2019ರ ಲೋಕಸಭಾ ಚುನಾವಣೆ ಮತ್ತು ಅವಿಶ್ವಾಸ ನಿರ್ಣಯ

Update: 2018-07-27 18:32 GMT

ನಿಜವಾಗಿ ಹೇಳಬೇಕೆಂದರೆ ಈ ಅವಿಶ್ವಾಸ ನಿರ್ಣಯದಿಂದ ಮೋದಿಗಿಂತ ರಾಹುಲ್ ಗಾಂಧಿಯೇ ಹೆಚ್ಚಿನದನ್ನು ಕಳೆದುಕೊಳ್ಳುವ ಭಯವಿತ್ತು. ಆದರೆ ಕಾಂಗ್ರೆಸ್ ಅಧ್ಯಕ್ಷ ಯಾರನ್ನೂ ನಿರಾಶೆಗೊಳಿಸಲಿಲ್ಲ. ಅವರು ಅದ್ಭುತ ಸಂಸದೀಯ ನಿರ್ವಹಣೆಯನ್ನು ಪ್ರದರ್ಶಿಸುವ ಮೂಲಕ ತಮ್ಮ ಮತ್ತು ತಮ್ಮ ಪಕ್ಷದ ಮೇಲಿದ್ದ ನಂಬಿಕೆಯನ್ನು ಎತ್ತಿಹಿಡಿಯುವಲ್ಲಿ ಸಫಲರಾಗಿದ್ದಾರೆ. ಆಮೂಲಕ ಅವರು ಒಂದು ಸರಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಬಿಜೆಪಿಯ ಸಚಿವರನ್ನು ಪ್ರಚೋದಿಸಲು ಮತ್ತು ಚುಚ್ಚಲು ಸಫಲರಾಗಿದ್ದಾರೆ.


ಶುಕ್ರವಾರದಂದು ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯ ಮಂಡನೆಯ ಫಲಿತಾಂಶದ ಬಗ್ಗೆ ಯಾರಿಗೂ ಸಂಶಯವಿರಲಿಲ್ಲ. ಸಂಖ್ಯಾಬಲ ಮತ್ತು ಮಾತಿನಬಲ ಎರಡರಲ್ಲೂ ನರೇಂದ್ರ ಮೋದಿ ಸರಕಾರ ಮೇಲುಗೈ ಸಾಧಿಸುವುದರಲ್ಲಿ ಯಾರಿಗೂ ಸಂಶಯವಿರಲಿಲ್ಲ. ಸದನದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ನಿರೀಕ್ಷಿತ ಆದರೆ ತೃಪ್ತಿಕರವಲ್ಲದ ಗೆಲುವು ಸಾಧಿಸಿದರೆ, ವಿಪಕ್ಷಗಳು ತೃಪ್ತಿದಾಯಕ ಸೋಲನ್ನು ಸ್ವೀಕರಿಸಿದವು. ಈ ಅವಿಶ್ವಾಸ ನಿರ್ಣಯವು ಒಂದು ಹಂತದಲ್ಲಿ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ನಡುವಿನ ಸಮರವಾಗಿ ಬದಲಾಯಿತಾದರೂ ಈ ಯುದ್ಧದಲ್ಲಿ ಇಬ್ಬರು ಯೋಧರೂ ಜಯಗಳಿಸಲಿಲ್ಲ. ಕೊನೆಯಲ್ಲಿ ರಾಹುಲ್ ಗಾಂಧಿ ಹೇಳಿಕೊಳ್ಳುವಷ್ಟು ಕೆಟ್ಟ ನಿರ್ವಹಣೆ ನೀಡಲಿಲ್ಲ. ಆದರೆ, ಮೋದಿ ಮಾತ್ರ ಖಂಡಿತವಾಗಿಯೂ ಈ ಹಿಂದೆ ಇದಕ್ಕಿಂತಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಈ ಅವಿಶ್ವಾಸ ನಿರ್ಣಯದಿಂದ ಮೋದಿಗಿಂತ ರಾಹುಲ್ ಗಾಂಧಿಯೇ ಹೆಚ್ಚಿನದನ್ನು ಕಳೆದುಕೊಳ್ಳುವ ಭಯವಿತ್ತು. ಆದರೆ ಕಾಂಗ್ರೆಸ್ ಅಧ್ಯಕ್ಷ ಯಾರನ್ನೂ ನಿರಾಶೆಗೊಳಿಸಲಿಲ್ಲ. ಅವರು ಅದ್ಭುತ ಸಂಸದೀಯ ನಿರ್ವಹಣೆಯನ್ನು ಪ್ರದರ್ಶಿಸುವ ಮೂಲಕ ತಮ್ಮ ಮತ್ತು ತಮ್ಮ ಪಕ್ಷದ ಮೇಲಿದ್ದ ನಂಬಿಕೆಯನ್ನು ಎತ್ತಿಹಿಡಿಯುವಲ್ಲಿ ಸಫಲರಾಗಿದ್ದಾರೆ. ಆಮೂಲಕ ಅವರು ಒಂದು ಸರಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಬಿಜೆಪಿಯ ಸಚಿವರನ್ನು ಪ್ರಚೋದಿಸಲು ಮತ್ತು ಚುಚ್ಚಲು ಸಫಲರಾಗಿದ್ದಾರೆ. ರಾಹುಲ್ ಗಾಂಧಿಯ ಮಾತುಗಳು ಎಷ್ಟೊಂದು ಪರಿಣಾಮಕಾರಿಯಾಗಿತ್ತೆಂದರೆ ಬಿಜೆಪಿ ಸಚಿವರು ಸದನದಲ್ಲಿ ಗದ್ದಲವೆಬ್ಬಿಸುವ ಮೂಲಕ ಕಲಾಪ ಮುಂದೂಡುವಂತೆ ಮಾಡಬೇಕಾಯಿತು.

ಒಂದು ಉತ್ತಮ ನಿರ್ವಹಣೆ ನೀಡುವುದಕ್ಕಿಂತಲೂ ಮುಖ್ಯವಾಗಿ ರಾಹುಲ್ ಗಾಂಧಿಗೆ ಒತ್ತಡದಿಂದ ಹೊರಬರುವ ಅಗತ್ಯವಿತ್ತು. ತಾನು ಎಲ್ಲ ರೀತಿಯಲ್ಲೂ ದೇಶದ ಪ್ರಧಾನಿ ಹುದ್ದೆಗೆ ಸಮರ್ಥನಾಗಿದ್ದೇನೆ ಎಂದು ತನಗೂ ಹಾಗೂ ಕಾಂಗ್ರೆಸ್ ಮತ್ತು ಅದರ ಹೊರಗಿರುವ ರಾಜಕೀಯ ವಲಯಕ್ಕೆ ಸಾಬೀತುಪಡಿಸುವ ಅನಿವಾರ್ಯ ಅವರಿಗಿತ್ತು. ತಾನು ಯಾವುದೇ ವೇದಿಕೆಯಲ್ಲಿ ಮಾತನಾಡಬಲ್ಲೆ, ತಾನು ನಿತ್ರಾಣನಾಗಿಲ್ಲ, ಯಾವುದೇ ರೀತಿಯ ಅನಿಯಂತ್ರಿತ ಸಮರವನ್ನು ಎದುರಿಸಲು ಸಮರ್ಥನಾಗಿದ್ದೇನೆ ಮತ್ತು ಅತ್ಯಂತ ಪರಿಣಾಮಕಾರಿ ಮತ್ತು ಅತ್ಯಂತ ಕಟುವಾದ ಎದುರಾಳಿಯ ಜೊತೆ ಹೋರಾಡಲೂ ಭಯ ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸುವ ಅಗತ್ಯ ರಾಹುಲ್ ಗಾಂಧಿಗಿತ್ತು. ನರೇಂದ್ರ ಮೋದಿಯ ಎದುರು ನಿಲ್ಲಲು ರಾಹುಲ್ ಗಾಂಧಿಗೆ ಭಯವಿಲ್ಲ ಎಂಬುದನ್ನು ತಿಳಿಯಲು ಬಯಸಿದ್ದ ಮಿತ್ರಪಕ್ಷಗಳಿಗೂ ಅವರು ಉತ್ತರ ನೀಡುವ ಅಗತ್ಯವಿತ್ತು. ಅದೆಲ್ಲವನ್ನೂ ರಾಹುಲ್ ಗಾಂಧಿ ಸುಲಭವಾಗಿ ಮಾಡಿದ್ದಾರೆ.

ಸದನದಲ್ಲಿ ತಮ್ಮ ಮನಸ್ಸಿನಲ್ಲಿದ್ದ ವಿಚಾರಗಳನ್ನೆಲ್ಲ ಹೊರಹಾಕಿದ ರಾಹುಲ್ ಆತ್ಮವಿಶ್ವಾಸದಿಂದ ಕೂಡಿದ ಭಾಷಣವನ್ನು ಮಾಡಿದರು. ಆಡಳಿತರೂಡ ಪಕ್ಷದ ಸದಸ್ಯರು ಗದ್ದಲವೆಬ್ಬಸುತ್ತಿದ್ದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕಾಂಗ್ರೆಸ್ ಅಧ್ಯಕ್ಷ ತಮ್ಮ ಮಾತುಗಳನ್ನು ಮುಂದುವರಿಸಿದ್ದರು. ಈ ಸಂದರ್ಭದಲ್ಲಿ ಅವರು ಜಾತ್ಯತೀತತೆ ಮತ್ತು ಕೋಮು ಸಂಬಂಧ ವಿಷಯಗಳ ಬಗ್ಗೆ ಪ್ರಸ್ತಾಪಿಸದೆ, ಸಂವಿಧಾನದ ರಕ್ಷಣೆ, ಬಿಜೆಪಿ ಬಂಡವಾಳಶಾಹಿಗಳನ್ನು ಪೋಷಿಸುತ್ತಿರುವುದು ಹಾಗೂ ಇತರ ಹಲವು ಮುಖ್ಯ ವಿಷಯಗಳ ಬಗ್ಗೆ ಮಾತನಾಡಿದರು. ಅನಪೇಕ್ಷಿತವಾಗಿದ್ದರೂ ಖಂಡಿತವಾಗಿಯೂ ಇದು ಸಾರ್ವಜನಿಕ ಸ್ಥಳದಲ್ಲಿ ರಾಷ್ಟ್ರೀಯ ಪ್ರೇಕ್ಷಕರ ಮುಂದೆ ನಡೆಸಿದ ಖಾಸಗಿ ಸಮಾರಂಭದಂತಿತ್ತು. ಈಗಷ್ಟೇ ಅನ್ವೇಷಣೆಯ ಪ್ರಯಾಣವನ್ನು ಮುಗಿಸಿದವರಂತೆ, ಇದೇ ಮೊದಲ ಬಾರಿ ಓರ್ವ ಉತ್ತಮ ಹಿಂದೂ, ಓರ್ವ ಕಾಂಗ್ರೆಸ್ಸಿಗ ಅಥವಾ ಶಿವ ಭಕ್ತನಾಗಿರುವುದರ ಪ್ರಾಮುಖ್ಯತೆಯನ್ನು ಅರಿತಂತಿದ್ದ ರಾಹುಲ್ ಗಾಂಧಿ ತಪ್ಪೊಪ್ಪಿಗೆಯ ಮೂಡ್‌ನಲ್ಲಿದ್ದವರಂತೆ ಕಂಡುಬಂದರು. ಅವರ ಹೇಳಿಕೆಗಳನ್ನು ಕಾಂಗ್ರೆಸ್ ನಾಯಕನ ರಾಜಕೀಯ ತತ್ವದಂತೆ ಕಾಣದೆ ವೈಯಕ್ತಿಕ ಹೇಳಿಕೆ ಎಂದೇ ವ್ಯಾಖ್ಯಾನಿಸಲಾಯಿತು. ರಾಹುಲ್ ತಮ್ಮ ನಿರ್ವಹಣೆ ಬಗ್ಗೆ ತೃಪ್ತಿ ಹೊಂದಿರುವುದು ಸ್ಪಷ್ಟ.

ನಂಬಲಸಾಧ್ಯವೆಂಬಂತೆ, ರಾಹುಲ್ ಗಾಂಧಿ ತಮ್ಮ ಕುರ್ಚಿಯಿಂದ ಎದ್ದು ಆಡಳಿತ ಪಕ್ಷದ ಸದಸ್ಯರು ಕುಳಿತಿದ್ದ ಸ್ಥಳಕ್ಕೆ ತೆರಳಿ ಪ್ರಧಾನಿ ಮೋದಿಯನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದರು. ಅದು ಅತ್ಯಂತ ಅಸ್ವಾಭಾವಿಕ, ಗೊಂದಲದ, ಪೇಚಿಗೆ ಸಿಲುಕಿಸುವ ಮತ್ತು ಅಸಂಸದೀಯ ನಡೆಯಾಗಿತ್ತು. ಅದಕ್ಕಾಗಿ ಅವರು ಸ್ಪೀಕರ್ ಅವರಿಂದ ಅರ್ಹ ಟೀಕೆಯನ್ನೂ ಎದುರಿಸಬೇಕಾಯಿತು. ಮೊದಲಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಾಹುಲ್ ಗಾಂಧಿಯನ್ನು ತೀವ್ರ ತರಾಟೆಗೆ ತೆಗೆದುಕೊಡರೆ ನಂತರ ಪ್ರಧಾನಿ ಮೋದಿ ತಮ್ಮ ಮಾತುಗಳಿಂದ ಸುಲಭವಾಗಿ ರಾಹುಲ್ ಮಾತುಗಳಿಗೆ ತಿರುಗೇಟು ನೀಡಿದರು. ನೆಹರೂವಾದಿ ಪರಂಪರೆಯ ಹೊರೆಯನ್ನು ಹೊತ್ತಿದ್ದರೂ ರಾಹುಲ್ ಗಾಂಧಿಗೆ ಸಾರ್ವಜನಿಕ ಜೀವನ ಒಂದು ವೈಯಕ್ತಿಕ ವಿಷಯವಾಗಿಯೇ ಉಳಿದಿದೆ ಎಂಬುದು ಸದನದಲ್ಲಿ ಅವರು ಮೋದಿಯನ್ನು ಅಪ್ಪುವುದರ ಮೂಲಕ ಸ್ಪಷ್ಟವಾಗುತ್ತದೆ ಮತ್ತು ಗಾಂಧಿ ಪರಿವಾರದ ಅನರ್ಹ ಆಕಾಂಕ್ಷಿ ಎಂದು ರಾಹುಲ್ ಗಾಂಧಿಯನ್ನು ಕರೆಯುವ ಮೂಲಕ ನರೇಂದ್ರ ಮೋದಿ ರಾಹುಲ್‌ರನ್ನು ಈ ಪರಂಪರೆಯ ಜೊತೆ ಮತ್ತೆ ತಳಕು ಹಾಕಲು ಹಿಂಜರಿಯಲಿಲ್ಲ. ಆದರೆ ಈ ರೀತಿ ಮಾಡುವ ಆತುರದಲ್ಲಿ ಮೋದಿ ರಾಹುಲ್ ಗಾಂಧಿಗೆ ಒಂದಷ್ಟು ಸಹಾಯವನ್ನೇ ಮಾಡಿದ್ದಾರೆ. ರಾಹುಲ್ ಗಾಂಧಿ ಐತಿಹಾಸಿಕವಾಗಿ ಲೋಪಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ನಾಯಕ ಎಂದು ಹೇಳುವ ಮೂಲಕ ಅವರು ಕಾಂಗ್ರೆಸ್ ಕುಟುಂಬದ ಮುಖ್ಯಸ್ಥ ಎಂಬುದನ್ನು ದೃಢಪಡಿಸಿದ್ದಾರೆ. ಅಷ್ಟು ಮಾತ್ರವಲ್ಲ, ತಮ್ಮನ್ನು ಹಳೆ ಭಾರತ, ಅದರ ದ್ವೇಷ ಮತ್ತು ದೌರ್ಜನ್ಯದ ಕೈದಿ ಎಂದು ಸಾರುವ ಮೂಲಕ ಮೋದಿ ಬಿಜೆಪಿಗೇನೂ ಒಳಿತನ್ನು ಮಾಡಿಲ್ಲ.

1979, 1990, 1997ರ ಘಟನೆಗಳನ್ನು ಮೋದಿ ಉಲ್ಲೇಖಿಸಿರುವುದು ಆ ಸಮಯದಲ್ಲಿ ಇದ್ದ ಕಾಂಗ್ರೆಸ್ ವಿರೋಧಿ ಅಲೆಯ ಬಗ್ಗೆ ಮರುಜ್ಞಾಪಿಸುವ ಉದ್ದೇಶವನ್ನು ಹೊಂದಿತ್ತು. ಆದರೆ ತಮ್ಮನ್ನು ಸುಭಾಶ್ಚಂದ್ರ ಬೋಸ್, ವಲ್ಲಭಭಾಯ್ ಪಟೇಲ್, ಜಯಪ್ರಕಾಶ ನಾರಾಯಣ, ಮೊರಾರ್ಜಿ ದೇಸಾಯಿ, ಚಂದ್ರಶೇಖರ್, ಪ್ರಣಬ್ ಮುಖರ್ಜಿ, ಶರದ್ ಪವಾರ್ ಮುಂತಾದ ನೆಹರೂ ವಿರೋಧಿಗಳು ಎಂದು ನಂಬಲಾಗಿರುವವರ ಸಾಲಿನಲ್ಲಿ ನಿಲ್ಲಿಸುವ ಮೂಲಕ ಮೋದಿ, ಕಾಂಗ್ರೆಸ್ ಐತಿಹಾಸಿಕವಾಗಿ ನಿರ್ವಹಿಸಿರುವ ಪಾತ್ರ ಮತ್ತು ಅದರ ಪ್ರಸ್ತುತತೆಯನ್ನು ಮತ್ತೊಮ್ಮೆ ದೃಢಪಡಿಸಿದಂತಾಗಿದೆ. ತಮ್ಮನ್ನು ಒಂದು ಬಿಲಿಯನ್ ಭಾರತೀಯರ ಕನಸುಗಳ ಸಾಕಾರ ರೂಪ ಮತ್ತು ಅವರ ಗೌರವ ಎಂದು ಬಿಂಬಿಸುವ ಪ್ರವೃತ್ತಿಯನ್ನು ಹೊಂದಿರುವ ಮೋದಿ ತಮ್ಮ ಎಂದಿನ ವಿಶಿಷ್ಟ ಫುಡಾರಿಯಂಥ ವರ್ತನೆಯನ್ನು ಮುಂದುವರಿಸಿದ್ದರು. ಆದರೆ ಅವರು ತಮ್ಮ ಸರಕಾರದ ಸಾಧನೆಗಳ ಬಗ್ಗೆ ಹೇಳುವಾಗ ಪತ್ರಿಕಾ ಪ್ರಕಟಣೆಗಳನ್ನು ಓದುತ್ತಿರುವಂತೆ ಕಂಡುಬಂದರು.

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವಿಪಕ್ಷಗಳು ಮಾಡಿದ ಟೀಕೆಯ ವಿರುದ್ಧ ಸಶಸ್ತ್ರಪಡೆಗಳನ್ನು ಎತ್ತಿಕಟ್ಟುವ ಪ್ರಯತ್ನ ಆ ಘಟನೆಯಷ್ಟೇ ಸಂಶಯವನ್ನು ಮೂಡಿಸುವಂತಿತ್ತು. ಎಲ್ಲದಕ್ಕಿಂತಲೂ ಮಿಗಿಲಾಗಿ, ನನಗೆ ರಾಜಕೀಯ ಇಚ್ಛಾಶಕ್ತಿಯಿದೆ ಎಂದು ಹೇಳುವ ಮೂಲಕ ಮೋದಿ ತಮ್ಮ ಎಂದಿನ ಸ್ವ-ರತಿಯ ಮತ್ತು ಸ್ವ-ಅಭಿನಂದನೆಯ ದಾಟಿಯ ಮಾತುಗಳನ್ನು ಇಲ್ಲೂ ಮುಂದುವರಿಸಿದರು. ಈ ರೀತಿಯ ಗುಣವನ್ನು ಬಹುತೇಕ ಎಲ್ಲ ಸರ್ವಾಧಿಕಾರಿ ರಾಜಕೀಯ ಮುಖಂಡರಲ್ಲಿ ಕಾಣಬಹುದು. ದೇಶಕ್ಕೆ ತಾನೇನು ನೀಡಬಲ್ಲೆ ಎಂಬುದನ್ನು ತಿಳಿಸಲು ರಾಹುಲ್ ಗಾಂಧಿ ವಿಫಲವಾದರೆ, ಮೋದಿಗೂ ಕೂಡಾ ಅದಕ್ಕಿಂತ ಹೆಚ್ಚಿನದೇನನ್ನೂ ಹೇಳಲು ಸಾಧ್ಯವಾಗಿಲ್ಲ. ಅಷ್ಟರ ಮಟ್ಟಿಗೆ, ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಭಾವಿಸಲಾಗಿದ್ದ ಚರ್ಚೆಯು ಒಂದು ಸತ್ವರಹಿತ, ಪೇಲವ ವ್ಯವಹಾರವಾಗಿ ಬದಲಾಗಿತ್ತು.

ಖಂಡಿತವಾಗಿಯೂ, ಸರಕಾರ ಅರುಣ್ ಜೇಟ್ಲಿಯವರ ಉಪಸ್ಥಿತಿಯನ್ನು ಬಯಸಿತ್ತು. ಬಹುಮುಖ್ಯವಾಗಿ, ಮೋದಿ ಸರಕಾರಕ್ಕೆ ನೋಟಿಸ್ ಜಾರಿ ಮಾಡುವ ಕೆಲಸ ಎನ್‌ಡಿಎಯ ಮಿತ್ರರಾದ ರಾಮವಿಲಾಸ್ ಪಾಸ್ವಾನ್ ಹಾಗೂ ಅನುಪ್ರಿಯ ಪಟೇಲ್ ಮೇಲಿತ್ತು. ಮೋದಿ ಸರಕಾರ ದಲಿತರ ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವ ಆಸಕ್ತಿಯನ್ನು ಹೊಂದಿಲ್ಲ ಎಂದು ಆರೋಪಿಸಿದರು ಪಾಸ್ವಾನ್, ಸಂವಿಧಾನದ ತಿದ್ದುಪಡಿ ಮತ್ತು ಸಾಮಾಜಿಕ ನ್ಯಾಯದ ಅದರ ಭರವಸೆಯನ್ನು ಕಡಿಮೆಗೊಳಿಸಲು ಮಿತ್ರಪಕ್ಷಗಳು ಅವಕಾಶ ನೀಡುವುದಿಲ್ಲ ಎಂದು ತಿಳಿಸುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಈ ಚರ್ಚೆಯು ಮೋದಿ ಅಧಿಕಾರಾವಧಿಯ ಬಲ ಮತ್ತು ಲೋಪಗಳನ್ನು ಬಹಿರಂಗಪಡಿಸಿದೆ. ದೇಶಾದ್ಯಂತವಿರುವ ಪ್ರಗತಿಪರ, ಉದಾರವಾದಿ, ಪ್ರಜಾಸತಾತ್ಮಕ ಧ್ವನಿಗಳು ಮತ್ತು ಶಕ್ತಿಗಳು ಒಂದಾಗಿ ಮೋದಿ ಆಡಳಿತಕ್ಕೆ ಸಂಘಟಿತ ಮತ್ತು ತರ್ಕಬದ್ಧ ಸವಾಲನ್ನು ಒಡ್ಡಲು ಅಗತ್ಯವಿರುವ ರಾಜಕೀಯ ಜಾಣ್ಮೆ ಮತ್ತು ಕೌಶಲ್ಯವನ್ನು ಒದಗಿಸುವ ಹೊಣೆ ಕಾಂಗ್ರೆಸ್ ಹಾಗೂ ಅದರ ನಾಯಕತ್ವದ ಮೇಲಿದೆ. ಅಷ್ಟಕ್ಕೂ 2019ರ ಯುದ್ಧ ಇನ್ನೂ ನಿರ್ಣಾಯಕ ಹಂತ ತಲುಪಿಲ್ಲ.

Writer - ಹರೀಶ್ ಖರೆ

contributor

Editor - ಹರೀಶ್ ಖರೆ

contributor

Similar News