ವಿಚಾರವಾದಿಗಳನ್ನು ಕೊಂದವರಿಗೆ ಮೋದಿಯ ಕೃಪಾಕಟಾಕ್ಷವಿದೆ: ಎ.ಕೆ.ಸುಬ್ಬಯ್ಯ ಆರೋಪ

Update: 2018-09-05 16:55 GMT

ಬೆಂಗಳೂರು, ಸೆ.5: ನಾವೆಲ್ಲರೂ ಗೌರಿ ಪ್ರತಿಪಾದನೆ ಮಾಡಿದ ಪರಿವರ್ತನೆಯನ್ನು ಮುಂದುವರಿಸಿಕೊಂಡು ಹೋಗುವ ಶಪಥ ಮಾಡಬೇಕಾಗಿದೆ. ಗಾಂಧಿಯನ್ನು ಹತ್ಯೆ ಮಾಡಿದವರೇ ಗೌರಿಯನ್ನು ಹತ್ಯೆ ಮಾಡಿದ್ದಾರೆ. ಗಾಂಧಿ ಒಬ್ಬ ಹಿಂದೂ, ಅಷ್ಟೆ ಅಲ್ಲದೆ ಶ್ರೇಷ್ಠ ಸನಾತನವಾದಿ ಎಂದು ಹೇಳಿಕೊಂಡಿದ್ದರು. ಆದರೂ ಹಿಂದುತ್ವವಾದಿ ಗೋಡ್ಸೆ ಅವರನ್ನು ಕೊಲೆ ಮಾಡಿದ. ಹಿಂದೂ ಮತ್ತು ಹಿಂದುತ್ವಕ್ಕೆ ಇರುವ ವ್ಯತ್ಯಾಸವನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ವಿಚಾರವಾದಿ, ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಹೇಳಿದರು.

ಬೆಂಗಳೂರಿನಲ್ಲಿ ನಡೆದ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಮತ್ತು ಗೌರಿ ಎಲ್ಲರೂ ಶ್ರೇಷ್ಠ ಹಿಂದೂಗಳೇ ಆಗಿದ್ದಾರೆ. ಅವರನ್ನು ಕೊಂದು ಈ ಹಿಂದುತ್ವವಾದಿಗಳು ಕ್ರೂರತೆ ಮೆರೆಯುತ್ತಿದ್ದಾರೆ. ಹಿಂದುತ್ವದ ಅಮಲಿನ ಸರಕಾರವಿರುವುದರಿಂದಲೇ ಇವೆಲ್ಲಾ ನಡೆಯುತ್ತಿವೆ. ಈ ಕೊಲೆಗಳಿಗೆ ಪ್ರಭುತ್ವದ ನೇರ ಬೆಂಬಲವಿದೆ. ಮೋದಿಯ ಕೃಪಾಕಟಾಕ್ಷವಿದೆ ಎಂದು  ಆರೋಪಿಸಿದರು.

ಹಿಂದೂಗಳನ್ನು, ದೇಶವನ್ನು, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಕಾಪಾಡಿಕೊಳ್ಳಬೇಕಾದರೆ ಈಗ ಅಧಿಕಾರದಲ್ಲಿರುವ ಫ್ಯಾಶಿಸ್ಟರನ್ನು ಮೊದಲು ಕೆಳಗಿಳಿಸಬೇಕಾಗಿದೆ. ಇದು ರಾಜಕಾರಣಿಗಳಿಂದ ಸಾಧ್ಯವಿಲ್ಲ. ಇದಕ್ಕೆ ಉತ್ತರವನ್ನು ಜನರೇ ಕಂಡುಕೊಳ್ಳಬೇಕು. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯನ್ನು ಹೇಗೆ ಜನರೇ ಎದುರಿಸಿದರೋ ಅದೇ ರೀತಿಯಲ್ಲಿ ಇಂದು ಕೂಡ ಜನರೇ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ಅವರು ಕರೆ ನೀಡಿದರು.

ಸ್ವಾಮಿ ಅಗ್ನಿವೇಶ್‌ ರ ಮೇಲೆ ಎರಡು ಬಾರಿ ಸಂಘ ಪರಿವಾರದವರು ಹಲ್ಲೆ ಮಾಡಿದ್ದಾರೆ. ಸ್ವಾಮಿ ವಿವೇಕಾನಂದರ ದಾರಿಯಲ್ಲಿ ನಡೆಯುತ್ತಿರುವ ಸಾಧು ಸನ್ಯಾಸಿ ಹಿಂದೂ ಸಂತನಾದ ಈ ಸ್ವಾಮಿ ಅಗ್ನಿವೇಶ್‌ ರ ಮೇಲೆಯೇ ದಾಳಿ ಮಾಡುತ್ತಾರೆಂದರೆ, ಈ ಹಿಂದೂತ್ವವಾದಿಗಳು ಎಂತಹ ಕ್ಯಾನ್ಸರ್‌ನಿಂದ ನರಳುತ್ತಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News