ಜಗತ್ತಿನಾದ್ಯಂತ ಗುಂಪು ಹತ್ಯೆಗಳು ನಡೆಯುತ್ತದೆ ಎಂದ ವಸುಂಧರಾ ರಾಜೆ
ಹೊಸದಿಲ್ಲಿ, ಜು.31: ಗುಂಪು ಹತ್ಯೆ ಪ್ರಕರಣಗಳು ಜಗತ್ತಿನಾದ್ಯಂತ ನಡೆಯುತ್ತದೆ. ನನ್ನ ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಬಗ್ಗೆ ತಿಳಿಯಬೇಕಾದರೆ ನಾನು ದೇವರಿಗಿಂತಲೂ ಹೆಚ್ಚಾಗಿರಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ವಸುಂಧರಾ, ಗುಂಪು ಥಳಿತ ಪ್ರಕರಣಗಳು ರಾಜ್ಯದಲ್ಲಿ ಹೊಸತಾಗಿ ಏನೂ ನಡೆಯುತ್ತಿಲ್ಲ ನಿರುದ್ಯೊಗ ಸಮಸ್ಯೆಯೇ ಇದಕ್ಕೆ ಕಾರಣ ಎಂದಿದ್ದಾರೆ.
“ಇದು ಜಗತ್ತಿನಾದ್ಯಂತ ನಡೆಯುತ್ತಿದೆ, ರಾಜಸ್ಥಾನದಲ್ಲಿ ಮಾತ್ರವಲ್ಲ. ನೀವೇಕೆ ಈ ಬಗ್ಗೆ ಆಲಿಸುತ್ತಿಲ್ಲ ಅಥವಾ ಏನೂ ಮಾಡುತ್ತಿಲ್ಲ ಎಂದು ಯಾರಾದರೂ ಪ್ರಶ್ನಿಸಿದರೆ ಏನು ಹೇಳಲಿ. ಕೆಲವು ಘಟನೆಗಳು ಯಾವುದೋ ಮೂಲೆಯಲ್ಲಿ ಮಧ್ಯರಾತ್ರಿ ಸಮಯ ನಡೆಯಬಹುದು, ಏನು ನಡೆಯುತ್ತಿದೆ ಎಂದು ತಿಳಿಯಲು ನಾನು ದೇವರಿಗಿಂತಲೂ ಹೆಚ್ಚಾಗಿರಬೇಕು'' ಎಂದರು.
ರಾಜಸ್ಥಾನದ ಆಲ್ವಾರ್ ಎಂಬಲ್ಲಿ ಗೋರಕ್ಷಕರಿಂದ 28 ವರ್ಷದ ಅಕ್ಬರ್ ಖಾನ್ ಹತ್ಯೆ ನಡೆದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಯ ಈ ಹೇಳಿಕೆ ಬಂದಿದೆ.