ಜೆಡಿಎಸ್ ಹಿರಿಯ ಮುಖಂಡ ಅನ್ವರ್ ಶರೀಫ್ ನಿಧನ

Update: 2018-09-07 13:20 GMT

ಬೆಂಗಳೂರು, ಸೆ.7: ಜೆಡಿಎಸ್ ಹಿರಿಯ ಉಪಾಧ್ಯಕ್ಷ, ಜುಮಾ ಮಸ್ಜಿದ್ ಟ್ರಸ್ಟ್ ಬೋರ್ಡ್‌ನ ಮಾಜಿ ಅಧ್ಯಕ್ಷ ಹಾಗೂ ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಅನ್ವರ್ ಶರೀಫ್(58) ಶುಕ್ರವಾರ ಬೆಳಗ್ಗೆ ನಗರದ ರಿಚರ್ಡ್ಸ್ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅನ್ವರ್ ಶರೀಫ್, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೂರು ದಿನಗಳ ಹಿಂದೆಯಷ್ಟೇ ಮನೆಗೆ ಹಿಂದಿರುಗಿದ್ದರು. ಅಲ್ಲದೆ, ಚಿಕಿತ್ಸೆಯನ್ನು ಮುಂದುವರೆಸಲಾಗಿತ್ತು. ಆದರೆ, ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದರು ಎಂದು ಅವರ ಪುತ್ರ ಉಸ್ಮಾನ್ ಶರೀಫ್ ಮಾಹಿತಿ ನೀಡಿದರು.

ಸುಮಾರು 12 ವರ್ಷಗಳ ಕಾಲ ಜುಮಾ ಮಸ್ಜಿದ್ ಟ್ರಸ್ಟ್ ಬೋರ್ಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಮೆ ಅನ್ವರ್ ಶರೀಫ್ ಅವರದ್ದು. ಅಲ್ಲದೆ, ಹಲವಾರು ಇಸ್ಲಾಮಿಕ್, ಚಾರಿಟೇಬಲ್ ಸಂಸ್ಥೆಗಳೊಂದಿಗೂ ಒಡನಾಟ ಹೊಂದಿದ್ದರು. ನಗರದ ಕೈಗಾರಿಕೋದ್ಯಮಿಗಳ ಪೈಕಿ ಒಬ್ಬರಾಗಿರುವ ಅನ್ವರ್ ಶರೀಫ್, ಕರೋಲ್ ಗ್ರೂಪ್ ಆಫ್ ಕಂಪನೀಸ್‌ನ ಅಧ್ಯಕ್ಷರಾಗಿದ್ದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು, ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಪರಾಭವಗೊಂಡಿದ್ದರು. ಈ ಚುನಾವಣೆ ಸಂದರ್ಭದಲ್ಲೆ ನಡೆದ ಅಪಘಾತವೊಂದರಲ್ಲಿ ಅವರು ಗಾಯಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದರು.

ಸರ್ವಧರ್ಮ ಸಮನ್ವಯತೆಗಾಗಿ ಶ್ರಮಿಸುತ್ತಿದ್ದ ಅನ್ವರ್ ಶರೀಫ್, ತಮ್ಮ ಅಧ್ಯಕ್ಷತೆಯಲ್ಲೆ ಹಲವಾರು ಕೋಮುಸೌಹಾರ್ದತೆಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅಲ್ಲದೆ, ಸರ್ವಧರ್ಮೀಯರಿಂದ ಗೌರವಿಸಲ್ಪಡುವ ವ್ಯಕ್ತಿಯಾಗಿದ್ದರು. ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ.

ಮೃತರ ಜನಾಝ ನಮಾಝನ್ನು ಇಂದು ಮಸ್ಜಿದೆ ಖಾದ್ರಿಯಾದಲ್ಲಿ ನೆರವೇರಿಸಿ, ಖುದ್ದೂಸ್ ಸಾಹೇಬ್ ಖಬರಸ್ಥಾನ್‌ನಲ್ಲಿ ಅವರ ಪಾರ್ಥಿವ ಶರೀರವನ್ನು ದಫನ್ ಮಾಡಲಾಯಿತು.

ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್‌ ಅಹ್ಮದ್‌ ಖಾನ್, ಶಾಸಕರಾದ ರೋಷನ್‌ ಬೇಗ್, ಅಖಂಡ ಶ್ರೀನಿವಾಸಮೂರ್ತಿ, ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹೀಂ, ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ಅಧ್ಯಕ್ಷ ಎಸ್.ಎಸ್.ಎ.ಖಾದರ್ ಸೇರಿದಂತೆ ಸಾವಿರಾರು ಮಂದಿ ಮೃತರ ಅಂತಿಮ ದರ್ಶನವನ್ನು ಪಡೆದರು.

ಮುಖ್ಯಮಂತ್ರಿ ಶೋಕ: ಬೆಂಗಳೂರು ನಗರದಲ್ಲಿ ಜೆಡಿಎಸ್ ಪಕ್ಷವನ್ನು ಬೆಳೆಸುವಲ್ಲಿ ಅನ್ವರ್ ಶರೀಫ್ ಸೇವೆ ಅನನ್ಯ. ಇವರ ನಿಧನದಿಂದ ಪಕ್ಷದ ಒಬ್ಬ ಕಾರ್ಯಕರ್ತನನ್ನು ಕಳೆದುಕೊಂಡಂತಾಗಿದೆ. ಭಗವಂತನು ಇವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಈ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಶೋಕ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News