ಬೆಂಗಳೂರು: ವಿದ್ಯುತ್ ಕಂಬ ಬಿದ್ದು ಬಾಲಕಿಗೆ ಗಾಯ

Update: 2018-08-20 14:31 GMT

ಬೆಂಗಳೂರು, ಆ.20: ರಸ್ತೆ ಬದಿಯ ವಿದ್ಯುತ್ ಕಂಬವೊಂದು ಬೈಕ್ ಮೇಲೆ ಬಿದ್ದ ಪರಿಣಾಮ ಬಾಲಕಿಯೊಬ್ಬಾಕೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಹೊರವಲಯದ ವರ್ತೂರು ಗ್ರಾಮದ ಹರೀಶ್ ಎಂಬುವರ ಪುತ್ರಿ ಯುವರಾಣಿ (14) ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

7ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಯುವರಾಣಿ ರವಿವಾರ ತಂದೆ ಜೊತೆ ಸಂಬಂಧಿಕರ ಮನೆ ಗೃಹ ಪ್ರವೇಶಕ್ಕೆಂದು ಹೊಸಕೋಟೆಗೆ ಬೈಕ್‌ನಲ್ಲಿ ತೆರಳಿದ್ದಳು. ಮಧ್ಯಾಹ್ನ ತಂದೆ ಜೊತೆ ವಾಪಸ್ಸಾಗುತ್ತಿದ್ದಾಗ ಕಾಡುಗೋಡಿ-ಓ ಫಾರಂ ಮಧ್ಯ ಭಾಗದ ದಿಣ್ಣೂರು ಕ್ರಾಸ್ ಬಳಿ ಬರುತ್ತಿದ್ದಂತೆ ರಸ್ತೆ ಬದಿಯ ವಿದ್ಯುತ್ ಕಂಬ ಮುರಿದು ಈಕೆ ಮೇಲೆ ಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಯುವರಾಣಿಯನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News