ಬಿಡಿಎ ಪಾರದರ್ಶಕ ಆಡಳಿತ ನೀಡಲಿ: ಡಿಸಿಎಂ ಪರಮೇಶ್ವರ್

Update: 2018-08-21 13:04 GMT

ಬೆಂಗಳೂರು, ಆ.21: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಜನರಲ್ಲಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಜೊತೆಗೆ ಆಡಳಿತ ವೈಖರಿಯನ್ನು ಇನ್ನಷ್ಟು ಪಾರದರ್ಶಕವಾಗಿ ನಡೆಸುವಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ಇಲ್ಲಿನ ಅರಮನೆ ರಸ್ತೆಯ ಬಿಡಿಎ ಕೇಂದ್ರ ಕಚೇರಿಯಲ್ಲಿ ಬಿಡಿಎ ಅಧಿಕಾರಗಳೊಂದಿಗೆ ಸಭೆ ನಡೆಸಿದ ಅವರು, ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು, ಇಲ್ಲಿಯೂ ಪಾರದರ್ಶಕ ಆಡಳಿತವಿಲ್ಲ ಎಂಬ ದೂರು ಬರುತ್ತಿದೆ. ಹಿಂದೊಮ್ಮೆ ಬಿಡಿಎ ಮುಚ್ಚುವ ಚರ್ಚೆ ಕೂಡ ನಡೆದಿತ್ತು. ಹೀಗಾಗಿ ಬಿಡಿಎ ಅನ್ನು ಆರೋಗ್ಯಕರ ದಾರಿಯಲ್ಲಿ ನಡೆಸಿಕೊಂಡು ಹೋಗುವಂತೆ ನಿರ್ದೇಶನ ನೀಡಿದರು. ಬಿಡಿಎ ಸ್ಥಾಪನೆಗೊಂಡ ಉದ್ದೇಶವೇ ಸಂಪೂರ್ಣ ಬದಲಾಗಿದೆ. ಬಡವರು, ಮಧ್ಯಮ ವರ್ಗದ ಜನರಿಗೆ ಮನೆ ನಿರ್ಮಿಸಿಕೊಡುವ ಜವಾಬ್ದಾರಿ ಬಿಡಿಎ ಮೇಲಿತ್ತು. ಇಂದು ಈ ಕೆಲಸಕ್ಕಿಂತ ರಸ್ತೆ, ಮೇಲ್ಸೇತುವೆ ನಿರ್ಮಾಣ, ಕಮರ್ಷಿಯಲ್ ಇತರೆ ಕ್ಷೇತ್ರದತ್ತ ವಿಸ್ತರಿಸಿಕೊಂಡಿದೆ ಎಂದರು.

ಟೆಂಡರ್ ಪಡೆಯುವವರು ಕಾಮಗಾರಿ ಪೂರ್ಣಗೊಳಿಸುವಲ್ಲಿ ತಡ ಮಾಡಿದರೆ ಮುಲಾಜಿಲ್ಲದೇ ಟೆಂಡರ್ ರದ್ದುಪಡಿಸಿ ಬೇರೆಯವರಿಗೆ ನೀಡಿ. ಯಾವುದೇ ಕಾಮಗಾರಿಯಾದರೂ ಅವಧಿಯೊಳಗೆ ನಡೆಯಬೇಕು. ಅನಗತ್ಯ ವೆಚ್ಚಕ್ಕೆ ಅವಕಾಶ ನೀಡಬೇಡಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಬಿಡಿಎ ಆಯುಕ್ತ ರಾಕೇಶ್ ಸಿಂಗ್, ಎಸ್ಪಿಜಗದೀಶ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News