×
Ad

ಹೈದರಾಬಾದ್ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮುಂದುವರಿಸದಂತೆ ಆಗ್ರಹ

Update: 2018-08-29 21:41 IST

ಬೆಂಗಳೂರು, ಆ.29: ಹೈದರಾಬಾದ್ ಕರ್ನಾಟಕ (ಹೈಕ) ಪ್ರದೇಶಕ್ಕೆ ಮಲತಾಯಿ ಧೋರಣೆ ಮುಂದುವರಿಸಿರುವುದನ್ನು ವಿರೋಧಿಸಿ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಸಮಿತಿ ವತಿಯಿಂದ ಅ.2 ರಿಂದ ಬೀದರ್‌ನಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ, ಹೈ-ಕ ಪ್ರದೇಶಕ್ಕೆ ಜಾರಿಯಾಗಿರುವ 371ಜೆ ಕಲಂ ಅನ್ವಯ ಶಿಕ್ಷಣ, ನೇಮಕಾತಿ, ಮುಂಭಡ್ತಿಗಾಗಿ ಆ ಭಾಗದ ಅಭ್ಯರ್ಥಿಗಳಿಗೆ ಶೇ.80ರಷ್ಟು ಮೀಸಲಾತಿ ನೀಡಬೇಕು. ಅಲ್ಲದೆ, ರಾಜ್ಯದ ಇತರ ವಿಭಾಗಗಳಲ್ಲಿಯೂ ಹೈ-ಕ ಪ್ರದೇಶದ ಅಭ್ಯರ್ಥಿಗಳಿಗೆ ಶೇ.8ರಷ್ಟು ಮೀಸಲಾತಿ ನೀಡಬೇಕು. ಆದರೆ, 371 ಜೆ ಕಲಂ ಸಮರ್ಪಕ ಅನುಷ್ಠಾನಗೊಳ್ಳದ ಕಾರಣ ಆ ಭಾಗದ ಅಭ್ಯರ್ಥಿಗಳಿಗೆ ವಂಚನೆಯಾಗುತ್ತಿದೆ ಎಂದು ಹೇಳಿದರು.

ಹೈದರಾಬಾದ್ ಕರ್ನಾಟಕ ವ್ಯಾಪ್ತಿಗೊಳಪಡುವ ನೇಮಕಾತಿ ಮತ್ತು ಮುಂಭಡ್ತಿ ಪ್ರಕ್ರಿಯೆಯಲ್ಲಿ ಮೊದಲಿಗೆ ಹೈದರಾಬಾದ್ ವ್ಯಾಪ್ತಿಗೊಳಪಡುವ ಅಧಿಕಾರಿಗಳನ್ನು ಪರಿಗಣಿಸಬೇಕೆಂದು ನಿಯಮವಿದೆ. ಆದರೆ ಇತ್ತೀಚಿಗೆ ಪೊಲೀಸ್ ನಿರೀಕ್ಷಕರ ಹುದ್ದೆಯಿಂದ ಡಿವೈಎಸ್‌ಪಿ ಹುದ್ದೆಗೆ ಮುಂಭಡ್ತಿ ಪಡೆದ 10 ಅಧಿಕಾರಿಗಳು ಹೈದರಾಬಾದ್ ಕರ್ನಾಟಕದ ವ್ಯಾಪ್ತಿಗೆ ಒಳಪಡುವುದಿಲ್ಲ. ಇದರಿಂದ ಹೈಕ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎಸ್.ಎನ್.ಝಂಡೇಕರ್, ಉದಯಕುಮಾರ ಬೇವಿನಗಿಡದ, ಶಂಕರ ಎಂ.ರಾಗಿ, ಎಸ್.ಎಸ್.ಹುಲ್ಲೂರು, ತಳವಾರ ಮಂಜುನಾಥ, ವಿ.ಎಸ್.ರಘುಕುಮಾರ್ ರೆಡ್ಡಿ, ಶಿವನಗೌಡ ಪಾಟೀಲ್, ಎಂ.ಎಸ್.ಸುರೇಶ ರೆಡ್ಡಿ, ಎಂ.ಜೆ.ದಯಾನಂದ ಹಾಗೂ ಅಯ್ಯಣ್ಣ ರೆಡ್ಡಿ ಅವರು ಹೈಕ ಭಾಗದ ಅಧಿಕಾರಿಗಳಲ್ಲ. ಇವರ ಬದಲಿಗೆ ಹೈಕ ಭಾಗದ ಪೊಲೀಸ್ ಅಧಿಕಾರಿಗಳಾದ ಗಂಗಾಧರ ಬಿ.ಎಂ, ಶಿವಾನಂದ ಪವಾಡ ಶೆಟ್ಟಿ, ಹನುಮಂತರಾಯ, ಶ್ರೀಧರ ದೊಡ್ಡಿ, ಎಂ.ಜಿ.ಸತ್ಯನಾರಾಯಣ ರಾವ್, ವಿನೋದ ಎಸ್. ಹಾಗೂ ಹನುಮಂತರಾಯ ಶ್ರೀಮಂತರಾಯ ಇವರಿಗೆ ಮುಂಭಡ್ತಿ ನೀಡಬೇಕಿತ್ತು ಎಂದು ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಹೈಕ ಭಾಗದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾರ್ಚ್‌ನಲ್ಲಿ ಮನವಿ ಮಾಡಲಾಗಿತ್ತು. ಮುಂಭಡ್ತಿ ಕುರಿತು 4-5 ತಿಂಗಳಿಂದ ಅಭ್ಯರ್ಥಿಗಳ ಅರ್ಹತೆ ಹಾಗೂ ದಾಖಲಾತಿಗಳ ಪರಿಶೀಲನೆ ನಡೆಸಿದರೂ ಪೊಲೀಸ್ ಇಲಾಖೆ ಯಾವುದೇ ಸೂಕ್ತ ತೀರ್ಮಾನ ಕೈಗೊಂಡಿಲ್ಲ. ಅರ್ಹ ಪೊಲೀಸರು ಮುಂಬಡ್ತಿಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಕೂಡಲೇ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News