ಸಾವಿನ ಆಯ್ಕೆಯೇ ಕೊನೆಯ ದಾರಿಯಾಗದಿರಲಿ

Update: 2018-09-11 18:36 GMT

ವಿಶ್ವದಲ್ಲಿ ಪ್ರತಿ 60 ಸೆಕೆಂಡ್‌ಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿ ದ್ದಾರೆ ಮತ್ತು ವರ್ಷವೊಂದರಲ್ಲಿ ಏನಿಲ್ಲವೆಂದರೂ 10ರಿಂದ 12 ಲಕ್ಷ ಮಂದಿ ಆತ್ಮಹತ್ಯೆ ಮಾಡುತ್ತಿದ್ದಾರೆ. ಜೀವನದಲ್ಲಿ ಜಿಗುಪ್ಸೆ, ಬದುಕಿನಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ನಷ್ಟ, ವಿದ್ಯಾಭ್ಯಾಸದಲ್ಲಿ ಅನುತ್ತೀರ್ಣ, ಕೆಲಸದಲ್ಲಿ ಒತ್ತಡ ಹೀಗೆ ಹತ್ತು ಹಲವು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. 15-20 ವರ್ಷದೊಳಗಿನವರಲ್ಲಿ ಸಾವಿಗೆ ಎರಡನೇ ಅತೀ ದೊಡ್ಡ ಕಾರಣ ಆತ್ಮಹತ್ಯೆ ಎಂಬುದು ಬಹಳ ಕಳವಳಕಾರಿ ಅಂಶವಾಗಿದೆ.

ಯಾರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? 

* ಮನೋರೋಗ ಹೊಂದಿದವರು ಉದಾಹರಣೆಗೆ ಖಿನ್ನತೆ, ಸ್ಕ್ರಿರೆಫ್ರೀನಿಯಾ ಇತ್ಯಾದಿ ಮಾನಸಿಕ ರೋಗದಿಂದ ಬಳಲುತ್ತಿರುವವರು.

* ಮದ್ಯಪಾನ ಮತ್ತು ಮಾದಕ ದ್ರವ್ಯ ವ್ಯಸನಿಗಳು ಆತ್ಮಹತ್ಯೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

* ಈ ಹಿಂದೆ ಆತ್ಮಹತ್ಯೆಗೆ ಪ್ರಯತ್ನಿಸಿದವರು, ಮಗದೊಮ್ಮೆ ಆತ್ಮಹತ್ಯೆ ಮಾಡುವ ಸಾಧ್ಯತೆ ಹೆಚ್ಚು.

* ಜೀವನದಲ್ಲಿ ಅತೀ ಹೆಚ್ಚು ಒತ್ತಡದ ಸನ್ನಿವೇಶಗಳನ್ನು ಎದುರಿಸುತ್ತಿರು ವವರು. ಉದಾಹರಣೆಗೆ ವ್ಯಾಪಾರದಲ್ಲಿ ನಷ್ಟ, ಉದ್ಯೋಗ ಸಿಗದಿರುವುದು, ಆಟದಲ್ಲಿ ಸೋಲು, ವಿದ್ಯಾಭ್ಯಾಸ ಹಿನ್ನೆಲೆ, ಮಾನಹಾನಿಯಾದ ಸಂದರ್ಭ ಗಳು ಇತ್ಯಾದಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತದೆ.

* ಅತೀ ಹತ್ತಿರದ ಸಂಬಂಧಿಗಳ ಸಾವು, ಪ್ರೇಮದಲ್ಲಿ ವೈಫಲ್ಯ ಮುಂತಾದವುಗಳಿಂದ ಭಾವನ್ಮಾಕವಾಗಿ ವೇದನೆ ಹೆಚ್ಚಾದಾಗ ಆತ್ಮಹತ್ಯೆಯಲ್ಲಿ ಪರ್ಯಾವಸಾನವಾಗುತ್ತದೆ.

* ಕ್ಯಾನ್ಸರ್ ಮುಂತಾದ ಗುಣಪಡಿಸಲಾಗದ ಮಾರಣಾಂತಿಕ ಕಾಯಿಲೆ, ಏಡ್ಸ್ ಕಾಯಿಲೆ ಅಥವಾ ತಡೆದುಕೊಳ್ಳಲಾರದ ನೋವುಗಳು ಕೂಡ ಆತ್ಮಹತ್ಯೆಗೆ ಕಾರಣವಾಗುತ್ತದೆ.

* ಕೆಲಸದ ವಾತಾವರಣದಲ್ಲಿನ ವಿಪರೀತವಾದ ಒತ್ತಡ ಕೂಡ ಆತ್ಮಹತ್ಯೆಗೆ ಕಾರಣವಾಗುತ್ತದೆ. ಉದಾಹರಣೆಗೆ ಟೆಕ್ಕಿಗಳು (ಕಂಪ್ಯೂಟರ್ ಇಂಜಿನಿಯರ್‌ಗಳು) ಬಹಳಷ್ಟು ಕೆಲಸದ ಒತ್ತಡ ಮತ್ತು ಖಿನ್ನತೆಯಿಂದ ಪಾರಾಗಲು ಆತ್ಮಹತ್ಯೆಯ ದಾರಿ ಕಂಡುಕೊಳ್ಳುತ್ತಾರೆ.

* ಕ್ಷುಲ್ಲಕ ಕಾರಣಗಳು ಮತ್ತು ಮಕ್ಕಳಾಟಿಕೆ ಕೂಡ ಆತ್ಮಹತ್ಯೆಯಲ್ಲಿ ಅಂತ್ಯ ಕಾಣಬಹುದು. ಉದಾ: ಟಿವಿ ನೋಡಲು ಜಗಳ, ರಿಮೋಟ್ ಕೊಡಲಿಲ್ಲ ಎಂಬ ಜಗಳ ಇತ್ಯಾದಿ.

ಹೇಗೆ ಗುರುತಿಸಬಹುದು?
* ಋಣಾತ್ಮಕವಾಗಿ ಮಾತನಾಡುವುದು. ನಾನು ಬದುಕಲೇ ಬಾರದು, ನಾನು ಹುಟ್ಟಬಾರದಿತ್ತು ಎಂದು ಪದೇ ಪದೇ ಪರಿತಪಿಸುವುದು.

* ಸಾವಿನ ಬಗ್ಗೆ ಹೆಚ್ಚು ಆಸಕ್ತಿ, ಮಾತುಕತೆ, ಬರವಣಿಗೆ, ಎಲ್ಲವೂ ಸಾವಿನ ಸುತ್ತವೇ ಗಿರಕಿ ಹೊಡೆಯುತ್ತಿರುತ್ತದೆ.

* ಒಮ್ಮಿಂದೊಮ್ಮೆಲೇ ವಿಲ್ ಬರೆಯುವುದು, ಸಾಲ ತೀರಿಸುವುದು ಮತ್ತು ದಾನ ಮಾಡುವುದು ಇತ್ಯಾದಿ ವಿಲಕ್ಷಣ ಚಟುವಟಿಕೆಗಳು ಕೂಡ ಆತ್ಮಹತ್ಯೆಯ ಮುನ್ಸೂಚನೆಯಾಗಿರುತ್ತದೆ.

* ಯಾರೊಂದಿಗೂ ಬೆರೆಯದೆ ಒಂಟಿಯಾಗಿ ಇರುವುದು, ಅತಿಯಾದ ಮದ್ಯಪಾನ, ಧೂಮಪಾನ ಎಲ್ಲವೂ ಹೆಚ್ಚಿನ ಮಾನಸಿಕ ಒತ್ತಡದ ಸಂದರ್ಭದಲ್ಲಿ ಕಂಡುಬರುವ ಸೂಚನೆಗಳು.

* ಭವಿಷ್ಯದ ಬಗ್ಗೆ ವಿಪರೀತವಾಗಿ ಅನಗತ್ಯವಾಗಿ ಚಿಂತಿಸುವುದು. ತನ್ನ ಸಮಸ್ಯೆಗೆ ಪರಿಹಾರವೇ ಇಲ್ಲ ಎಂದು ಆಕಾಶವೇ ಕಳಚಿಬಿದ್ದಂತೆ ವರ್ತಿಸುವುದು ಕೂಡ ಅತ್ಮಹತ್ಯೆಯ ಮುನ್ಸೂಚನೆಯಾಗಿರುತ್ತದೆ.

ನಾವೇನು ಮಾಡಬೇಕು?
* ಋಣಾತ್ಮಕ ಚಿಂತನೆ ಇರುವ ವ್ಯಕ್ತಿಗಳ ಬಗ್ಗೆ ಅಸಡ್ಡೆ ಬೇಡ. ಅವರ ಬಗ್ಗೆ ಕನಿಕರ ಸಹಾನೂಭೂತಿ ತೋರಿಸಬೇಕು. ಒಂದು ಒಳ್ಳೆಯ ಮಾತು ಅಥವಾ ಸಾಂತ್ವನದಿಂದ ಒಂದು ಜೀವ ಉಳಿಯಲೂಬಹುದು.

* ನಿಮ್ಮ ಮನೆಯಲ್ಲಿ ಈ ರೀತಿಯ ಖಿನ್ನತೆ ಇರುವ ವ್ಯಕ್ತಿ ಇದ್ದಲ್ಲಿ, ಯಾವುದೇ ಕಾರಣಕ್ಕೂ ಒಬ್ಬಂಟಿಯಾಗಿ ಇರಲು ಬಿಡಬೇಡಿ. ಯಾವತ್ತೂ ಅಂತಹ ವ್ಯಕ್ತಿಗಳ ಮೇಲೆ ಒಂದು ಕಣ್ಣು ಇಡಬೇಕು. ಅಂತಹ ವ್ಯಕ್ತಿಗಳಿಗೆ ಸುಲಭವಾಗಿ ಹರಿತ ಆಯುಧ, ಹಗ್ಗ, ಬಳ್ಳಿ ಅಥವಾ ವಿಷಕಾರಿ ಔಷಧಿ ಸುಲಭವಾಗಿ ಸಿಗದಂತೆ ನೋಡಿಕೊಳ್ಳಿ.

* ಯಾವ ಕಾರಣಕ್ಕಾಗಿ ವ್ಯಕ್ತಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಅದಕ್ಕೆ ಪೂರಕವಾದ ಚಿಕಿತ್ಸೆ ನೀಡಬೇಕು. ಮನೋವೈದ್ಯರ ಬಳಿ ತೋರಿಸಿ ಆಪ್ತ ಸಮಾಲೋಚನೆ ಮಾಡಿಸಿ, ಸಾಕಷ್ಟು ಪ್ರೀತಿ, ಆದರ, ಧೈರ್ಯ ಮತ್ತು ಸಾಂತ್ವನದ ನುಡಿ ಹೇಳಿ ಅವರನ್ನು ಉಲ್ಲಸಿತರಾಗಿರುವಂತೆ ನೋಡಿಕೊಳ್ಳಬೇಕು.

ಕೊನೆಮಾತು
  ಆತ್ಮಹತ್ಯೆ ಮಹಾಪಾಪ ಎಂದು ಬಲ್ಲವರು ಪದೇ ಪದೇ ಹೇಳುವ ಮಾತು. ಅದರೆ ಮನಸ್ಸಿನ ತೊಳಲಾಟ, ವಿಪರೀತ ನೋವು ಹತಾಶೆ ಯಿಂದಾಗಿ ಮನದ ಭಾವನೆಗಳೇ ಭಾರವಾದಾಗ, ಭವಿಷ್ಯದ ಬಗ್ಗೆ ಜಿಗುಪ್ಸೆ ಹುಟಿ,್ಟ ಬದುಕೇ ಯಾತನಾಮಯವಾದಾಗ, ತಮ್ಮ ಅಸ್ತಿತ್ವವೇ ಅರ್ಥಹೀನವೆನಿಸಿ ಜನರು ಆತ್ಮಹತ್ಯೆಯಂತಹ ಕೆಲಸಕ್ಕೆ ಮುಂದಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಯುವಜನತೆೆ ಹೆಚ್ಚು ಹೆಚ್ಚು ಈ ಆತ್ಮಹತ್ಯೆಗೆ ಮುಂದಾಗುತ್ತಿರುವುದು ನಮ್ಮ ಸಮಾಜ ಎತ್ತಕಡೆಗೆ ಸಾಗುತ್ತಿದೆ ಎಂಬುದರ ಮುನ್ಸೂಚನೆ ಎಂದರೂ ತಪ್ಪಾಗಲಾರದು.

ಇಂದಿನ ವೇಗದ ಧಾವಂತದ, ಸ್ಪರ್ಧಾತ್ಮಕ ಮತ್ತು ಯಾಂತ್ರಿಕ ಬದುಕಿನಲ್ಲಿ ಎಲ್ಲವೂ ಕಣ್ಣು ಮಿಟುಕಿಸುವುದರೊಳಗೆ ಆಗಿ ಹೋಗುತ್ತದೆ. ಆತಂಕ, ಖಿನ್ನತೆ, ಅತಿಯಾದ ಒತ್ತಡ, ಡೈವೋರ್ಸ್, ವರದಕ್ಷಿಣೆ, ಕೌಟುಂಬಿಕ ಹಿಂಸೆ, ಪ್ರೀತಿ ಪ್ರೇಮದ ವೈಫಲ್ಯ, ವ್ಯಾಪಾರದಲ್ಲಿ ನಷ್ಟ, ವಿವಾಹೇತರ ಸಂಬಂಧಗಳು, ಅರ್ಥಿಕ ಅಡಚಣೆ, ವಿದ್ಯಾಭ್ಯಾಸದಲ್ಲಿ ಅನುತ್ತೀರ್ಣ, ನಿರುದ್ಯೋಗ, ಕಾಡುವ ಕಾಯಿಲೆ, ಮಕ್ಕಳಾಗದ ಕೊರಗು ಹೀಗೆ ನೂರಾರು ಕಾರಣಗಳು ಆತ್ಮಹತ್ಯೆಗೆ ಪ್ರಚೋದನೆ ನೀಡಲೂಬಹುದು.

ಇಂತಹ ವ್ಯಕ್ತಿಗಳನ್ನು ಗುರುತಿಸಿ ಸಮಾಜ ಒಂದು ಕ್ಷಣ ಅಂತಹ ವ್ಯಕ್ತಿಗಳಿಗೆ ಒಂದೆರಡು ಸಾಂತ್ವನದ ಸಿಹಿ ನುಡಿ ಹೇಳಿ ಸಂತೈಸಿದಲ್ಲಿ ಒಂದು ಕ್ಷಣದ ಅಚಾತುರ್ಯವನ್ನು ತಡೆಯಬಹುದು. ಸಾಯಲು ನೂರು ಮಾರ್ಗವಿದ್ದರೆ ಬದುಕಲು ಸಾವಿರ ಮಾರ್ಗವಿದೆ ಎಂಬ ಸತ್ಯವನ್ನು ಯುವಜನರು ಅರ್ಥಮಾಡಿಕೊಳ್ಳಬೇಕು. ಬದುಕಿ, ಸಾಧಿಸಿ ತೋರಿಸಬೆಕಾದ ಹೊತ್ತಲ್ಲಿ ಕ್ಷುಲ್ಲಕ ನೋವಿಗಾಗಿ ಸಾವಿಗೆ ಶರಣಾಗಿ ಹೇಡಿಗಳಾಗುವ ಬದಲು, ಛಲದಿಂದ ಜೀವನದ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಜೀವನದಲ್ಲಿ ಏನಾದರೂ ಸಾಧಿಸಿ ತೋರಿಸುವ ಗಟ್ಟಿತನವನ್ನು ಯುವಜನರು ಮೈಗೂಡಿಸಿಕೊಳ್ಳಬೇಕು ಹಾಗಾದಲ್ಲಿ ಮಾತ್ರ ಸುಂದರ ಸುದೃಢ ಸಮಾಜ ನಿರ್ಮಾಣವಾಗಬಹುದು.

Writer - ಡಾ. ಮುರಲೀ ಮೋಹನ್, ಚೂಂತಾರು

contributor

Editor - ಡಾ. ಮುರಲೀ ಮೋಹನ್, ಚೂಂತಾರು

contributor

Similar News