ವಾಜಪೇಯಿ ಆರೋಗ್ಯಸ್ಥಿತಿ ಗಂಭೀರ: ಎಐಐಎಂಎಸ್‌ಗೆ ಗಣ್ಯರ ದಂಡು

Update: 2018-08-16 04:48 GMT

ಹೊಸದಿಲ್ಲಿ, ಆ.16: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಸಚಿವೆ ಸ್ಮತಿ ಇರಾನಿ ಸೇರಿದಂತೆ ಹಲವು ಗಣ್ಯರು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸಂಸ್ಥೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದಾರೆ.

ಮುಂಜಾನೆ 6:45ಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಎಐಐಎಂಎಸ್‌ಗೆ ಭೇಟಿ ನೀಡಿದರು. ವಾಜಪೇಯಿ ಅವರ ಆರೋಗ್ಯಸ್ಥಿತಿ ಸುಧಾರಿಸುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ ಎಂದು ಕೇಂದ್ರ ಸಚಿವ ವಿಜಯ್ ಗೋಯಲ್ ಟ್ವೀಟ್ ಮಾಡಿದ್ದಾರೆ.

"ಕಳೆದ ಒಂಬತ್ತು ವಾರಗಳಿಂದ ಎಐಐಎಂಎಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಜಪೇಯಿಯವರ ದೇಹಸ್ಥಿತಿ ಕಳೆದ 24 ಗಂಟೆಗಳಲ್ಲಿ ಮತ್ತಷ್ಟು ಉಲ್ಬಣಿಸಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಜೀವರಕ್ಷಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ" ಎಂದು ಎಐಐಎಂಎಸ್ ಬುಧವಾರ ತಡರಾತ್ರಿ ಪ್ರಕಟಿಸಿದೆ.

2009ರಲ್ಲಿ ಪಾರ್ಶ್ವವಾಯು ಪೀಡಿತರಾದ ಬಳಿಕ ಅವರ ದೇಹಸ್ಥಿತಿ ಕ್ಷೀಣಿಸುತ್ತಾ ಬಂದಿತ್ತು. ಮೂತ್ರನಾಳ ಸೋಂಕು, ಎದೆನೋವು, ಮೂತ್ರನಾಳ ಸೋಂಕು ಮತ್ತು ಮೂತ್ರ ಸ್ಥಗಿತ ಕಾರಣದಿಂದ ಜೂನ್ 11ರಂದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ದೇಹಸ್ಥಿತಿ ಇದೀಗ ಮತ್ತಷ್ಟು ಉಲ್ಬಣಿಸಿದೆ ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಹರ್ಷವರ್ಧನ್, ಪಿಯೂಷ್ ಗೋಯೆಲ್, ಸ್ಮೃತಿ ಇರಾನಿ, ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ, ಕೇಂದ್ರ ಸಚಿವ ಅರುಣ್‌ ಜೇಟ್ಲಿಯವರ ಪತ್ನಿ ಹಾಗೂ ಪುತ್ರಿ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರ ಜತೆ ಚರ್ಚಿಸಿದರು. 93 ವರ್ಷದ ವಾಜಪೇಯಿ ಮಧುಮೇಹದಿಂದಲೂ ಬಳಲುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News