ನಾನೇಕೆ ರಾಜೀನಾಮೆ ನೀಡಲಿ?: ಮಾಧ್ಯಮದವರಿಗೆ ಸಚಿವ ರಮೇಶ್ ಜಾರಕಿಹೊಳಿ ಪ್ರಶ್ನೆ
Update: 2018-09-17 13:28 GMT
ಬೆಂಗಳೂರು, ಸೆ.17: ಸಚಿವನಾಗಿ ನಾನು ಶಾಸಕರ ಸಭೆ ನಡೆಸುವುದರಲ್ಲಿ ತಪ್ಪೇನಿದೆ? ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ. ನಾನು ಏಕೆ ರಾಜೀನಾಮೆ ನೀಡಲಿ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ದಿನಗಳಿಂದಲೂ ಶಾಸಕರು ನನ್ನ ಭೇಟಿಗೆ ಬರುತ್ತಿದ್ದಾರೆ. ಒಬ್ಬ ಸಚಿವನಾಗಿ ನಾನು ಶಾಸಕರ ಸಭೆ ನಡೆಸುವುದರಲ್ಲಿ ತಪ್ಪೇನಿದೆ ಎಂದು ಮರು ಪ್ರಶ್ನೆ ಹಾಕಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ಹಿಂದಿರುಗಿರುವುದರಿಂದ ಅವರನ್ನು ಭೇಟಿ ಮಾಡಿ ಶುಭ ಕೋರಲು ಹೋಗುತ್ತಿದ್ದೇನೆ. ಅವರು ನನಗೆ ಬಂದು ನೋಡುವಂತೆ ಆಹ್ವಾನ ನೀಡಿಲ್ಲ. ನಾನಾಗಿಯೇ ಅವರ ಭೇಟಿಗೆ ತೆರಳುತ್ತಿದ್ದೇನೆ. ಅದರಲ್ಲಿ ವಿಶೇಷತೆ ಏನಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.