ಚೀನಾ ಜೊತೆ ಕೈಗಾರಿಕಾ ಸ್ಪರ್ಧೆಗೆ ಯೋಜನೆ: ರಾಜ್ಯದ ವಿವಿಧ ಭಾಗಗಳಲ್ಲಿ ಕ್ಲಸ್ಟರ್‌ಗಳ ನಿರ್ಮಾಣ; ಕೃಷ್ಣಭೈರೇಗೌಡ

Update: 2018-09-06 17:21 GMT

ಬೆಂಗಳೂರು, ಸೆ.6: ಚೀನಾ ಜೊತೆ ಕೈಗಾರಿಕಾ ಸ್ಪರ್ಧೆ ಮಾಡಲು ಕರ್ನಾಟಕವನ್ನು ಸಜ್ಜುಗೊಳಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ, ಕಲಬುರ್ಗಿ, ಚಿತ್ರದುರ್ಗ, ಹಾಸನ, ಕೊಪ್ಪಳ, ಮೈಸೂರು, ಬಳ್ಳಾರಿ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಬೀದರ್‌ನಲ್ಲಿ ವಿವಿಧ ಉದ್ಯಮಗಳನ್ನು ಕ್ಲಸ್ಟರ್ ಮಾದರಿಯಲ್ಲಿ ಕೈಗಾರಿಕಾ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಿದ್ದು, ಅದರಂತೆ 9 ಕ್ಲಸ್ಟರ್‌ಗಳಿಗೆ ಸಂಬಂಧಿಸಿದ ತರಬೇತಿ ನೀಡುವ ಸಂಸ್ಥೆ ಸ್ಥಾಪನೆ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಈ ವಿಷಯವನ್ನು ತಿಳಿಸಿದರು.

ಉನ್ನತ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ರಾಷ್ಟ್ರೀಯ ಉಚ್ಛತಾ ಶಿಕ್ಷಾ ಅಭಿಯಾನದ ಅಡಿಯಲ್ಲಿ 24 ಕೋಟಿ ರೂ.ವೆಚ್ಚದಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಾದರಿ ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಸಾರ್ವಜನಿಕ ಸಂಸ್ಥೆಯಾಗಿರುವ ಕಿದ್ವಾಯಿ ಆಸ್ಪತ್ರೆಯಲ್ಲಿ 27 ಕೋಟಿ ರೂ.ವೆಚ್ಚದಲ್ಲಿ ಸಿಟಿ ಸ್ಕಾನರ್ ಹಾಗೂ ಅಸ್ಥಿಮಜ್ಜೆ ಕಸಿ(ಬೋನ್ ಮ್ಯಾರೋ) ಘಟಕಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ. ಸರಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಇದೇ ಮೊದಲ ಬಾರಿಗೆ ಅಸ್ಥಿಮಜ್ಜೆ ಕಸಿ ಘಟಕವನ್ನು ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸೆಮಿ ಕಂಡಕ್ಟರ್, ಚಿಪ್ಸ್‌ಗಳನ್ನು ಉತ್ಪಾದನೆ ಮಾಡಲು ರಾಜ್ಯ ಸರಕಾರ ಇಂಡಿಯನ್ ಎಲೆಕ್ಟ್ರಾನಿಕ್ ಅಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್ ಜೊತೆ ಒಡಂಬಡಿಕೆ ಮಾಡಿಕೊಂಡು, ಸೆಮಿ ಕಂಡಕ್ಟರ್ ಸಂಶೋಧನೆ ಹಾಗೂ ಅಭಿವೃದ್ಧಿಗೆ ಬೇಕಾದ ಸೆಂಟರ್ ಫಾರ್ ಎಕ್ಸಲೆನ್ಸಿಯನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲು ತೀರ್ಮಾನ ಮಾಡಿದ್ದೇವೆ. ಐದು ವರ್ಷದಲ್ಲಿ ಇದಕ್ಕಾಗಿ ಒಟ್ಟು 56 ಕೋಟಿ ರೂ.ವೆಚ್ಚ ಮಾಡಲಾಗುವುದು. ಇದರಲ್ಲಿ ಸರಕಾರದ ಪಾಲು 21.53 ಕೋಟಿ ರೂ.ಗಳಿರುತ್ತದೆ ಎಂದು ಅವರು ಹೇಳಿದರು.

ಕಾರವಾರ ಜಿಲ್ಲೆಯ ಬೆಡ್ತಿ ನದಿಗೆ ಮೇಲ್ಸೇತುವೆ ನಿರ್ಮಿಸಲು 14 ಕೋಟಿ ರೂ.ಮಂಜೂರಾಗಿತ್ತು. ಹೆಚ್ಚುವರಿ ಕಾಮಗಾರಿಗಳಿರುವುದರಿಂದ 23.67 ಕೋಟಿ ರೂ.ಗಳಿಗೆ ಪರಿಷ್ಕೃತ ಮಾಡಿದ್ದೇವೆ. ರಾಮನಗರ ಜಿಲ್ಲೆಯ ಜಿಲ್ಲಾಡಳಿತ ಸಂಕೀರ್ಣ ಬಹುತೇಕ ಪೂರ್ಣಗೊಂಡಿದ್ದು, ಹೆಚ್ಚುವರಿ ಕಾಮಗಾರಿಗಳಿಗಾಗಿ 10 ಕೋಟಿ ರೂ.ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.

ವಾಸವದತ್ತ ಸಿವೆುಂಟ್‌ನವರಿಗೆ ಸೇಡಂ ತಾಲೂಕಿನಲ್ಲಿ 655 ಎಕರೆ ಖರೀದಿ ಮಾಡಲು ಹಾಗೂ ವಾರದ ಸೋಲರ್(ಅದಾನಿ ಸಮೂಹ ಸಂಸ್ಥೆಯವರದ್ದು) ಸಂಸ್ಥೆಯವರಿಗೆ ಯಲಬುರ್ಗ 44 ಎಕರೆ, ಔರಾದ್ 282 ಎಕರೆ, ವಿಜಯಪುರ ತಾಲೂಕಿನ 275 ಎಕರೆಯಲ್ಲಿ ತಲಾ 50 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ರೈತರಿಂದ ಭೂಮಿ ಖರೀದಿಸಲು ಸರಕಾರ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೈರ್ಮಲ್ಯ ಕಿಟ್‌ಗಳನ್ನು ರಾಜ್ಯ ಸಾಬೂನು ಮತ್ತು ಮರ್ಜಕ ಸಂಸ್ಥೆಯಿಂದ 17.83 ಕೋಟಿ ರೂ.ವೆಚ್ಚದಲ್ಲಿ ಖರೀದಿಸಲು ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಚಳ್ಳಕೇರಿ, ಹಾವೇರಿ, ಮಡಿಕೇರಿ, ಗೌರಿಬಿದನೂರು ಹಾಗೂ ಹಮ್ನಾಬಾದ್‌ನಲ್ಲಿ ಸರಕಾರಿ ಟೂಲ್ ಮತ್ತು ತರಬೇತಿ ಕೇಂದ್ರಗಳನ್ನು ಮೇಲ್ದಜೇಗೇರಿಸಲು ಕೋಟಿ 49.35 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆಯಡಿಯಲ್ಲಿ ಬಾಣಸವಾಡಿಯಲ್ಲಿ ಸಾಮಾನ್ಯ ರೈಲುಗಳ ಇಂಜಿನ್ ಅನ್ನು ಮೇಮು ರೈಲುಗಳ ಇಂಜಿನ್ ಆಗಿ ಪರಿವರ್ತಿಸಲು ಘಟಕ ಮಾಡುತ್ತಿದ್ದಾರೆ. ಇದಕ್ಕಾಗಿ 23.24 ಕೋಟಿ ರೂ.ಗಳನ್ನು ಒದಗಿಸಲು ನಿರ್ಧರಿಸಲಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು. ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಮಾಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ 2.20 ಕೋಟಿ ಹಿಡುವಳಿಗಳಿದ್ದು, ಕಳೆದ ವರ್ಷ 1.60 ಕೋಟಿ ಹಿಡುವಳಿಗಳ ಸಮೀಕ್ಷೆ ಮಾಡಲಾಗಿತ್ತು. ಈ ವರ್ಷ ಸರಕಾರಿ ಅಧಿಕಾರಿಗಳೊಂದಿಗೆ ಪ್ರಗತಿಪರ ಯುವಕರು, ರೈತರನ್ನು ಬಳಸಿಕೊಂಡು ಮೊಬೈಲ್ ಆ್ಯಪ್ ಮೂಲಕ ರೈತರು ಯಾವ ಹಂಗಾಮಿಯಲ್ಲಿ ಯಾವ ಬೆಳೆ ಹಾಕಿದ್ದಾರೆ ಎಂಬುದನ್ನು ಸಮೀಕ್ಷೆ ಮಾಡಲು 25 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ಇಲಾಖೆಯಿಂದ ಎಸ್ಸಿ-ಎಸ್ಟಿ ಜನಸಂಖ್ಯೆ ಇರುವ ಹಾವೇರಿ, ಚಿತ್ರದುರ್ಗ, ಕೋಲಾರ, ಚಾಮರಾಜನಗರ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರದಲ್ಲಿ 267.19 ಕೋಟಿ ರೂ.ವೆಚ್ಚದಲ್ಲಿ ವಸತಿ ಸಹಿತ ಪದವಿ ಕಾಲೇಜುಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಹಾಸನ ಮತ್ತು ಕಾರವಾರದಲ್ಲಿ ಇರುವ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕ್ಯಾನ್ಸರ್ ಕೇರ್ ಘಟಕಗಳನ್ನು ತಲಾ 18.25 ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕು ಹಾಗೂ ಯಳಂದೂರು ತಾಲೂಕಿನ 64 ಗ್ರಾಮಗಳಿಗೆ 113.60 ಕೋಟಿ ರೂ.ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿ 25.52 ಕೋಟಿ ರೂ.ವೆಚ್ಚದಲ್ಲಿ 10 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದೇನಹಳ್ಳಿಯಲ್ಲಿ ಮಾದರಿ ವಸತಿಯುಕ್ತ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು 15 ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಚನ್ನಪಟ್ಟಣ-ರಾಮನಗರದ ನಗರ ಹಾಗೂ ಎಂಟು ಹಳ್ಳಿಗಳಿಗೆ 456 ಕೋಟಿ ರೂ.ವೆಚ್ಚದಲ್ಲಿ ನಟ್ಕಲ್ ಜಲಾಶಯದಿಂದ ಕುಡಿಯುವ ನೀರು ಪೂರೈಸುವ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News