ನನ್ನ ಇಲಾಖೆಯಲ್ಲಿ ವರ್ಗಾವಣೆ ದಂಧೆಗೆ ಅವಕಾಶ ನೀಡಿಲ್ಲ: ಎಚ್.ಡಿ.ರೇವಣ್ಣ
ಬೆಂಗಳೂರು, ಆ.6: ನನ್ನ ಇಲಾಖೆಯಲ್ಲಿ ಹಣ ಪಡೆದು ಅಧಿಕಾರಿಗಳನ್ನು ವರ್ಗಾವಣೆ ಮಾಡುವ ದಂಧೆಗೆ ಅವಕಾಶ ನೀಡಿಲ್ಲ. ಒಂದು ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಳಿ ಈ ಬಗ್ಗೆ ದಾಖಲೆಗಳಿದ್ದರೆ ನೀಡಲಿ, ತಕ್ಷಣ ಕ್ರಮ ಕೈಗೊಳ್ಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸವಾಲು ಹಾಕಿದರು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಬದ್ಧವಾಗಿಯೇ ಅಧಿಕಾರಿಗಳಿಗೆ ಭಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ. ಸಾಮರ್ಥ್ಯಕ್ಕೆ ಅನುಗುಣವಾಗಿಯೇ ವರ್ಗಾವಣೆ ಪ್ರಕ್ರಿಯೆ ನಡೆಸಲಾಗಿದೆ ಎಂದರು.
ನನ್ನ ಇಲಾಖೆ ಹೊರತುಪಡಿಸಿ ನಾನು ಬೇರೆ ಯಾವ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅದರ ಅಗತ್ಯವು ನನಗಿಲ್ಲ. ಈ ಸಂಬಂಧ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನೆ ಕೇಳಿ ನೋಡಿ, ನಾನು ಯಾವ ಸಚಿವರ ಇಲಾಖೆಯಲ್ಲೂ ಇವತ್ತಿನವರೆಗೆ ಕೈಯೂ ಆಡಿಸಿಲ್ಲ, ಕಾಲೂ ಆಡಿಸಿಲ್ಲ ಎಂದು ಅವರು ಹೇಳಿದರು.
‘ರಾಜ್ಯದಲ್ಲಿ ಮೂವರು ಮುಖ್ಯಮಂತ್ರಿಗಳಿದ್ದಾರೆ. ಕುಮಾರಸ್ವಾಮಿ ಸಿಎಂ, ರೇವಣ್ಣ ಸೂಪರ್ ಸಿಎಂ ಹಾಗೂ ದೇವೇಗೌಡ ಸುಪ್ರೀಂ ಸಿಎಂ’ ಎಂದು ಬಿಜೆಪಿಯವರು ಮಾಡಿರುವ ಟ್ವಿಟ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೈತರ ಸಾಲ ಮನ್ನಾ ಮಾಡುವಂತೆ ಪ್ರಧಾನಿ ಎದುರು ಬಾಯಿ ಬಿಡಲು ಧೈರ್ಯವಿಲ್ಲದವರು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ರೈತರ 49 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡುವ ತೀರ್ಮಾನ ಮಾಡಿದ್ದಾರೆ. ರಾಜ್ಯದ ಜನ 104 ಮಂದಿ ನಮ್ಮ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಜನರ ಬೆಂಬಲ ಬೇಕಿದೆ. ರೈತರ ಉಳಿದಿರುವ ಸಾಲವನ್ನು ಮನ್ನಾ ಮಾಡುವಂತೆ ಪ್ರಧಾನಿ ಎದುರು ಬಿಜೆಪಿಯವರು ಮಾತನಾಡಲಿ ಎಂದು ರೇವಣ್ಣ ಸವಾಲು ಹಾಕಿದರು.
ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಯಡಿಯೂರಪ್ಪ, ಉತ್ತರ ಕರ್ನಾಟಕದ ಯಾವ ತಾಲೂಕಿಗೆ ಯಾವ ರೀತಿಯ ಅನ್ಯಾಯವಾಗಿದೆ ಎಂಬುದನ್ನು ಹೇಳಲಿ? ಅನ್ಯಾಯದ ಕುರಿತು ಮುಖ್ಯಮಂತ್ರಿಯ ಗಮನಕ್ಕೆ ತಂದು ಚರ್ಚೆ ಮಾಡಿ, ಸಮಸ್ಯೆಯನ್ನು ಬಗೆಹರಿಸಲು ಸರಕಾರ ಸಿದ್ಧವಿದೆ. ನಮಗೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಭೇದಭಾವವಿಲ್ಲ ಎಂದು ಅವರು ಹೇಳಿದರು.
ಸಿಆರ್ಎಫ್ ಅನುದಾನದಲ್ಲಿ 7000 ಕೋಟಿ ರೂ.ನಮಗೆ ಮಂಜೂರಾಗಿದೆ. ಪ್ರತಿ ವರ್ಷ 500 ಕೋಟಿ ರೂ.ಗಳಂತೆ ಈ ಮೊತ್ತ ಕೇಂದ್ರ ಸರಕಾರದಿಂದ ಬಿಡುಗಡೆಯಾಗುತ್ತದೆ. ಆದರೆ, 1 ಸಾವಿರ ಕೋಟಿ ರೂ.ಗಳ ಬಿಲ್ ಬಾಕಿಯಿದೆ. ನಾನು ಸಚಿವನಾದ ನಂತರ ಮೊದಲು ಭೇಟಿ ನೀಡಿದ್ದು ಹುಬ್ಬಳ್ಳಿಗೆ. ಅಲ್ಲಿನ ಬಾಕಿ ಕಾಮಗಾರಿಗಳನ್ನು ಪುನಃ ಆರಂಭಿಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ ಎಂದು ರೇವಣ್ಣ ತಿಳಿಸಿದರು.
ಹಾಸನ ಜಿಲ್ಲೆಯಲ್ಲೂ ನಾನು ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡಿಲ್ಲ. ಹಿಂದಿನ ಸರಕಾರದಲ್ಲಿ ಇದ್ದ ಅಧಿಕಾರಿಗಳೆ ಇಂದು ನಮ್ಮಲ್ಲಿ ಮುಂದುವರೆದಿದ್ದಾರೆ. ಸುಮಾರು 300 ಸಹಾಯಕ ಇಂಜಿನಿಯರ್ಗಳ ಹುದ್ದೆಗಳು ಖಾಲಿಯಿವೆ. ಸುಪ್ರೀಂಕೋರ್ಟ್ ಭಡ್ತಿ ಮೀಸಲಾತಿ ಸಂಬಂಧ ನೀಡುವ ತೀರ್ಪಿನಂತೆ ನಾವು ಮುಂದುವರೆಯುತ್ತೇವೆ ಎಂದು ಅವರು ಹೇಳಿದರು.
ಕೋಲಾರ ಹಾಲು ಒಕ್ಕೂಟಕ್ಕೆ ಸೇರಿದ್ದ ಕೆಲವೊಂದು ಟೆಂಡರ್ಗಳನ್ನು ಹಾಸನ ಜಿಲ್ಲೆಗೆ ಒತ್ತಾಯಪೂರ್ವಕವಾಗಿ ವರ್ಗಾವಯಿಸಿಕೊಳ್ಳಲಾಗುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ ರೇವಣ್ಣ, ನಾನು ಇದರಲ್ಲಿ ಯಾವುದೇ ಒತ್ತಡ ಹೇರಿಲ್ಲ. ಈ ಸಂಬಂಧ ಮಾಜಿ ಸಿಎಂ ವೀರಪ್ಪಮೊಯ್ಲಿ ನನ್ನ ಜೊತೆ ಮಾತನಾಡಿದ್ದಾರೆ ಎಂದರು.
ರಕ್ಷಣಾ ಇಲಾಖೆಯವರಿಗೆ ಹಾಲು ವಿತರಿಸಲು ಒಕ್ಕೂಟಗಳ ನಡುವೆ ಟೆಂಡರ್ ಕರೆಯಲಾಗಿದೆ. 10 ಲಕ್ಷ ಲೀಟರ್ಗೂ ಅಧಿಕ ಹಾಲು ಉತ್ಪಾದನೆ ಮಾಡುವ ಒಕ್ಕೂಟಗಳು ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಅದರಂತೆ, ನಮ್ಮ ಹಾಸನ ಹಾಲು ಒಕ್ಕೂಟವು 10 ಲಕ್ಷ ಲೀಟರ್ಗೂ ಅಧಿಕ ಹಾಲು ಉತ್ಪಾದನೆ ಮಾಡುತ್ತಿರುವುದರಿಂದ ಟೆಂಡರ್ನಲ್ಲಿ ಭಾಗವಹಿಸುತ್ತಿದೆ. ಅದನ್ನೆ, ತಪ್ಪಾಗಿ ಅರ್ಥೈಸಿಕೊಂಡರೆ ಹೇಗೆ ಎಂದು ಅವರು ಪ್ರಶ್ನಿಸಿದರು.
ನಾನು ಕೆಎಂಎಫ್ ಅಧ್ಯಕ್ಷನಾಗಿದ್ದಾಗ ಕೋಲಾರ ಹಾಲು ಒಕ್ಕೂಟ ಸ್ಥಾಪನೆಗೆ ಮಂಜೂರಾತಿ ನೀಡಿದ್ದು. ನಮಗೆ ಬೆಂಗಳೂರು, ಕೋಲಾರ, ಹಾಸನ ಬೇರೆ ಬೇರೆ ಅಂತಲ್ಲ. ನಾನು ಕೇವಲ ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಮಾತ್ರ ಸಚಿವನಲ್ಲ. ರಾಜ್ಯದ ಎಲ್ಲ ಶಾಸಕರಿಗೂ ಸಚಿವ ಎಂದು ರೇವಣ್ಣ ಹೇಳಿದರು.