ಮಾದಕ ವಸ್ತು ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ: ಡಾ.ಜಿ.ಪರಮೇಶ್ವರ್

Update: 2018-08-27 15:06 GMT

ಬೆಂಗಳೂರು, ಆ.27: ಮಾದಕ ವಸ್ತುಗಳ ಬಳಕೆ ತಡೆಗಟ್ಟಲು ಸಾರ್ವಜನಿಕ ಹಾಗೂ ಶಿಕ್ಷಣ ಸಂಸ್ಥೆಗಳ ಸಹಕಾರ ಅತ್ಯಂತ ಅವಶ್ಯಕ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಸೋಮವಾರ ಬೆಂಗಳೂರು ನಗರ ಪೊಲೀಸರ ವತಿಯಿಂದ ನಿಮ್ಹಾನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಾದಕ ವಸ್ತುಗಳ ಬಳಕೆ ತಡೆಗಟ್ಟುವ ಸಮಾವೇಶ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಂಜಾಬ್‌ನಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಿದೆ. ಕ್ರಮೇಣ ಎಲ್ಲರಾಜ್ಯಗಳಿಗೂ ಡ್ರಗ್ ಪ್ರಸರಿಸಿದೆ. ಬೆಂಗಳೂರಿನಲ್ಲಿಯೇ ಡ್ರಗ್ ತಯಾರಾಗುತ್ತಿರುವ ವಿಚಾರವೂ ಗಮನಕ್ಕೆ ಬಂದಿದೆ. ಶಾಲೆಗಳಲ್ಲಿ ಚಾಕೋಲೆಟ್ ಮೂಲಕ ಡ್ರಗ್ ವ್ಯಸನಕ್ಕೆ ಅಡಿಪಾಯ ಹಾಕಿ, ಕಾಲೇಜು ಮೆಟ್ಟಿಲೇರುವ ಒಳಗಾಗಿ ಅವರನ್ನು  ಸಂಪೂರ್ಣ ವ್ಯಸನಿಗಳನ್ನಾಗಿ ಪರಿವರ್ತಿಸುತ್ತಾರೆ ಎಂದು ಅವರು ಹೇಳಿದರು.

ಪ್ರತಿ ಕಾಲೇಜುಗಳ ಮುಂಭಾಗ ಸಣ್ಣ ಪೆಟ್ಟಿ ಅಂಗಡಿ ಇಟ್ಟುಕೊಂಡು ಮಾರುತ್ತಾರೆ. ಹೀಗಾಗಿ, ಮೂಲದಿಂದಲೇ ಜಾಗೃತಿ ಮೂಡಿಸಬೇಕು. ಡ್ರಗ್ ಮಾರಾಟಗಾರರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ. ಪೋಕ್ಸೋ ಕಾಯಿದೆ ಅಡಿಯಲ್ಲಿ ಬಂಧಿಸುವ ಅವಕಾಶವಿದೆ. ಕಾನೂನಿನ ಬಗ್ಗೆ ಅರಿವು ಮೂಡಿಸಿದರೆ ಮಾರಾಟಗಾರರು ಭಯದಿಂದ ದೂರ ಉಳಿಯುತ್ತಾರೆ ಎಂದು ಅವರು ಹೇಳಿದರು.

ನಮ್ಮ ರಾಜ್ಯದಲ್ಲೆ ಗಾಂಜಾ ಬೆಳೆಯುವವರೂ ಇದ್ದಾರೆ. ಹೀಗಾಗಿ, ಸಾರ್ವಜನಿಕರ ಸಹಕಾರದೊಂದಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪರಮೇಶ್ವರ್ ತಿಳಿಸಿದರು.

ಡ್ರಗ್ ಸೇವನೆ ತ್ಯಜಿಸುವ ಕುರಿತು ಬೈಕ್ ರ್ಯಾಲಿ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಇದೇ ಸಂದರ್ಭದಲ್ಲಿ ಪರಮೇಶ್ವರ್ ಚಾಲನೆ ನೀಡಿದರು. ಅಲ್ಲದೆ, ಡ್ರಗ್ ಸೇವನೆಯ ದುಷ್ಪರಿಣಾಮದ ಕುರಿತು ಚಿತ್ರಕಲಾ ಪ್ರದರ್ಶನ, ಕಿರುಚಿತ್ರ ಪ್ರದರ್ಶನ ಹಾಗೂ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News