ಯುವ ಸಾಹಿತಿಗಳು ಗಂಭೀರ ಬರವಣಿಗೆ ಕಡೆ ಸಾಗಬೇಕು: ಡಾ.ಸಿದ್ಧಲಿಂಗಯ್ಯ

Update: 2018-08-26 18:22 GMT

ಬೆಂಗಳೂರು, ಆ.26: ಯುವ ಸಾಹಿತಿಗಳು ಲಘು ಬರವಣಿಗೆಯಿಂದ ಗಂಭೀರ ಬರವಣಿಗೆ ಕಡೆಗೆ ಸಾಗಬೇಕು ಎಂದು ಕವಿ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಿಸಿದ್ದಾರೆ.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಉದ್ಘಾಟನೆ, ಧ್ವನಿಸಾಂದ್ರಿಕೆ ಮತ್ತು ಸಾಹಿತ್ಯ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮಲ್ಲಿ ಸಾಕಷ್ಟು ಮಂದಿ ಯುವ ಬರಹಗಾರರಿದ್ದರೂ, ತಾನು ಕವಿ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಪ್ರತಿಯೊಬ್ಬರೂ ಸಂಕೋಚ ಸ್ವಭಾವವನ್ನು ಬಿಡಬೇಕು. ಅದಕ್ಕೆ ತಮ್ಮಲ್ಲಿರುವ ಲಘು ಸಾಹಿತ್ಯದಿಂದ ಹೊರಬರಬೇಕು. ಆರಂಭದ ಹಂತದಲ್ಲಿ ಲಘು ಸಾಹಿತ್ಯದಿಂದ ತಮ್ಮ ಬರವಣಿಗೆ ಆರಂಭಿಸಿ, ನಂತರ ಅದನ್ನು ಗಂಭೀರ ಕಡೆಗೆ ಕೊಂಡೊಯ್ಯಬೇಕು. ಆಗ ಅವರು ಉತ್ತಮ ಕವಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರಲ್ಲಿಯೂ ಆರಂಭದಲ್ಲೇ ಗಂಭೀರ ಸಾಹಿತ್ಯಾತ್ಮಕ ಬರವಣಿಗೆ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಮೊದಲು ಸರಳವಾದ ಸಾಹಿತ್ಯದಿಂದ ರಚನೆ ಆರಂಭವಾಗುತ್ತದೆ. ಸಣ್ಣ ಸಣ್ಣ ರಚನೆಯ ಮೂಲಕ ಉತ್ತಮ ಕವಿತೆಗಳ ಕಡೆ ಸಾಗಬೇಕು. ಆಗ ನಮ್ಮ ಸಾಹಿತ್ಯ ಈ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲಯೂರಲು ಸಾಧ್ಯ ಎಂದರು.

ಒಬ್ಬ ಸಾಹಿತಿ ಹಾಗೂ ಆತನ ಬರಹವನ್ನು ಗಂಭೀರ ಎಂದು ಗುರುತಿಸಿದಾಕ್ಷಣ ಅವರು ಮೇಲೇರಬಾರದು. ಅಷ್ಟಕ್ಕೇ ಮತಿಭ್ರಮಣರಂತೆ ವರ್ತಿಸಬಾರದು. ಅಲ್ಲದೆ, ಕವಿ ಎಂದು ಹೇಳಿಕೊಳ್ಳಲು ಯಾರೂ ಹಿಂಜರಿಯಬಾರದು. ಅದಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಸಮಾಜದಲ್ಲಿ ಒಂದು ಕಾಲ್ಪನಿಕ ಲೋಕವನ್ನು ಉಳಿಸಿಕೊಂಡು, ಸಮತೋಲವನ್ನು ಕಾಯ್ದುಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಏಕೀಕರಣ ಪ್ರತ್ಯೇಕ ಮಾಡುವುದು ಸರಿಯಲ್ಲ. ಒಂದು ವೇಳೆ ಆ ರೀತಿಯಲ್ಲಿ ಮಾಡಿದರೆ ಅದು ನಾಡಿನ ಮನಸ್ಸುಗಳನ್ನು ಒಡೆದಂತಾಗುತ್ತದೆ. ಆದುದರಿಂದಾಗಿ, ಯಾವುದೇ ಕಾರಣಕ್ಕೂ ನಾವು ಅದಕ್ಕೆ ಅವಕಾಶ ನೀಡಬಾರದು. ಸರಕಾರ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳಬೇಕು ಎಂದು ಸಲಹೆ ನೀಡಿದರು.

ಇಂದಿನ ದಿನಗಳಲ್ಲಿ ವಾಟ್ಸ್‌ಅಪ್ ಗ್ರೂಪ್ ಸಾಕಷ್ಟು ಸಂಬಂಧಗಳನ್ನು ಬೆಸೆಯುತ್ತಿದೆ. ಜತೆಗೆ ಅದರ ಮೂಲಕ ಉತ್ತಮ ವಿಷಯಗಳ ಕುರಿತು ಚರ್ಚೆ ಹಾಗೂ ಬೆಳವಣಿಗೆ ಆದರೆ ಒಳಿತು. ಈಗಾಗಲೇ ನಾವು ಅಕಾಡೆಮಿಯಿಂದ ಚಕೋರ ತಂಡ ಮಾಡಿದ್ದು, ಆ ತಂಡದ ಎಲ್ಲಾ ಸದಸ್ಯರನ್ನು ಇದೇ ರೀತಿ ಸಮಾವೇಶದ ಮೂಲಕ ಒಗ್ಗೂಡಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದರು.

ಪ್ರತಿಷ್ಠಾನದ ಸದಸ್ಯರು ಸೇರಿ ತಯಾರಿಸಿದ್ದ ಒಲವನಾದ, ಭಾವದಲೆಯಲಿ, ಭಾವತೀರದಲ್ಲಿ ಅಲೆಗಳು ಎಂಬ ಮೂರು ಧ್ವನಿಸಾಂದ್ರಿಕೆ ಹಾಗೂ ಬಣ್ಣದ ಗರಿ (ಕವನ ಸಂಕಲನ), ಬಣವೆ (ಕಥಾ ಸಂಕಲನ), ಅಡಿಗಲ್ಲು (ಲೇಖನ ಸಂಕಲನ) ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ವತ್ಸಲ ಸುರೇಶ್, ಸದಸ್ಯರಾದ ಡಿ.ಎಸ್. ಮಂಜುನಾಥ್, ಡಾ.ಶಿವಕುಮಾರ್ ಮಾಲಿ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News