ಕಾರು, ಕಾರಿನ ಚಕ್ರಗಳ ಕಳವು ಪ್ರಕರಣ: 3 ಮಂದಿ ಬಂಧನ

Update: 2018-09-07 14:45 GMT

ಬೆಂಗಳೂರು, ಸೆ.7: ನಗರದ ವಿವಿಧೆಡೆ ಕಾರುಗಳು ಹಾಗೂ ಕಾರಿನ ಚಕ್ರಗಳನ್ನು ಕಳವು ಮಾಡುತ್ತಿದ್ದ ಕೋಳಿ ಅಂಗಡಿ ಮಾಲಕ ಸೇರಿ 3 ಮಂದಿ ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಭುವನೇಶ್ವರಿ ನಗರದ ಸುನಿಲ್ ಕುಮಾರ್(26), ಹರಿಪ್ರಸಾದ್(20), ರಾಜಶೇಖರ್(19) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ 6 ಲಕ್ಷ ರೂ. ಮೌಲ್ಯದ 2 ಮಾರುತಿ ಕಾರುಗಳು, 5 ದ್ವಿಚಕ್ರ ವಾಹನಗಳು, 8 ಕಾರಿನ ಚಕ್ರಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ರವಿಚೆನ್ನಣ್ಣನವರ್ ತಿಳಿಸಿದರು.

ಭುವನೇಶ್ವರಿ ನಗರದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಹರಿಪ್ರಸಾದ್ ಅಂಗಡಿಯಲ್ಲಿ ನಷ್ಟವುಂಟಾಗಿ ಸಾಲ ಮಾಡಿಕೊಂಡಿದ್ದನು. ಈ ಸಾಲ ತೀರಿಸಲು ಸಾಧ್ಯವಾಗದೆ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರ ಜತೆ ಸೇರಿ ಕಾರು ಕದಿಯುತ್ತಿದ್ದ. ಕೆಂಗೇರಿಯಲ್ಲಿ 2 ಮಾರುತಿ ಕಾರುಗಳನ್ನು ಕಳವು ಮಾಡಿದ್ದ ಆರೋಪಿಗಳು ಜ್ಞಾನಭಾರತಿಯಲ್ಲಿ ಐ-20 ಕಾರಿನ 4 ಚಕ್ರಗಳು ಹಾಗೂ ಕೆಂಗೇರಿಯಲ್ಲಿ ಹೋಂಡಾ ಸಿಟಿ ಕಾರಿನ 4 ಚಕ್ರಗಳನ್ನು ಕಳವು ಮಾಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News