ಕೊಡಗಿಗೆ ಪ್ರಧಾನಿ ಮೋದಿ 20 ಸಾವಿರ ಕೋಟಿ ನೆರೆ ಪರಿಹಾರ ನೀಡಲಿ: ವಾಟಾಳ್ ನಾಗರಾಜ್

Update: 2018-08-27 15:58 GMT

ಬೆಂಗಳೂರು, ಆ.27: ಪ್ರವಾಹದಿಂದಾಗಿ ಹಾನಿಯಾಗಿರುವ ಕೊಡಗಿಗೆ ನೆರೆ ಪರಿಹಾರವಾಗಿ ಪ್ರಧಾನಿ ನರೇಂದ್ರ ಮೋದಿ 20 ಸಾವಿರ ಕೋಟಿ ರೂ. ಹಣ ನೀಡಬೇಕೆಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೊಡಗಿಗೆ ಭೇಟಿ ನೀಡಬೇಕು ಎಂದು ಒತ್ತಾಯಿಸಿ ಕನ್ನಡ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜಭವನ ಮುತ್ತಿಗೆ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕೇರಳದ ಜಲಪ್ರಳಯದ ಸಮಸ್ಯೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪರಿಹಾರದ ನೆರವನ್ನು ಘೋಷಿಸಿದ್ದಾರೆ. ಆದರೆ, ಅದೇ ಪರಿಸ್ಥಿತಿ ಕರ್ನಾಟಕದ ಕೊಡಗಿನಲ್ಲಿ ಆಗಿದ್ದರೂ, ರಾಜ್ಯಕ್ಕೆ ಭೇಟಿ ನೀಡದೆ ನಿರ್ಲಕ್ಷಿಸಿದ್ದಾರೆ ಎಂದು ದೂರಿದರು.

ಕೇರಳಕ್ಕೆ ಪ್ರಧಾನಿ ಹೋಗಿ ಬರುತ್ತಾರೆ. ಪಕ್ಕದ ರಾಜ್ಯ ತಮಿಳುನಾಡಿಗೂ ಹೋಗುತ್ತಾರೆ. ಆದರೆ, ಕರ್ನಾಟಕಕ್ಕೆ ಮಾತ್ರ ಬಾರದೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದ ಅವರು, ಕರ್ನಾಟಕವನ್ನು ಯಾರು ಕೇಳೋರೆ ಇಲ್ಲ, ರಾಜ್ಯದ ಸಂಸತ್ ಸದಸ್ಯರಿಗೆ ನಾಚಿಕೆಯಾಗಬೇಕು. ನೀವುಗಳು ಕೂಡಲೇ ರಾಜೀನಾಮೆ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನಂತರವೂ ಪ್ರಧಾನಿ ಮಂತ್ರಿಗಳು ರಾಜ್ಯಕ್ಕೆ ಆಗಮಿಸಿ ಈ ಸಮಸ್ಯೆಗಳಿಗೆ ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಸಾ.ರಾ.ಗೋವಿಂದು, ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಕೆ.ಆರ್.ಕುಮಾರ್, ಮಂಜುದೇವ್, ಗಿರೀಶ್‌ಗೌಡ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News