೂನು ಮುಂದುವರೆಯುತ್ತಿರುವುದು ದುರಂತವಾಗಿದೆ. ಇಂತಹ ಜನವಿರೋಧಿ ಕಾನೂನುಗಳಿಂದ ಜನಸಾಮಾನ್ಯರು ಪರದಾಡುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ತುರ್ತು ಚಿಕಿತ್ಸಾ ಘಟಕಕ್ಕೆ ಅಡ್ಮಿಟ್ ಆಗಬೇಕಾದರೆ 2 ಸಾವಿರ ರೂ. ಕಡ್ಡಾಯ ಆಗಿತ್ತು. ಇದರಿಂದ ಅನೇಕ ಬಡ ರೋಗಿಗಳು ಹಣವಿಲ್ಲದ ಕಾರಣದಿಂದಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದನ್ನು ಮನಗಂಡು ಕಾನೂನಿಗೆ ತಿದ್ದುಪಡಿ ತಂದು ತುರ್ತು ಚಿಕಿತ್ಸಾ ಘಟಕಕ್ಕೆ ಉಚಿತವಾಗಿ ಅಡ್ಮಿಟ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು ಎಂದು ಅವರು ತಿಳಿಸಿದರು.

ಜಯದೇವ ಆಸ್ಪತ್ರೆಯಲ್ಲಿ ರೋಗಿಗಳ ಕಣ್ಣಲ್ಲಿ ಕಾಣುವ ಅಸಹಾಯಕತೆ, ಬಡತನವನ್ನು ನೋಡಿ ಉಚಿತ ಚಿಕಿತ್ಸೆಯನ್ನು ನೀಡುವಂತಹ ಹೊಸ ಕಾನೂನನ್ನು ಜಾರಿ ಮಾಡಲಾಗಿದೆ. ಇದರಿಂದ ಬಿಪಿಎಲ್ ಕಾರ್ಡ್ ಸೌಲಭ್ಯವಿಲ್ಲದ ಕಡು ಬಡವರಿಗೂ ಉಚಿತ ಚಿಕಿತ್ಸೆ ಲಭಿಸುವಂತಾಗಿದೆ. ಹೀಗಾಗಿ ಮನುಷ್ಯನಿಗಿಂತ ಕಾನೂನು ದೊಡ್ಡದಲ್ಲವೆಂಬುದು ಜಯದೇವ ಆಸ್ಪತ್ರೆಯ ಧ್ಯೇಯವಾಕ್ಯವಾಗಿದೆ ಎಂದು ಅವರು ತಿಳಿಸಿದರು.

ಗರ್ಭಾವಸ್ಥೆಯಲ್ಲೆ ಒತ್ತಡ: ಇಂದಿನ ಮಕ್ಕಳಿಗೆ ಗರ್ಭಾವಸ್ಥೆಯಲ್ಲೆ ಒತ್ತಡ ಪ್ರಾರಂಭವಾಗಿದೆ. ಇದು ಎಲ್ಲ ರೋಗಗಳಿಗೂ ಮೂಲವಾಗಿದೆ. ಆದರೆ, ನಮ್ಮ ಶಿಕ್ಷಣ ವ್ಯವಸ್ಥೆ ಒತ್ತಡವನ್ನು ಕಡಿಮೆ ಮಾಡುವ ಬದಲು ಮತ್ತಷ್ಟು ಹೆಚ್ಚು ಮಾಡುವ ಶಿಕ್ಷಣ ಕ್ರಮವನ್ನೆ ಅನುಸರಿಸುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರು ಬಾಲ್ಯಾವಸ್ಥೆಯಿಂದಲೆ ಮಕ್ಕಳಿಗೆ ಒತ್ತಡ ಬೀಳದಂತೆ ಜಾಗ್ರತೆ ವಹಿಸಬೇಕು ಎಂದು ಅವರು ಹೇಳಿದರು. ಈ ವೇಳೆ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಉಪಸ್ಥಿತರಿದ್ದರು.

ಮುಖ್ಯಾಂಶಗಳು
-ಸರಕಾರಿ ಸೇವೆಗಳು ಜನಪರವಾಗಿ ಇರಬೇಕಾದರೆ ಅಧಿಕಾರ ವಿಕೇಂದ್ರೀಕರಣವಾಗಬೇಕು. ಪ್ರತಿಯೊಂದು ಕಡತಗಳ ವಿಲೇವಾರಿಗೂ ವಿಧಾನಸೌಧಕ್ಕೆ ಹೋಗುವುದನ್ನು ತಪ್ಪಿಸಬೇಕು.
-ಶೇ.50ರಷ್ಟು ರೋಗಗಳಿಗೆ ಬದಲಾದ ಜೀವನ ಶೈಲಿ ಕಾರಣವಾಗಿದೆ.
-ಕಳೆದ 10ವರ್ಷದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಶೇ.400ರಷ್ಟು ಬೆಳೆದಿದೆ.
-ಜಯದೇವ ಹೃದ್ರೋಗ ಸಂಸ್ಥೆಯು ದಕ್ಷಿಣ ಏಷ್ಯಾದಲ್ಲಿಯೆ ದೊಡ್ಡ ಸಂಸ್ಥೆಯಾಗಿದೆ.
-ಉತ್ತಮ ಆಹಾರ, ವ್ಯಾಯಾಮ, ಸಕಾರಾತ್ಮಕ ಚಿಂತನೆಗಳಿಂದ ರೋಗಗಳನ್ನು ತಡೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News