ಬೆಂಗಳೂರು: ರಸ್ತೆ ಅಪಘಾತಕ್ಕೆ ಬಾಲಕ ಬಲಿ
Update: 2018-08-20 14:30 GMT
ಬೆಂಗಳೂರು, ಆ.20: ಶರವೇಗದಲ್ಲಿ ಸಾಗುತ್ತಿದ್ದ ಕಾರೊಂದು, ರಸ್ತೆ ದಾಟುತ್ತಿದ್ದ ಬಾಲಕನೊಬ್ಬನಿಗೆ ಢಿಕ್ಕಿ ಹೊಡೆದ ಪರಿಣಾಮ, ಆತ ಮೃತಪಟ್ಟಿರುವ ಘಟನೆ ಇಲ್ಲಿನ ಹಲಸೂರು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ದೊಮ್ಮಲೂರು ಲೇಔಟ್ ನಿವಾಸಿ ಕೆವಿನ್(17) ಎಂಬಾತ ಮೃತಪಟ್ಟಿರುವ ಪಾದಚಾರಿ ಎಂದು ಪೊಲೀಸರು ತಿಳಿಸಿದ್ದಾರೆ.
ಫ್ಲವರ್ ಡೆಕೋರೇಷನ್ ವೃತ್ತಿ ಮಾಡುತ್ತಿದ್ದ ಕೆವಿನ್ ರವಿವಾರ ರಾತ್ರಿ ಹಳೆ ವಿಮಾನ ನಿಲ್ದಾಣ ರಸ್ತೆಯ ದೊಮ್ಮಲೂರು ಫ್ಲೈಓವರ್ ಕೆಳಗೆ ನಡೆದುಕೊಂಡು ರಸ್ತೆ ದಾಟುತ್ತಿದ್ದನು. ಈ ವೇಳೆ ಅತಿ ವೇಗವಾಗಿ ಮುನ್ನುಗ್ಗಿದ ಕಾರು ಢಿಕ್ಕಿ ಹೊಡೆದ ಪರಿಣಾಮ ಕೆವಿನ್ ಗಂಭೀರ ಗಾಯಗೊಂಡಿದ್ದ ಎನ್ನಲಾಗಿದೆ.
ತಕ್ಷಣ ಕಾರು ಚಾಲಕನೇ ಗಾಯಾಳು ಕೆವಿನ್ನನ್ನು ಆಸ್ಪತ್ರೆಗೆ ಸೇರಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈ ಸಂಬಂಧ ಹಲಸೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.