ಗಾಂಧಿ ಜಯಂತಿಯಂದು ಭಾರತೀಯ ರೈಲ್ವೆ ವಿಶೇಷ ಏನು ಗೊತ್ತೇ?
ಮುಂಬೈ, ಸೆ.8: ಗಾಂಧಿ ಜಯಂತಿಯಂದು ನೀವು ರೈಲಿನಲ್ಲಿ ಪ್ರಯಾಣಿಸುವುದಾದರೆ ಸಂಪೂರ್ಣ ಸಸ್ಯಾಹಾರಕ್ಕೆ ಸಜ್ಜಾಗಿ !. ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಸಂದರ್ಭದಲ್ಲಿ, ಐಆರ್ಸಿಟಿಸಿ ವಿಶೇಷ ಸಸ್ಯಾಹಾರ ಮೆನುವನ್ನು ಎಲ್ಲ ರೈಲುಗಳಲ್ಲಿ ಪರಿಚಯಿಸಲು ನಿರ್ಧರಿಸಿದೆ. ಈ ದಿನ ರೈಲುಗಳಲ್ಲಿ ಮಾಂಸಾಹಾರ ಸರಬರಾಜು ಇರುವುದಿಲ್ಲ.
ಎಲ್ಲ ರೈಲುಗಳಲ್ಲಿ ಸಸ್ಯಾಹಾರ ತಿನಸುಗಳನ್ನು ವಿತರಿಸುವಂತೆ ಎಲ್ಲ ರೈಲ್ವೆ ವಲಯಗಳ ಐಆರ್ಸಿಟಿಸಿ ವಿಭಾಗಕ್ಕೆಸೂಚಿಸಲಾಗಿದೆ ಎಂದು ವಕ್ತಾರ ಸಿದ್ಧಾರ್ಥ ಸಿಂಗ್ ಹೇಳಿದ್ದಾರೆ. ಅಕ್ಟೋಬರ್ 1ರಂದು ಪ್ರಯಾಣ ಆರಂಭಿಸುವವರು ಸಸ್ಯಾಹಾರ/ ಮಾಂಸಾಹಾರ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ 2ರಂದು ಕೂಡಾ ಪ್ರಯಾಣ ಮುಂದುವರಿದರೆ, ಸಸ್ಯಾಹಾರ ಮಾತ್ರ ಪಡೆಯುತ್ತಾರೆ. ಅಕ್ಟೋಬರ್ 3ರಂದು ಕೂಡಾ ಪ್ರಯಾಣ ಮುಂದುವರಿಸುವುದಾದರೆ ಮತ್ತೆ ಮಾಂಸಾಹಾರ ಮೆನುವಿನಲ್ಲಿ ಸೇರಲಿದೆ.
ಸ್ಟಫ್ಡ್ ಪರೋಟಾ, ಕುಲ್ಚಾ, ಪನೀರ್ ಖಾದ್ಯಗಳು ಮತ್ತು ಹಲವು ಸಿಹಿತಿನಸುಗಳು ಮೆನುವಿನಲ್ಲಿ ಅಂದು ಸೇರಿರುತ್ತವೆ. ಕೇಂದ್ರೀಯ ರೈಲ್ವೆ ಹಾಗೂ ಪಶ್ಚಿಮ ರೈಲ್ವೆ ಗಾಂಧಿ ಜಯಂತಿ ಅಂಗವಾಗಿ ಡಿಜಿಟಲ್ ಮ್ಯೂಸಿಯಂ ಆರಂಭಿಸಲು ಹಾಗೂ ಸ್ವಚ್ಛತಾ ಅಭಿಯಾನ ಕೈಗೊಳ್ಳಲೂ ನಿರ್ಧರಿಸಿವೆ. ಸ್ವಚ್ಛತಾ ಪಕ್ವಾಡ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 2ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ರೈಲ್ವೆ ಆವರಣ ಸ್ವಚ್ಛತೆಗೆ ಒತ್ತು ನೀಡಲಾಗುತ್ತಿದೆ.