ಪ್ರಕೃತಿ ವಿಕೋಪಕ್ಕೆ ಮನುಷ್ಯನ ತಪ್ಪುಗಳೇ ಕಾರಣ: ಹೈಕೋರ್ಟ್

Update: 2018-08-20 15:01 GMT

ಬೆಂಗಳೂರು, ಆ.20: ಪ್ರಕೃತಿ ವಿಕೋಪಗೊಳ್ಳಲು ಮನುಷ್ಯನ ತಪ್ಪುಗಳೇ ಕಾರಣ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಕಳ ತಾಲೂಕಿನ ಕಣಜಾರು ಗ್ರಾಮದ ಕ್ವಾರಿಯಿಂದ ಸಮೀಪದ ಹಳ್ಳದ ನೀರು ಕಲುಷಿತಗೊಳ್ಳುತ್ತಿದೆ ಎಂಬ ಪ್ರಕರಣದಲ್ಲಿ ವಕೀಲ ಕೆ. ಚಂದ್ರನಾಥ ಅರಿಗ ಸೋಮವಾರ ವಾದ ಮಂಡಿಸುತ್ತಿದ್ದ ವೇಳೆ ದಿನೇಶ್ ಮಾಹೇಶ್ವರಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇರಳ ಮತ್ತು ಕೊಡಗಿನ ಪ್ರವಾಹ ಪರಿಸ್ಥಿತಿಯನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿಗಳು, ಪ್ರಕೃತಿಗೇ ಆಪತ್ತು ಬಂದೊದಗಿದೆ. ಇದು ಏಕಾಏಕಿ ಒಂದು ದಿನ ಆದಂಥದ್ದಲ್ಲ. ಇದರ ಹಿಂದೆ ಮಾನವ ನಿರ್ಮಿತ ತಪ್ಪುಗಳಿವೆ ಎಂದರು.

ಭೂ ಕಂಪನ ಆಗಿದ್ದರೆ ಏಕಾಏಕಿ ಆಗಿದೆ ಎಂದು ಹೇಳಬಹುದು. ಆದರೆ, ಈ ರೀತಿ ಬೆಟ್ಟಗುಡ್ಡಗಳ ಕುಸಿತ, ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ನೀರು ಮತ್ತು ಪ್ರಕೋಪಗಳಿಗೆ ಎಲ್ಲೋ ನಾವೇ ಕಾರಣ ಎಂಬುದನ್ನು ಒತ್ತಿ ಹೇಳುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News