ಬಿಬಿಎಂಪಿ ಇಂಜಿನಿಯರ್ ಮನೆಗೆ ಕನ್ನ

Update: 2018-08-20 14:33 GMT

ಬೆಂಗಳೂರು, ಆ.20: ಬಿಬಿಎಂಪಿ ಇಂಜಿನಿಯರ್ ಒಬ್ಬರ ಮನೆಯ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು, ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ, ದುಬಾರಿ ವಸ್ತುಗಳು ಕಳವು ಮಾಡಿದ್ದಾರೆಂದು ಇಲ್ಲಿನ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೇವರಾಜ್ ಎಂಬುವರು ಬಿಬಿಎಂಪಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ನಗರದ ಎಚ್‌ಎಸ್‌ಆರ್ ಲೇಔಟ್‌ನ ಒಂದನೇ ಸೆಕ್ಟರ್, 27ನೇ ಮುಖ್ಯ ರಸ್ತೆಯ 12 ಅಡ್ಡರಸ್ತೆಯಲ್ಲಿರುವ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ ಎನ್ನಲಾಗಿದೆ.

ಆ.17ರಂದು ದೇವರಾಜ್, ಮನೆಗೆ ಬೀಗ ಹಾಕಿ ಕಾರ್ಯನಿಮಿತ್ತ ಬೇರೆ ಕಡೆ ಹೋಗಿದ್ದರು. ಕೆಲಸ ಮುಗಿಸಿ ರವಿವಾರ ರಾತ್ರಿ ಮನೆಗೆ ಬಂದು ನೋಡಿದಾಗ ಮುಂಬಾಗಿಲಿನ ಬೀಗ ಮುರಿದ ದುಷ್ಕರ್ಮಿಗಳು ಲಕ್ಷಾಂತರ ರೂ.ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿರುವುದು ಕಂಡುಬಂದಿದೆ.

ದೇವರಾಜ್ ಅವರು ನೀಡಿದ ದೂರಿನನ್ವಯ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News