ಸ್ವಂತ ಜಮೀನಿಲ್ಲದೆ ಪತ್ನಿಯ ಮೃತದೇಹವನ್ನು ಮನೆಯೊಳಗೆ ದಫನ ಮಾಡಿದ ಪತಿ

Update: 2018-09-13 15:02 GMT

ಬಿಹಾರ, ಸೆ.13: ಸ್ವಂತ ಜಮೀನಿಲ್ಲದ ಕಾರಣ ವ್ಯಕ್ತಿಯೊಬ್ಬರು ತನ್ನ ಪತ್ನಿಯ ಮೃತದೇಹವನ್ನು ಮನೆಯೊಳಗೆ ದಫನ ಮಾಡಿರುವ ಘಟನೆ ಬಿಹಾರದ ಮಾದೇಪುರ ಜಿಲ್ಲೆಯಲ್ಲಿ ನಡೆದಿದೆ.

ಹರಿನಾರಾಯಣ ಋಷಿದೇವ್ ಎಂಬವರು ತಮ್ಮ ಪತ್ನಿಯ ಮೃತದೇಹವನ್ನು ತನ್ನ ಮನೆಯೊಳಗೆ ದಫನ ಮಾಡಿದ್ದಾರೆ. ಜಿಲ್ಲೆಯ ಸಾರ್ವಜನಿಕ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಅಗತ್ಯ ಸೌಲಭ್ಯಗಳು ಇರಲಿಲ್ಲ. ಮಾತ್ರವಲ್ಲ ಇವರ ಸಮುದಾಯಕ್ಕೆ ಸ್ಮಶಾನವೂ ಇಲ್ಲ. ಆದ್ದರಿಂದ ಅನಿವಾರ್ಯವಾಗಿ ಹರಿನಾರಾಯಣ ತನ್ನ ಪತ್ನಿಯ ಅಂತಿಮ ವಿಧಿವಿಧಾನಗಳನ್ನು ಮನೆಯೊಳಗೆ ನೆರವೇರಿಸಿದ್ದಾರೆ ಎನ್ನಲಾಗಿದೆ.

ದಿನಗೂಲಿ ಕಾರ್ಮಿಕನಾದ ಹರಿನಾರಾಯಣ ಮಹಾದಲಿತ್ ವಿಭಾಗಕ್ಕೆ ಸೇರಿದವರಾಗಿದ್ದು, ಕುಮಾರಖಂಡ ಬ್ಲಾಕ್‍ನ ಖೇತ್ವಗಾಮ ಗ್ರಾಮದಲ್ಲಿ  ವಾಸಿಸುತ್ತಿದ್ದಾರೆ. ಅತಿಸಾರದಿಂದಾಗಿ ರವಿವಾರ ಇವರ ಪತ್ನಿ ಸಹೋಗ್ಯ ದೇವಿ(35)ಮೃತಪಟ್ಟಿದ್ದರು.

ಸಮಾಜವು ಭೂರಹಿತರಿಗೆ ಸರಿಯಾಗಿ ಜೀವಿಸಲು ಮತ್ತು ಸಾಯಲು ಅವಕಾಶ ನೀಡುತ್ತಿಲ್ಲ ಎಂದು ಹರಿನಾರಾಯಣ ಹೇಳುತ್ತಾರೆ.  ತನ್ನಂತೆ ಇತರ ಯಾರಿಗೂ ಈ ಸ್ಥಿತಿ ಬರಬಾರದು. ಆದ್ದರಿಂದ ಎಲ್ಲ ಪಂಚಾಯತ್‍ಗಳಲ್ಲಿಯೂ ತನ್ನ ಸಮುದಾಯದವರಿಗೆ ಸ್ಮಶಾನ ಇರಬೇಕೆಂದು ಅವರು ಆಗ್ರಹಿಸಿದರು. ದಮನಿತ ಮತ್ತು ಹಿಂದುಳಿದ ಸಮುದಾಯಕ್ಕೆ ಸಮಾಧಾನದಿಂದ ಸಾಯುವ ಹಕ್ಕು ಕೂಡ ಇಲ್ಲ ಎಂದು ಈ ಘಟನೆಗೆ ಸಂಬಂಧಿಸಿ ಇಲ್ಲಿನ ಮಾಜಿ ಗ್ರಾಮ ಪಂಚಾಯತ್ ಮುಖ್ಯಸ್ಥ ಬೆಚ್ಚನ್ ಋಷಿದೇವ್ ಖೇದ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News