ಸಿಎಂ ಆಪ್ತರ ಮನೆ ಮೇಲೆ ಐಟಿ ದಾಳಿ

Update: 2018-08-23 14:15 GMT

ಬೆಂಗಳೂರು, ಆ. 23: ಮುಖ್ಯಮಂತ್ರಿ, ಮತ್ತವರ ಪುತ್ರ, ಸಚಿವರು ಸೇರಿದಂತೆ ಹಲವು ಪ್ರಭಾವಿಗಳ ಲೆಕ್ಕಪತ್ರ ವ್ಯವಹಾರ ನೋಡುವ ಚಾರ್ಟೆಡ್ ಅಕೌಂಟೆಂಟ್ ಮನೆ ಹಾಗೂ ಕಚೇರಿ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ನಗರದ ಕುಮಾರ ಪಾರ್ಕ್‌ನಲ್ಲಿ ವಾಸವಿರುವ ಎಚ್.ಬಿ.ಸುನೀಲ್ ಎಂಬುವರ ಕಚೇರಿ ಮತ್ತು ನಿವಾಸದ ಮೇಲೆ ಎರಡು ದಿನಗಳಿಂದ ದಾಳಿ ನಡೆಸಿ, ಪರಿಶೀಲನೆ ಕೈಗೊಂಡಿರುವ ಐಟಿ ಅಧಿಕಾರಿಗಳು, ಲೆಕ್ಕಪತ್ರ ವ್ಯವಹಾರಕ್ಕೆ ಸಂಬಂಧಿಸಿದಂತೆ ಶೋಧ ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಲ ಸಚಿವರು, ಉದ್ಯಮಿಗಳು, ಪ್ರಭಾವಿ ವ್ಯಕ್ತಿಗಳು ಹಾಗೂ ಸಿಎಂ ಆಪ್ತರಿಗೂ ಸುನೀಲ್ ಅಕೌಂಟೆಂಟ್ ಆಗಿದ್ದು, ಅವರೆಲ್ಲರ ಲೆಕ್ಕಪತ್ರ ಪರಿಶೋಧನೆ ಮಾಡುತ್ತಿದ್ದರು. ಕಳೆದ ಚುನಾವಣೆ ಸಂದರ್ಭದಲ್ಲೂ ಅವರ ಮೇಲೆ ಐಟಿ ದಾಳಿ ನಡೆದಿದ್ದು, ಇದು ಕಳೆದ ಮೂರು ತಿಂಗಳಲ್ಲಿ ಎರಡನೆ ದಾಳಿಯಾಗಿದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವ್ಯವಹಾರವನ್ನೂ ಅಕೌಂಟೆಂಟ್ ಸುನೀಲ್ ನಿಭಾಯಿಸುತ್ತಿದ್ದರು. ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ಕಾರ್ಯ ಮುಂದುವರಿಸಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News