ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ: ಶಾಸಕ ಸೋಮಶೇಖರ್
ಬೆಂಗಳೂರು, ಆ.7: ಭ್ರಷ್ಟಾಚಾರದ ಕೇಂದ್ರಗಳಾಗಿ ಕಂದಾಯ ಇಲಾಖೆ ಕಚೇರಿಗಳು ಬದಲಾಗುತ್ತಿದ್ದು, ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ನಾಡಕಚೇರಿಯಲ್ಲಿ ಆಯೋಜಿಸಿದ್ದ ಪಿಂಚಣಿ ಹಾಗೂ ಕಂದಾಯ ಅದಾಲತ್ನಲ್ಲಿ ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಪತ್ರ ವಿತರಿಸಿ ಅವರು ಮಾತನಾಡಿದರು.
ರೈತರು, ಬಡವರು, ಮಧ್ಯಮ ವರ್ಗದವರು, ತಮ್ಮ ಕೆಲಸಕ್ಕಾಗಿ ಕಂದಾಯ ಕಚೇರಿಗಳಿಗೆ ಅಲೆದಲೆದು ಸುಸ್ತಾಗಿ ಹೋಗಿದ್ದಾರೆ. ಮಾನವೀಯತೆಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಿ ರೈತರ ಅಲೆದಾಟ ತಪ್ಪಿಸಿ ಶೀಘ್ರವಾಗಿ ಅವರ ಕೆಲಸಗಳನ್ನು ಮಾಡಬೇಕೆಂದು ಹೇಳಿದರು.
ಕುಂಬಳಗೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಚಿಕ್ಕರಾಜು ಮಾತನಾಡಿ, ಭೂ ಮಾಫಿಯಾದವರು ಸರಕಾರಿ ಆಸ್ತಿ ಕೆರೆ ಕಟ್ಟೆಗಳಿಗೆ ನಕಲಿ ದಾಖಲೆ ಸೃಷ್ಟಿಸಿ ರಾಜಾರೋಷವಾಗಿ ಸರಕಾರಿ ಭೂಮಿಯನ್ನು ತಮ್ಮದೆಂದು ಮಾರಾಟ ಮಾಡುತ್ತಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕೆ.ಗೊಲ್ಲಹಳ್ಳಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಆರ್.ಲಕ್ಷ್ಮಯ್ಯ, ಯಾದವ ಸಂಘದ ಕೃಷ್ಣಪ್ಪ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.