ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ

Update: 2018-08-16 16:15 GMT

ಬೆಂಗಳೂರು, ಆ. 16: ಭಾರೀ ಪೊಲೀಸ್ ಸರ್ವಗಾವಲಿನಲ್ಲಿರುವ ರಾಜ್ಯದ ಅತ್ಯಂತ ಪುರಾತನ, ಭವ್ಯ ಪಾರಂಪರಿಕ ಕಟ್ಟಡವೂ ಆಗಿರುವ ಬೆಂಗಳೂರಿನ ರಾಜಭವನದ ವೀಕ್ಷಣೆಗೆ ಆ.16 ರಿಂದ ಆ.31ರ ವರೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ರಾಜಭವನ ವೀಕ್ಷಣೆಗಾಗಿ ಏಳು ದಿನಗಳ ಹಿಂದೆ ಆನ್‌ಲೈನ್ ಮೂಲಕ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದು, ರಾಜಭವನದ ವೀಕ್ಷಿಸುವ ಆಸಕ್ತ ಸಾರ್ವಜನಿಕರು ಆನ್‌ಲೈನ್ ಮೂಲಕ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.1840ರ ಬ್ರಿಟಿಷರ ಕಾಲದಲ್ಲಿ ಸುಮಾರು 1 ಎಕರೆ ಪ್ರದೇಶದಲ್ಲಿನ ಕಟ್ಟಡವಾದ ರಾಜಭವನ ವಿಶಿಷ್ಟ ವಾಸ್ತು ಕೌಶಲ್ಯದಿಂದ ಆಕರ್ಷಕವಾಗಿದ್ದು, ಈ ಕಟ್ಟಡವನ್ನು ವೀಕ್ಷಿಸಿ, ಅದರ ವಾಸ್ತು, ವೈಭವ ನೋಡಬಹುದು. ಜತೆಗೆ ಈ ಅತ್ಯಾಕರ್ಷಕ ಭವನದಲ್ಲಿ ಸಂಗ್ರಹಿಸಲಾಗಿರುವ ಕಲಾ ಕುಸುರಿಗಳಲ್ಲಿ ಅರಳಿದ ಅಪರೂಪದ ಚಿತ್ರಗಳು, ಪಾಶ್ಚಿಮಾತ್ಯ ಕಲಾ ವಸ್ತುಗಳು ವೀಕ್ಷಿಸಬಹುದು.

ಅಲ್ಲದೆ, 16 ಎಕರೆ ಪ್ರದೇಶದಲ್ಲಿನ ವಿಶಾಲ ಉದ್ಯಾನವನ, ಹಲವು ಜಾತಿಯ ಮರ-ಗಿಡಗಳು, ಸಸ್ಯಗಳು, ವಿವಿಧ ಬಣ್ಣದ ಹೂವುಗಳು, ಶತಮಾನದಷ್ಟು ಹಳೆಯದಾದ ಪೈನ್, ಸೂಚಿಪತ್ರ(ಫರ್) ಮರಗಳು, ಅಪರೂಪ ಪಕ್ಷ ಸಂಕುಲವನ್ನು ಕಣ್ತುಂಬಿಕೊಳ್ಳುವ ಅವಕಾಶ ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ಸಿಗಲಿದೆ.

ಆನ್‌ಲೈನ್ ನೋಂದಣಿ: ರಾಜಭವನ ವೀಕ್ಷಣೆಗಾಗಿ ಏಳು ದಿನಗಳ ಹಿಂದೆ ಆನ್‌ಲೈನ್ www.rajbhavan.kar.inc.in ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಿದ್ದು, ಈವರೆಗೂ 2ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದು, 20 ಮಂದಿ ತಂಡಗಳನ್ನು ಮಾಡಿ ವೀಕ್ಷಣೆ ಅವಕಾಶ ನೀಡಲಾಗಿದೆ.

ಪ್ರತಿದಿನ ಸಂಜೆ 4 ಗಂಟೆಯಿಂದ 7.30ರ ವರೆಗೆ ರಾಜ್ಯಭವನ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ. ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾದರೆ ದಿನಾಂಕವನ್ನು ವಿಸ್ತರಿಸಲು ಚಿಂತನೆ ನಡೆಸಲಾಗುವುದು ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು.

ಗುರುವಾರ ರಾಜಭವನದ ಗಾಜಿನಮನೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಜುಭಾಯಿ ವಾಲಾ, ರಾಜ್ಯದ ಸ್ವಾತಂತ್ರ ಪೂರ್ವದ ಐತಿಹಾಸಿಕ ಕಟ್ಟಡಗಳಲ್ಲಿ ರಾಜಭವನವು ಒಂದಾಗಿದೆ. ರಾಜಭವನದ ವೀಕ್ಷಿಸಲು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಕುತೂಹಲ ಇರುತ್ತದೆ. ಆದುದರಿಂದ ಜನರಿಗೆ ಆ.31ರ ವರೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡ 20 ಮಂದಿಯ ಒಂದು ತಂಡವಾಗಿ ವಿಂಗಡಿಸಿ ರಾಜಭವನ ಪ್ರವೇಶ ಕಲ್ಪಿಸಲಾಗುತ್ತಿದೆ. ಅವರಿಗೊಬ್ಬ ಮಾರ್ಗದರ್ಶಿ (ಗೈಡ್)ಯನ್ನು ನೀಡಲಿದ್ದು, ಅವರು ರಾಜಭವನದ ಇತಿಹಾಸವನ್ನು ಅವರ ವೀಕ್ಷಕರಿಗೆ ವಿವರಿಸಲಿದ್ದಾರೆ ಎಂದರು.

‘ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಕೇಂದ್ರದ ಸಚಿವರು ಸೇರಿ ದೇಶ- ವಿದೇಶಗಳ ಗಣ್ಯರು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು, ಉಳಿದುಕೊಳ್ಳಲು ಹಾಗೂ ಅವರಿಗೆ ಆತಿಥ್ಯ ನೀಡಲು ರಾಜ್ಯಭವನದಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇಂತಹ ಅಪರೂಪದ ಭವ್ಯ ಪಾರಂಪರಿಕ ಕಟ್ಟಡವನ್ನು ಜನತೆ ವೀಕ್ಷಿಸಬಹುದು’

-ವಜುಭಾಯಿ ವಾಲಾ ರಾಜ್ಯಪಾಲ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಒಂದು ವಾರ ಶೋಕಾಚರಣೆಯನ್ನು ಆಚರಿಸಲಾಗುತ್ತಿದೆ. ಆದುದರಿಂದ ಆ.17 ರಿಂದ ಆ.22ರ ವರೆಗೆ ರಾಜಭವನ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶ ಕಾರ್ಯಕ್ರಮ ಮುಂದೂಡಲಾಗಿದೆ. ಈ ಅವಧಿಗೆ ನೋಂದಣಿ ಮಾಡಿದ ಸಾರ್ವಜನಿಕರಿಗೆ ಸೆ.1ರಿಂದ ಸೆ.6ರ ವರೆಗೆ ಅವಕಾಶ ಕಲ್ಪಿಸಲಾಗುವುದು’

-ಆರ್.ಪ್ರಭುಶಂಕರ್ ರಾಜ್ಯಪಾಲರ ಅಧೀನ ಕಾರ್ಯದರ್ಶಿ

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News