ಕೆ.ನೀಲಾರವರ ಬಾಳ ಬೆಳಗಿಸುವ ಬಾಳ ಕೌದಿ

Update: 2018-08-26 07:06 GMT

ಪುಸ್ತಕಗಳು ಈ ನೆಲದ ಹಿರಿಮೆಯನ್ನು ಹೆಚ್ಚಿಸುವಂತಿದ್ದರೆ ಹೃದಯಕ್ಕೆ ಹತ್ತಿರವಾಗುತ್ತವೆ. ಬಾಳ ಪಯಣದಲಿ ಜೊತೆಯಾದರೆ ಅವು ಮನಸ್ಸಿನಾಳದಲ್ಲಿ ಉಳಿಯುತ್ತವೆ. ಇತ್ತೀಚೆಗೆ ಇಂತಹದೊಂದು ಪುಸ್ತಕ ಕೈಗೆತ್ತಿಕೊಂಡು ಓದಿ ಅನುಭವಿಸಿದೆ. ಜಗತ್ತು ಸುತ್ತುವಾಗ ಬಾಳ ಕೌದಿ ಸಾಥ್ ನೀಡಿತು. ಬಾಳ ಕೌದಿ ಹಲವು ವಿಚಾರಗಳಿಗೆ ಆಪ್ತವೆನಿಸಿತು. ವಿಷಯ ನಿರೂಪಣೆ ಸಂಪೂರ್ಣ ದೇಶಿ ಭಾಷೆಯಿಂದ ಕೂಡಿದ್ದು ನಮ್ಮ ನೆಲದ ಭಾಷೆ ಎಂಬ ಭರವಸೆ ಮೂಡಿಸುತ್ತದೆ. ದಿನನಿತ್ಯದಲ್ಲಿ ಬಳಸುವ ಪದಗಳನ್ನು ಅದೆಷ್ಟು ಅಚ್ಚುಕಟ್ಟಾಗಿ ಲೇಖಕಿ ಬಳಸಿಕೊಂಡಿದ್ದಾರೆ. ಬೀದರ್‌ನ ಜವಾರಿ ಭಾಷೆ ಇಲ್ಲಿ ಅಚ್ಚಾಗಿದೆ. 

ಕಥೆಗಳ ರೂಪದಲ್ಲಿ ಹೇಳಹೊರಟ ಅನೇಕ ಸತ್ಯಗಳು ಮನಮುಟ್ಟುತ್ತವೆ. ಸಾಮಾಜಿಕ ಸತ್ಯಗಳನ್ನು ಸತ್ಯವಾಗಿ ನುಡಿಯುತ್ತವೆ. ಇಲ್ಲಿರುವ ಪ್ರತಿಯೊಂದು ಲೇಖನವು ಸಾಮಾಜಿಕ ಸಮಸ್ಯೆಗಳ ಸುತ್ತ ಗಿರಕಿ ಹೊಡೆದು ಅದಕ್ಕೊಂದು ಸೂಕ್ತವಾದ ಪರಿಹಾರ ಸೂಚಿಸುವ ಪ್ರಯತ್ನ ಮಾಡುತ್ತವೆ. ಒಡೆದ ಗ್ಲಾಸು, ಬೆಸೆದ ಹೃದಯ ಎಂಬ ವ್ಯಕ್ತಿ ಚಿತ್ರಣದಲ್ಲಿ ಹೃದಯ ಕಲಕುವ ಸತ್ಯ ಹೇಳುತ್ತದೆ. ನೂರು ಮತದ ಹೊಟ್ಟ ತೂರಿ ಎಂಬ ಆಲ್ದಾಳರ ಬದುಕು ಆದರ್ಶಮಯವಾಗುತ್ತದೆ. ಹೀಗೆ ಸಮಾಜವನ್ನು ಕಟ್ಟುವವರ ಕುರಿತ ಲೇಖನಗಳು ಪ್ರೋತ್ಸಾಹ ನೀಡುತ್ತವೆ. ಅವರನ್ನು ಪರಿಚಯಿಸಲು ಲೇಖಕಿ ಬಳಸಿರುವ ಭಾಷೆ ಅತ್ಯಂತ ಉತೃಷ್ಟತೆಯನ್ನು ಪಡೆಯುತ್ತದೆ. ‘ಕರುಳಿಲ್ಲದವರ ನಡುವೆ’ ಎಂಬ ಲೇಖನ ಈ ಸಮಾಜದಲ್ಲಿನ ಪ್ರಸ್ತುತ ಸತ್ಯ ತೋರಿಸುತ್ತದೆ. ನಮ್ಮ ಸುತ್ತಮುತ್ತಲಿನ ಸಮಾಜದವರ ಅಳುವಿಗೆ ಧ್ವನಿಯಾಗುತ್ತದೆ. ಪ್ರತಿಭಟನೆಯನ್ನು ಪ್ರೋತ್ಸಾಹಿಸುತ್ತದೆ. ಬಡವರ ಧ್ವನಿಯಾಗುತ್ತದೆ. ಕೈಹಿಡಿದು ಅಸಮಾನತೆಯ ವಿರುದ್ಧ ಧ್ವನಿಯೆತ್ತುತ್ತದೆ.

ಸುತ್ತಲಿನ ಸಾವು ನೋವುಗಳಿಗೆ ಸ್ಪಂದಿಸುವ ಗುಣವನ್ನು ಪ್ರತಿಯೊಂದು ಲೇಖನಗಳು ಹೊಂದಿವೆ. ಕೂಲಿಯ ಕದಿಯುವ ಕುಲವೆಲ್ಲ ಎಂಬ ಲೇಖನದ ಮೂಲಕ ಲೇಖಕಿ ಪ್ರಜಾಪ್ರಭುತ್ವದಲ್ಲಿನ ಕೂಲಿಯ ಬಗ್ಗೆ ವಿಶ್ಲೇಷಿಸುತ್ತಾರೆ. ದುಡಿಯುವವರ ಬಗ್ಗೆ ಮನಮಿಡಿಯುತ್ತಾರೆ. ಈ ನಾಡನ್ನು ಕಟ್ಟಿದವರ ಬದುಕು ಬಿಸಿಲ ಬೀದಿಯಲ್ಲಿ ಹೇಗೆ ಸುಡುತ್ತಿದೆ ಎಂಬ ಸತ್ಯ ಬಿಚ್ಚಿಡುತ್ತಾರೆ. ಅತ್ಯಾಚಾರವೆಂಬ ತಲ್ಲಣ ಹೇಗೆ ಸಮಾಜವನ್ನು ಅಧಪತನಗೊಳಿಸುತ್ತಿದೆ ಎಂಬ ಆತಂಕ ಬರೆಯುತ್ತಾರೆ. ಈ ಪುಸ್ತಕದ ಪ್ರತಿಯೊಂದು ಲೇಖನಗಳು ಕೂಡ ವಿಶೇಷತೆಗಳಿಂದ ಕೂಡಿವೆ. ನಿರ್ಗತಿಕರ ಪರವಾದ ನಿಲುವುಗಳನ್ನು ಅವರ ಸಮ ಸಮಾಜದ ಭಾಗವಾಗಲಿ ಎಂಬ ಆಶಯ ಹೇಳುತ್ತವೆ. ನೇಗಿಲ ಯೋಗಿಯ ಬಗ್ಗೆ ಕಾಳಜಿ ಬಿಂಬಿಸುತ್ತವೆ. ಬಾಳ ಕೌದಿಯಲ್ಲಿ ಅನೇಕ ರಂಗುಗಳಿಂದ ಕೂಡಿದ್ದು ರಕ್ತದ ಕೆಂಪು ಇದೆ. ಶಾಂತಿಯೂ ಇದೆ. ಸಂಭ್ರಮದ ಮಧ್ಯೆ ಸಾಮಾಜಿಕ ಸತ್ಯಗಳಿವೆ. ಅಸತ್ಯಗಳನ್ನು ಮಾಡುತ್ತಿರುವವರ ವಿರುದ್ಧ ಧ್ವನಿಗಳಿವೆ. ಸಮಾಜವನ್ನು ಯಾರು ಹಾಳು ಮಾಡುತ್ತಿದ್ದಾರೆ. ಅವರ ವಿರುದ್ಧದ ಧ್ವನಿ ಹೇಗೆ ಗೂಡಿಸಬೇಕೆಂಬ ನಿಲುವು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಧರ್ಮ, ರಾಜಕಾರಣ ಮತ್ತು ಮಹಿಳೆ ಈ ಪುಸ್ತಕದ ಜೀವಾಳವಾಗಿದ್ದು ಎಲ್ಲರನ್ನು ಒಳಗೊಂಡ ಸುಂದರ ಬಾಳ ಕೌದಿ ನೇಯ್ದಿದ್ದಾರೆ.

ಹರಿದ ಚಿಂದಿಗಳಿಂದ ಹೊಲಿಯುವ ಬಡವರ ಬಾಳ ಕೌದಿ ಅದೆಷ್ಟು ಸುಂದರವಾಗಿದೆ ಎಂಬುವುದ ಅರೆಯಲು ಈ ಬಾಳ ಕೌದಿಯೊಂದಿಗೆ ನೀವು ಆಸ್ವಾದಿಸಬೇಕು. ಈ ಪುಸ್ತಕದ ಇನ್ನೊಂದು ಆಕರ್ಷಣೆಯೆಂದರೆ ಲೇಖಕಿ ಕೆ.ನೀಲಾ ಈ ನೆಲದ ಹೆಮ್ಮೆ. ಅವರ ಬರಹದಲ್ಲಿ ಬದುಕಿನ ಸತ್ಯಗಳು ಅಡಗಿರುತ್ತವೆ. ಅನುಭವಿಸಿದ ಕ್ಷೇತ್ರಮಟ್ಟದಲ್ಲಿನ ಸಾಮಾಜಿಕ ವಿಚಾರಗಳನ್ನು ಬರವಣಿಗೆಗೆ ಇಳಿಸುತ್ತಾರೆ. ಗ್ರಾಮೀಣ ಜನಜೀವನವನ್ನು ಅತ್ಯಂತ ಹತ್ತಿರದಿಂದ ಗಮನಿಸಿದ ಅನುಭವಿಸಿದ ಅನುಭವಗಳೇ ಇಲ್ಲಿ ಲೇಖನಗಳಾಗಿವೆ. ಸಮಸ್ಯೆಗಳು ಮತ್ತು ಅದಕ್ಕೆ ಸೂಕ್ತ ಪರಿಹಾರ ಕೊಡುವ ಧೈರ್ಯವನ್ನು ಲೇಖಕಿ ಅತ್ಯಂತ ಚಾಕಚಕ್ಯತೆಯಿಂದ ಮಾಡುತ್ತಾರೆ.

Writer - ಕೆ.ಎಂ.ವಿಶ್ವನಾಥ ಮರತೂರ

contributor

Editor - ಕೆ.ಎಂ.ವಿಶ್ವನಾಥ ಮರತೂರ

contributor

Similar News