ಬೆಂಗಳೂರು: ಭೀಕರ ರಸ್ತೆ ಅಪಘಾತಕ್ಕೆ ನಾಲ್ವರು ಬಲಿ

Update: 2018-09-12 14:56 GMT

ಬೆಂಗಳೂರು, ಸೆ.12: ಬಿಎಂಟಿಸಿ ಬಸ್‌ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಇಲ್ಲಿನ ಎಚ್‌ಎಎಲ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ನಗರದ ನಿವಾಸಿಗಳಾದ ರೀನಾ, ನಿರ್ಮಲಾ, ಚಾಲಕ ನವೀನ್ ಹಾಗೂ ಎಲ್ಲಸಮ್ಮ ಎಂಬುವರು ಮೃತಪಟ್ಟಿರುವುದಾಗಿ ಸಂಚಾರ ವಿಭಾಗದ ಡಿಸಿಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

ಬುಧವಾರ ಮಧ್ಯಾಹ್ನ ನಗರದ ಹೊರ ವಲಯದಿಂದ ಬರುತ್ತಿದ್ದ ಕಾರು ದೊಡ್ಡನಕುಂದಿ ಬಳಿ ಬಿಎಂಟಿಸಿ ಬಸ್‌ಗೆ ಏಕಾಏಕಿ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಐವರಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮತ್ತೊಬ್ಬಾಕೆ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಾಯಗೊಂಡ ಶ್ರೀಜಾ ಎಂಬುವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನ ಅತಿ ವೇಗವೆ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಈ ಸಂಬಂಧ ಎಚ್‌ಎಎಲ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News