ಬೆಂಗಳೂರು: ರಸ್ತೆ ಅಪಘಾತಕ್ಕೆ ಇಬ್ಬರು ಬಲಿ; ಓರ್ವನಿಗೆ ಗಂಭೀರ ಗಾಯ

Update: 2018-09-14 15:24 GMT

ಬೆಂಗಳೂರು, ಸೆ.14: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕ ಸರಕಾರದಿಂದ ವಿಶೇಷ ಅಭಿಯೋಜಕರಾಗಿ ನೇಮಕಗೊಂಡಿದ್ದ ವಕೀಲ ಭವಾನಿ ಸಿಂಗ್ ಪುತ್ರ ಸೇರಿ ಇಬ್ಬರು ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರು ಗ್ರಾಮಾಂತರದ ಆವಲಹಳ್ಳಿ ಬಳಿ ಲಾರಿಗೆ ಕಾರೊಂದು ಢಿಕ್ಕಿ ಪಡೆದ ಪರಿಣಾಮ ಭವಾನಿ ಸಿಂಗ್ ಪುತ್ರ ಅಮರ್‌ನಾಥ್ ಸಿಂಗ್ (32) ಹಾಗೂ ಅವರ ಸ್ನೇಹಿತ ಜಸ್ವಂತ್ ಸಿಂಗ್ (30) ಮೃತಪಟ್ಟಿದ್ದು, ಘಟನೆಯಲ್ಲಿ ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಬೆಂಗಳೂರು ನಗರದ ಕಡೆಯಿಂದ ಹೊಸಕೋಟೆ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಮೊದಲು ಬೈಕಿಗೆ ಢಿಕ್ಕಿ ಹೊಡೆದಿದೆ. ನಂತರ ಎದುರಿನಲ್ಲಿ ಬರುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಢಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಅಮರ್‌ನಾಥ್ ಸಿಂಗ್ ಮತ್ತು ಸ್ನೇಹಿತ ಜಸ್ವಂತ್ ಸಿಂಗ್ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಆವಲಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News