ಬೆಂಗಳೂರು: ವಿದ್ಯುತ್ ತಂತಿ ತಗುಲಿ ದಂಪತಿ ಮೃತ್ಯು

Update: 2018-07-22 12:24 GMT

ಬೆಂಗಳೂರು, ಜು.22: ಬೀದಿ ವಿದ್ಯುತ್ ಕಂಬದ ತಂತಿ ತಗುಲಿ ದಂಪತಿ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಬಂಡೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ತಮಿಳುನಾಡು ರಾಜ್ಯದ ಮಧುರೈ ಮೂಲದ ವೀರಣ್ಣ ಮತ್ತು ಲಾವಣ್ಯ ಎಂಬವರು ಮೃತಪಟ್ಟಿರುವ ದಂಪತಿ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಡೆಪಾಳ್ಯದಲ್ಲಿದ್ದ ಮನೆಯ ಮೊದಲ ಮಹಡಿಯಲ್ಲಿ ದಂಪತಿ ವಾಸವಾಗಿದ್ದರು. ಕಟ್ಟಡಕ್ಕೆ ತಾಗಿಕೊಂಡಂತೆ ವಿದ್ಯುತ್ ಕಂಬದಿಂದ ತಂತಿ ಎಳೆದಿದ್ದರು. ಶನಿವಾರ ಎಂದಿನಂತೆ ಲಾವಣ್ಯ ಬಟ್ಟೆ ತೊಳೆದು, ರಾತ್ರಿ ವೇಳೆ ಒಣಗಿದ್ದ ಬಟ್ಟೆ ತೆಗೆಯುವಾಗ ಏಕಾಏಕಿ ವಿದ್ಯುತ್ ಹರಿಯುತ್ತಿದ್ದ ತಂತಿ ಮುಟ್ಟಿದ್ದಾರೆ. ಇದರ ಪರಿಣಾಮ ಕ್ಷರ್ಣಾರ್ಧದಲ್ಲಿ ಜೋರಾಗಿ ಕೂಗಿಕೊಂಡಿದ್ದಾರೆ. ಗಾಬರಿಗೊಂಡು ಪತಿ ವೀರಣ್ಣ, ರಕ್ಷಿಸಲು ಹೋಗಿ ಮುಟ್ಟಿ, ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ದಂಪತಿ ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆ ಕಂಡುಕೊಂಡಿದ್ದರು. ದಂಪತಿಗೆ ಒಂದು ಗಂಡು, ಹೆಣ್ಣು ಮಗುವಿತ್ತು. ಜೀವನೋಪಾಯಕ್ಕಾಗಿ ಚಿಕ್ಕ ಅಂಗಡಿಯೊಂದನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News