ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಅಕ್ಟೋಬರ್ 3ಕ್ಕೆ ಉಪ ಚುನಾವಣೆ

Update: 2018-09-14 15:12 GMT

ಬೆಂಗಳೂರು, ಸೆ. 14: ರಾಜ್ಯ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಅಕ್ಟೋಬರ್ 3ರಂದು ಉಪ ಚುನಾವಣೆ ನಡೆಯಲಿದೆ. ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ.ಜಿ.ಪರಮೇಶ್ವರ್, ಕೆ.ಎಸ್.ಈಶ್ವರಪ್ಪ ಹಾಗೂ ವಿ.ಸೋಮಣ್ಣ ಅವರ ರಾಜೀನಾಮೆಯಿಂದ ತೆರವಾದ ಹಿನ್ನೆಲೆಯಲ್ಲಿ ಈ ಉಪ ಚುನಾವಣೆ ನಡೆಯುತ್ತಿದೆ.

ಚುನಾವಣೆಗೆ ಸಂಬಂಧಿಸಿದಂತೆ ಸೆ.14ರಂದು ಅಧಿಸೂಚನೆ ಹೊರಬಿದ್ದಿದ್ದು ನಾಮಪತ್ರಗಳನ್ನು ಸಲ್ಲಿಸಲು ಸೆ.22 ಕೊನೆಯ ದಿನ. ನಾಮಪತ್ರಗಳ ಪರಿಶೀಲನೆ ಸೆ.24ಕ್ಕೆ ನಡೆಯಲಿದ್ದು, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಸೆ.26 ಕೊನೆಯ ದಿನ. ಮತದಾನ (ಅವಶ್ಯಕತೆ ಇದ್ದಲ್ಲಿ) ಅಕ್ಟೋಬರ್ 3ರ ಬೆಳಗ್ಗೆ 9ಗಂಟೆಯಿಂದ ಸಂಜೆ 4ಗಂಟೆ ವರೆಗೆ ನಡೆಯಲಿದೆ.

ಅದೇ ದಿನ ಸಂಜೆ 5ಗಂಟೆಗೆ ಮತಗಳ ಎಣಿಕೆ ನಡೆಯಲಿದೆ. ವಿಧಾನಸಭೆಯ ಜಂಟಿ ಕಾರ್ಯದರ್ಶಿ ಎಂ.ಎಸ್.ಕುಮಾರಸ್ವಾಮಿ ಚುನಾವಣಾಧಿಕಾರಿಯಾಗಿ ಹಾಗೂ ಅಧೀನ ಕಾರ್ಯದರ್ಶಿ ಬಿ.ಎಸ್.ಮಹಾಲಿಂಗೇಶ್ ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ.

ಚುನಾವಣೆಗೆ ಸ್ಪರ್ಧಿಸಲಿಚ್ಛಿಸುವ ಅಭ್ಯರ್ಥಿಗಳು ಸೆ.14ರಿಂದ 22ರ ವರೆಗೆ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯವರ ಕಚೇರಿಯಲ್ಲಿ ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 3ಗಂಟೆಯ ವರೆಗೆ ನಾಮಪತ್ರಗಳನ್ನು ಸಲ್ಲಿಬಹುದಾಗಿದೆ.

ಸೆ.16ರಂದು ಮತ್ತು ಸೆ.21ರಂದು ಸಾರ್ವತ್ರಿಕ ರಜಾ ದಿನಗಳಾಗಿರುವುದರಿಂದ ಆ ದಿನಗಳಂದು ನಾಮಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ. ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ನಾಮಪತ್ರದ ದಸ್ತಾವೇಜನ್ನು ನಿಗದಿತ ನಮೂನೆ 2ರಡಿಯಲ್ಲಿ ಸಲ್ಲಿಸಬೇಕು ಮತ್ತು ಅವರ ಉಮೇದುವಾರಿಕೆಗೆ ಸೂಚಕರಾಗಿ, ಕನಿಷ್ಠ 10 ಮಂದಿ ಶಾಸಕರ ಸಹಿ ಮಾಡಿರಬೇಕು.

ಈ ಸಂಬಂಧದಲ್ಲಿ 1951ನೆ ಇಸವಿಯ ಪ್ರಜಾಪ್ರಾತಿನಿಧ್ಯ ಅಧಿನಿಯಮದ 34(1) (ಬಿ)ಯೊಂದಿಗೆ ಓದಲಾದ ಪ್ರಕರಣ 39(2)ಕ್ಕೆ ಅಭ್ಯರ್ಥಿಗಳ ಗಮನವನ್ನು ಸೆಳೆಯಲಾಗಿದೆ. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ನಾಮಪತ್ರದೊಂದಿಗೆ 5ಸಾವಿರ ರೂ.ಗಳನ್ನು ಹಾಗೂ ಇತರೆಯವರು 10 ಸಾವಿರ ರೂ.ಗಳನ್ನು ಠೇವಣಿಯಾಗಿ ಇಡಬೇಕಾಗುತ್ತದೆ.

ಉಪ ಚುನಾವಣೆಯನ್ನು ಅಕ್ಟೋಬರ್ 3ರ ಬೆಳಗ್ಗೆ 9ಗಂಟೆಯಿಂದ ಸಂಜೆ 4ಗಂಟೆಯವರೆಗೆ ವಿಧಾನಸೌಧದ ಕೊಠಡಿ ಸಂಖ್ಯೆ-106ರಲ್ಲಿ ನಡೆಸಲಾಗುವುದು. ಹೆಚ್ಚಿನ ವಿವರಕ್ಕೆ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News