ಬೆಂಗಳೂರು: ಅನೈತಿಕ ಸಂಬಂಧದ ಶಂಕೆಯಲ್ಲಿ ಪತ್ನಿಯ ಹತ್ಯೆ

Update: 2018-08-12 13:32 GMT

ಬೆಂಗಳೂರು, ಆ.12: ವ್ಯಕ್ತಿಯೊಬ್ಬನ ಜೊತೆ ಅನೈತಿಕ ಸಂಬಂಧ ಇದೆ ಎಂದು ಅನುಮಾನ ವ್ಯಕ್ತಪಡಿಸಿ ಪತ್ನಿಯನ್ನು ಹತ್ಯೆಗೈದಿರುವ ದುರ್ಘಟನೆ ಇಲ್ಲಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರವಿವಾರ ಈ ಘಟನೆ ನಡೆದಿದ್ದು, ಉತ್ತರ ಭಾರತ ಮೂಲದ ಶಹನಾಝ್ ಎಂಬಾಕೆ ಹತ್ಯೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೃತ್ಯವೆಸಗಿರುವ ಆರೋಪಿ ಪತಿ ಅಬ್ದುಲ್ ಹನ್ನಾನ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದ್ದು, ದಂಪತಿ ಇಲ್ಲಿನ ನ್ಯಾನಪ್ಪನಹಳ್ಳಿಯಲ್ಲಿ ವಾಸವಿದ್ದು, ಒಂದು ವರ್ಷದ ಹಿಂದೆಯಷ್ಟೇ ಇವರ ವಿವಾಹವಾಗಿತ್ತು.

ಆರೋಪಿ ಹನ್ನಾನ್, ತನ್ನ ಪತ್ನಿಯು ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕೆ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ದಂಪತಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ರವಿವಾರ ಬೆಳಗ್ಗೆ 8:30ರ ವೇಳೆ ಇದೇ ವಿಷಯದಲ್ಲಿ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಹನ್ನಾನ್ ಚಾಕುವಿನಿಂದ ಪತ್ನಿಯ ಬೆನ್ನು, ಕುತ್ತಿಗೆಗೆ ಇರಿದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ತದನಂತರ ಆರೋಪಿ ಹನ್ನಾನ್ ತನ್ನ ಮನೆಯ ಸಮೀಪವಿರುವ ಅತ್ತೆಯ ಮನೆಗೆ ಹೋಗಿ ಅಲ್ಲಿಯೂ ಜಗಳ ತೆಗೆದು ಅತ್ತೆ ಮತ್ತು ನಾದಿನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಹುಳಿಮಾವು ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News